ನೇಪಾಳದಲ್ಲಿ ಭಾರೀ ಗುಡುಗು ಸಹಿತ ಮಳೆ: ಚಂಡಮಾರುತಕ್ಕೆ 27 ಜನ ಬಲಿ!
ನೇಪಾಳದಲ್ಲಿ ಗುಡುಗು ಸಹಿತ ಭಾರೀ ಮಳೆ, ಚಂಡಮಾರುತ| ಭಾರೀ ಚಂಡಮಾರುತಕ್ಕೆ ಇದುವರೆಗೂ 27 ಬಲಿ| ಬಾರಾ ಮತ್ತು ಪರ್ಸಾ ಜಿಲ್ಲೆಯಲ್ಲಿ ರುದ್ರನರ್ತನ ತೋರುತ್ತಿರುವ ಚಂಡಮಾರುತ| ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕಕ್ಕೆ ಕಾರ್ಯಾಚರಣೆಗೆ ಕರೆ| ಕಾರ್ಯಾಚರಣೆ ಆದೇಶ ನೀಡಿದ ಪ್ರಧಾನಿ ಕೆ.ಪಿ.ಶರ್ಮಾ|
ಕಠ್ಮಂಡು(ಏ.01): ನೇಪಾಳದಲ್ಲಿ ಮತ್ತೆ ಪ್ರಕೃತಿ ವಿಕೋಪ ತಾಂಡವವಾಡುತ್ತಿದ್ದು, ಗುಡುಗು ಸಹಿತ ಭಾರೀ ಮಳೆಯಿಂದಾಗಿ ಚಂಡಮಾರುತ ಸೃಷ್ಟಿಯಾಗಿದೆ.
ಭಾರೀ ಮಳೆಗೆ ಇದುವರೆಗೂ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 400ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ದಕ್ಷಿಣ ಭಾಗದ ಬಾರಾ ಜಿಲ್ಲೆ ಹಾಗೂ ಪರ್ಸಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿ ಸಾವು ನೋವು ಸಂಭವಿಸಿದೆ. ಅಲ್ಲದೇ ಪರ್ಸಾ ಜಿಲ್ಲಾ ಪೋಲೀಸ್ ಅಧಿಕಾರಿಗಳು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಕಠ್ಮಂಡುವಿನಿಂದ ಸುಮಾರು 128 ಕಿಲೋಮೀಟರ್ ದೂರದಲ್ಲಿರುವ ಬಾರಾ ಜಿಲ್ಲೆಯಲ್ಲಿ ಚಂಡಮಾರುತ ತನ್ನ ರುದ್ರನರ್ತನ ತೋರಿದೆ. ಇನ್ನು ಪ್ರಧಾನಿ ಕೆ.ಪಿ.ಶರ್ಮಾ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕಕ್ಕೆ ಕಾರ್ಯಾಚರಣೆಗೆ ಕರೆ ನೀಡಿದ್ದಾರೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಭದ್ರತಾ ಸಿಬ್ಬಂದಿಯನ್ನು ಚಂಡಮಾರುತ ಪೀಡಿತ ಪ್ರದೇಶದಲ್ಲಿ ನೆಲೆಗೊಳಿಸಲಾಗಿದೆ ಎಂದು ಸೇನಾ ಮೂಲಳು ತಿಳಿಸಿವೆ.