ಆತ್ಮಹತ್ಯೆ ಮಾಡಿಕೊಂಡ ಆಧ್ಯಾತ್ಮಿಕ ಗುರು ಭಯ್ಯು ಮಹಾರಾಜ್‌ ಅವರ ಆತ್ಮಹತ್ಯಾ ಪತ್ರದ 2ನೇ ಪುಟ ದೊರಕಿದ್ದು, ತಮ್ಮೆಲ್ಲ ಆಸ್ತಿಯನ್ನು ಶಿಷ್ಯ ವಿನಾಯಕನಿಗೆ ನೀಡಬೇಕು ಎಂದು ಬರೆದಿದ್ದಾರೆ. 

ಇಂದೋರ್‌: ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಆಧ್ಯಾತ್ಮಿಕ ಗುರು ಭಯ್ಯು ಮಹಾರಾಜ್‌ ಅವರ ಆತ್ಮಹತ್ಯಾ ಪತ್ರದ 2ನೇ ಪುಟ ದೊರಕಿದ್ದು, ತಮ್ಮೆಲ್ಲ ಆಸ್ತಿಯನ್ನು ಶಿಷ್ಯ ವಿನಾಯಕನಿಗೆ ನೀಡಬೇಕು ಎಂದು ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ಭಯ್ಯು ಮಹಾರಾಜ್‌ ಅವರು ಬೃಹತ್‌ ಆಶ್ರಮ, ಮನೆ, ಅಪಾರ ಆಸ್ತಿಪಾಸ್ತಿ, ಬ್ಯಾಂಕ್‌ ಬ್ಯಾಲೆನ್ಸ್‌, ಠೇವಣಿ ಹೊಂದಿದ್ದಾರೆ. ‘ಈ ಎಲ್ಲ ಸಮಸ್ತ ಆಸ್ತಿಪಾಸ್ತಿಗಳು ನನ್ನ ಶೀಷ್ಯ ವಿನಾಯಕನಿಗೆ ಹಸ್ತಾಂತರವಾಗಬೇಕು. ಆತನ ಮೇಲೆ ನನಗೆ ವಿಶ್ವಾಸವಿದೆ’ ಎಂದ ಆತ್ಮಹತ್ಯಾ ಪತ್ರದ 2ನೇ ಪುಟದಲ್ಲಿದೆ.

ಇದರೊಂದಿಗೆ ತಮ್ಮ ಮೊದಲ ಪತ್ನಿಯ ಪುತ್ರಿ ಕುಹು ಹಾಗೂ 2ನೇ ಪತ್ನಿ ಆಯುಷಿ ಅವರಿಗೆ ಯಾವುದೇ ಆಸ್ತಿ ಕೊಡಲು ಭಯ್ಯು ಮಹಾರಾಜ್‌ಗೆ ಮನಸ್ಸಿರಲಿಲ್ಲ ಎಂದು ವಿದಿತವಾಗುತ್ತದೆ.

ಮಗಳು ಕುಹು ಹಾಗೂ ಪತ್ನಿ ಆಯುಷಿ ಅವರ ಮಧ್ಯೆ ಮನಸ್ತಾಪವಿತ್ತು. ಆನೇಕ ಬಾರಿ ಜಗಳವೂ ಆಗಿತ್ತು. ಇದು ಈಗ ಸ್ಫೋಟಗೊಂಡಿದ್ದು, ‘ತಂದೆಯ ಆತ್ಮಹತ್ಯೆಗೆ ಆಯುಷಿಯೇ ಕಾರಣ’ ಎಂದು ಕುಹು ಆಪಾದಿಸಿದ್ದಾಳೆ. ಆದರೆ ಭಯ್ಯು ಅವರ ಈ ಸ್ಥಿತಿಗೆ ಕುಹು ಕಾರಣ ಎಂದು ಆಯುಷಿ ಪ್ರತ್ಯಾರೋಪ ಮಾಡಿದ್ದಾರೆ.

ಈ ನಡುವೆ, ಆತ್ಮಹತ್ಯೆಗೂ 23 ತಾಸು ಮುನ್ನ ಭಯ್ಯು ಅವರು ಹೋಟೆಲೊಂದರಲ್ಲಿ ಆಯುಷಿ ಜತೆ ಕುಳಿತು ಚರ್ಚಿಸುತ್ತಿರುವ ದೃಶ್ಯ ಸಿಸಿಟೀವಿಯಲ್ಲಿ ಸೆರೆಸಿಕ್ಕಿದೆ. ಇದರಲ್ಲಿ ಏನೋ ಬಿರುಸಿನ ಚರ್ಚೆ ನಡೆದಂತೆ ಕಂಡುಬರುತ್ತಿದ್ದು, ಕೊನೆಗೆ ಭಯ್ಯು ಒಬ್ಬರೇ ಎದ್ದು ಹೊರಟು ಹೋಗುತ್ತಾರೆ. ಕುಟುಂಬದಲ್ಲಿ ಆಸ್ತಿಗಾಗಿ ಇದ್ದ ಕಲಹವೇ ಭಯ್ಯು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.