ಐಸಿಸ್ ನ ಜಮ್ಮು-ಕಾಶ್ಮೀರ ಘಟಕದ ಜತೆ ನಂಟು ಹೊಂದಿದ್ದ ಇಬ್ಬರು ಯುವಕರನ್ನು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಬಂಧಿಸಲಾಗಿದೆ. ಕಾಶ್ಮೀರಕ್ಕೆ ಮರಳುವ ಸಲುವಾಗಿ ಈ ಇಬ್ಬರೂ ಬಸ್ ಹತ್ತುತ್ತಿದ್ದಾಗ ಕೆಂಪುಕೋಟೆ ಸಮೀಪದ ಜಾಮಾ ಮಸೀದಿ ನಿಲ್ದಾಣದಲ್ಲಿ ಗುರುವಾರ ರಾತ್ರಿ  ಇವರನ್ನು ಬಂಧಿಸಲಾಗಿದೆ. 

ನವದೆಹಲಿ: ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದೆನಿಸಿಕೊಂಡಿರುವ ಐಸಿಸ್ ನ ಜಮ್ಮು-ಕಾಶ್ಮೀರ ಘಟಕದ ಜತೆ ನಂಟು ಹೊಂದಿದ್ದ ಇಬ್ಬರು ಯುವಕರನ್ನು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಬಂಧಿಸಲಾಗಿದೆ. ಜಮ್ಮು-ಕಾಶ್ಮೀರದ ಶೋಪಿಯಾನ್‌ನ ಪರ್ವೇಜ್ (24) ಹಾಗೂ ಜಮ್‌ಶೀದ್ (19) ಬಂಧಿತರು. ಕಾಶ್ಮೀರಕ್ಕೆ ಮರಳುವ ಸಲುವಾಗಿ ಈ ಇಬ್ಬರೂ ಬಸ್ ಹತ್ತುತ್ತಿದ್ದಾಗ ಕೆಂಪುಕೋಟೆ ಸಮೀಪದ ಜಾಮಾ ಮಸೀದಿ ನಿಲ್ದಾಣದಲ್ಲಿ ಗುರುವಾರ ರಾತ್ರಿ 10. 45ರಲ್ಲಿ ಇವರನ್ನು ಬಂಧಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಧಿತರಿಂದ ಎರಡು .32 ಪಿಸ್ತೂಲ್ ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಮೇನಲ್ಲಿ ಕಾಶ್ಮೀರದಿಂದ ದೆಹಲಿ ಮೂಲಕ ಈ ಇಬ್ಬರೂ ಉತ್ತರಪ್ರದೇಶದ ಅಮರೋಹ್‌ಗೆ ತೆರಳಿದ್ದರು. ಇದೀಗ ಕಾಶ್ಮೀರಕ್ಕೆ ತೆರಳಲು ದೆಹಲಿಗೆ ಬಂದಿದ್ದರು. ದೆಹಲಿಯನ್ನು ಪ್ರಯಾಣ ಮಾರ್ಗ ಮಾಡಿಕೊಂಡಿದ್ದ ಇವರ ಮೇಲೆ ಹಲವು ದಿನಗಳಿಂದ ಗುಪ್ತಚರ ಇಲಾಖೆ ಅಧಿಕಾರಿಗಳು ನಿಗಾ ಇಟ್ಟಿದ್ದರು. ಅಂತಿಮವಾಗಿ ಇವರನ್ನು ಗುರುವಾರ ರಾತ್ರಿ ವೇಳೆ ಬಂಧಿಸಲಾಯಿತು.

ಆದರೆ ಇವರಿಗೆ ರಾಜಧಾನಿಯಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಉದ್ದೇಶವಿರಲಿಲ್ಲ ಎಂದು ದೆಹಲಿ ಪೊಲೀಸರು ವಿಶೇಷ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಪರ್ವೇಜ್‌ನ ಸೋದರ ಭಯೋತ್ಪಾದಕನಾಗಿದ್ದು, ಕಳೆದ ಜ. 26ರಂದು ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಗುಂಡಿನ ಚಕಮಕಿ ವೇಳೆ ಹತನಾಗಿದ್ದ. 

ಪರ್ವೇಜ್, ಉತ್ತರಪ್ರದೇಶದ ಅಮರೋಹ ಜಿಲ್ಲೆಯ ಗಜರೋಲಾ ದಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದಾನೆ. ಜಮ್‌ಶೀದ್ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಎನ್‌ಐಎ ಬಂಧನದಲ್ಲಿರುವ ಮೊಹಮ್ಮದ್ ಅಬ್ದುಲ್ಲಾ ಬಾಸಿತ್‌ನ ಚಳವಳಿಯಲ್ಲಿ ಗುರುತಿಸಿಕೊಂಡಿದ್ದಾನೆ. ಈ ಇಬ್ಬರು ದೆಹಲಿಗೆ ಬಂದಿದ್ದು ಇದು ಎರಡನೇ ಬಾರಿ.