ಇನ್ನುಮುಂದೆ ರಾಜಧಾನಿ ಬಸ್ ನಿಲ್ದಾಣಗಳಲ್ಲಿ 24 ಗಂಟೆ ಆಹಾರ ಲಭ್ಯ
ಬಹಳ ದಿನಗಳಿಂದ ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರ ಬೇಡಿಕೆಗೆ ಈಡೇರಿಕೆ ಕಂಡಿದ್ದು, ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆಯ ಸ್ಯಾಟ್ಲೈಟ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳ ವ್ಯಾಪ್ತಿಯ ಹೋಟೆಲ್’ಗಳು ದಿನವಿಡಿ ವಹಿವಾಟಿಗೆ ಯಾವುದೇ ನಿರ್ಬಂಧವಿರುವುದಿಲ್ಲ.
ಬೆಂಗಳೂರು(ನ.30): ರಾಜಧಾನಿಯ ಬಸ್ ನಿಲ್ದಾಣಗಳಲ್ಲಿ ತಡರಾತ್ರಿ ಆಹಾರ ಸಿಗದೆ ಪರಿತಪಿಸುವ ನಾಗರಿಕರ `ಹಸಿವು ಮುಕ್ತ'ಕ್ಕೆ ಪರಿಹಾರ ಸಿಕ್ಕಿದ್ದು, ಇನ್ನು ಮುಂದೆ ದಿನದ 24 ತಾಸು ಆಹಾರ ಮಾರಾಟಕ್ಕೆ ಹೋಟೆಲ್’ಗಳಿಗೆ ನಗರ ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದಾರೆ. ಇದರೊಂದಿಗೆ ಬಹಳ ದಿನಗಳಿಂದ ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರ ಬೇಡಿಕೆಗೆ ಈಡೇರಿಕೆ ಕಂಡಿದ್ದು, ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆಯ ಸ್ಯಾಟ್ಲೈಟ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳ ವ್ಯಾಪ್ತಿಯ ಹೋಟೆಲ್’ಗಳು ದಿನವಿಡಿ ವಹಿವಾಟಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇತ್ತೀಚಿನ ಆರ್.ಟಿ. ನಗರದಲ್ಲಿ ನಡೆದಿದ್ದ ಹೋಟೆಲ್ ಮಾಲೀಕನ ಮೇಲೆ ಜೆ.ಸಿ.ನಗರ
ಉಪ ವಿಭಾಗದ ಎಸಿಪಿ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕ ಅನುಕೂಲಕ್ಕೆ ದಿನವಿಡಿ ಹೋಟೆಲ್’ಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬುಧವಾರ `ಕನ್ನಡಪ್ರಭ'ದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು, ಮೆಜೆಸ್ಟಿಕ್ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಓಡಾಟವಿರುವ ಕಡೆ ಆಹಾರ ಮಾರಾಟಕ್ಕೆ ಸಮಯ ನಿರ್ಬಂಧವಿರುವುದಿಲ್ಲ. ಹಸಿದು ಬಂದ ನಾಗರಿಕರಿಗೆ ಆಹಾರ ಪೂರೈಸುವವರೆಗೆ ಪೊಲೀಸರು ಅಡ್ಡಿಪಡಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಮೊದಲಿನಿಂದಲೂ ಮೆಜೆಸ್ಟಿಕ್ ಸೇರಿದಂತೆ ಅಗತ್ಯವಿರುವೆಡೆ ರಾತ್ರಿ ವೇಳೆ ಆಹಾರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ತಡರಾತ್ರಿ ವಹಿವಾಟು ನಡೆಸಲು ಪೊಲೀಸರು ಅಡ್ಡಿಪಡಿಸುತ್ತಾರೆ ಎಂದು ಹೋಟೆಲ್ ಮಾಲೀಕರ ಸಂಘವು ದೂರು ನೀಡಿತು. ಈ ಹಿನ್ನೆಲೆಯಲ್ಲಿ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಆಹಾರ ಮಾರಾಟಕ್ಕೆ ನಿರ್ಬಂಧವಿಲ್ಲ ಎಂದು ಅವರಿಗೆ ಹೇಳಿದ್ದೇವೆ. ಆದರೆ ಈ ನಿಯವು ಕೇವಲ ದರ್ಶಿನಿಗಳಿಗೆ ಮಾತ್ರವೇ ಹೊರತು ಪಂಚಾತಾರ ಹೋಟೆಲ್ ಸೇರಿ ಇತರರಿಗೆ ಅನ್ವಯವಾಗುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ರಾತ್ರಿ 1 ಗಂಟೆವರೆಗೆ ವಹಿವಾಟು: ಹಲವು ವರ್ಷಗಳಿಂದ ಹಿಂದೆ ನಗರ ವ್ಯಾಪ್ತಿಯಲ್ಲಿ ರಾತ್ರಿಯಿಡೀ ಹೋಟೆಲ್’ಗಳ ವಹಿವಾಟಿಗೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಹೋಟೆಲ್ ಮಾಲೀಕರು ಕೋರಿದ್ದರು. ಆದರೆ ಆರಂಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ಮನವಿಗೆ ತಿರಸ್ಕರಿಸಿದ್ದ ಪೊಲೀಸರು, ಕೊನೆಗೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಮೊದಲ ಹಂತವಾಗಿ ವಾರಾಂತ್ಯದಲ್ಲಿ ರಾತ್ರಿ 1ಗಂಟೆವರೆಗೆ ಹೋಟೆಲ್’ಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದ್ದರು. ನಂತರ ಎನ್.ಎಸ್. ಮೇಘರಿಕ್ ಅವರು ಆಯುಕ್ತರಾಗಿದ್ದಾಗ ವಾರ ಪೂರ್ತಿ ರಾತ್ರಿ 1ರವರೆಗೆ ಹೋಟೆಲ್’ಗಳ ವಹಿವಾಟಿಗೆ ಅನುಮತಿ ನೀಡಿದ್ದರು. ಆದರೆ ಈ ನಿಯಮ ಅನ್ವಯದ ವಹಿವಾಟು ನಡೆಸಲು ಪೊಲೀಸರು ಅಡ್ಡಪಡಿಸುತ್ತಿದ್ದಾರೆ ಎಂಬ ಆರೋಪಗಳು ಹೋಟೆಲ್ ಮಾಲೀಕರು ಮಾಡಿದ್ದರು. ಅಲ್ಲದೆ, ಇತ್ತೀಚಿಗೆ ಆರ್.ಟಿ.ನಗರದ ದಿಣ್ಣೂರು ಮುಖ್ಯ ರಸ್ತೆಯಲ್ಲಿ ಹೋಟೆಲ್ ಮಾಲೀಕ ರಾಜೇಶ್ ಶೆಟ್ಟಿ ಮೇಲೆ ಜೆ.ಸಿ. ನಗರದ ಉಪ ವಿಭಾಗದ ಎಸಿಪಿ ಮಂಜುನಾಥ್ ಬಾಬು ಹಲ್ಲೆ ಪ್ರಕರಣವು ಮತ್ತೆ ಪೊಲೀಸರ ವಿರುದ್ಧ ಹೋಟೆಲ್ ಮಾಲೀಕರ ಸಂಘವು ಹೋರಾಟಕ್ಕಿಳಿಯಿತು. ಈ ಘಟನೆ ಬಳಿಕ ಪೊಲೀಸರು ಮತ್ತು ಹೋಟೆಲ್ ಮಾಲೀಕರ ಸಂಘದ ನಡುವಿನ ವಿವಾದ ಪರಿಹಾರಕ್ಕೆ ಮುಂದಾದ ಗೃಹ ಸಚಿವರು, 3 ದಿನಗಳ ಹಿಂದೆ ಪೊಲೀಸ್ ಆಯುಕ್ತರು ಹಾಗೂ ಹೋಟೆಲ್ ಸಂಘದ ಸದಸ್ಯರ ಜತೆ ಸಭೆ ನಡೆಸಿದ್ದರು.