ಸಂಪುಟ ಸೇರುವ ಮುನ್ನವೇ ಸಚಿವರಿಗೆ ಜಗನ್ ವಾರ್ನಿಂಗ್!
ಆಂಧ್ರ ಪ್ರದೇಶದಲ್ಲಿ 20 ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಸಂಪುಟಕ್ಕೆ ಸೇರುವ ಮುನ್ನವೇ ಸಿಎಂ ಖಡಕ್ ವಾರ್ನಿಂಗ್ ನೀಡಿದ್ದಾರೆ.
ವಿಜಯವಾಡ : ಆಂಧ್ರ ಪ್ರದೇಶ ನೂತನ ಮುಖ್ಯಮಂತ್ರಿ ತಮ್ಮ ಸಂಪುಟ ವಿಸ್ತರಣೆಗೆ ಸಜ್ಜುಗೊಂಡಿದ್ದು, 20 ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.
ಅಲ್ಲದೇ ಇದೇ ವೇಳೆ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದೀಗ ಸಂಪುಟ ಸೇರುತ್ತಿರುವ ನೂತನ ಸಚಿವರಿಗೆ ಜಗನ್ ಪ್ರಮಾಣ ವಚನಕ್ಕೂ ಮುನ್ನವೇ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಕೆಲ ಸಂದರ್ಭದಲ್ಲಿ ಮತ್ತೆ ಸಂಪುಟ ಪುನಾರಚನೆಯಾಗಲಿದ್ದು, ಅದಕ್ಕೂ ಸಿದ್ಧರಾಗಿರಬೇಕು ಎಂದು ತಿಳಿಸಿದ್ದಾರೆ. ಎರಡೂವರೆ ವರ್ಷದ ಬಳಿಕ ಸಂಪುಟದಲ್ಲಿ ಶೇ.90 ರಷ್ಟು ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಚಿವರ ಕೆಲಸ , ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಧರಿಸಿ ಈ ಬದಲಾವಣೆಯಾಗುತ್ತದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಯೇ ನಮ್ಮ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಜಗನ್ ಹೇಳಿದ್ದಾರೆ.