ಮತ್ತೆ ಮಳೆಯ ಅಬ್ಬರ : 18 ಬಲಿ
ಒಂದಷ್ಟು ದಿನಗಳ ಕಾಲ ತಣ್ಣಗಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಆರಂಭಿಸಿದ್ದಾರೆ. ಭಾರೀ ಮಳೆಯಿಂದ ಹಲವೆಡೆ ಭೂ ಕುಸಿತ ಸಂಭವಿಸಿದ್ದು ಕೇರಳದಲ್ಲಿ ಒಟ್ಟು 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ತಿರುವನಂತಪುರ : ಒಂದಷ್ಟು ದಿನಗಳ ಕಾಲ ಬಿಡುವು ನೀಡಿದ್ದ ಮುಂಗಾರು ಮಳೆ ಇದೀಗ ಮತ್ತೆ ತನ್ನ ಅಬ್ಬರವನ್ನು ಆರಂಭಿಸಿದೆ. ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, 18 ಮಂದಿ ಸಾವಿಗೀಡಾಗಿದ್ದಾರೆ.
ಹಲವೆಡೆ ಭಾರೀ ಭೂ ಕುಸಿತ ಸಂಭವಿಸಿದೆ. ಇಡುಕ್ಕಿ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಣ್ಣುರಿನಲ್ಲಿ ಇಬ್ಬರು ವಯನಾಡು ಪ್ರದೇಶದಲ್ಲಿ ಓರ್ವ ವ್ಯಕ್ತಿ, ಕೋಚಿಕ್ಕೋಡ್, ಪಾಲಕ್ಕಾಡ್ ಗಳಲ್ಲಿಯೂ ಸಾವಿಗೀಡಾಗಿದ್ದಾರೆ.
ಅಲ್ಲದೇ ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ವ್ಯಕ್ತಿಗಳನ್ನು ರಕ್ಷಣೆ ಮಾಡಲಾಗಿದೆ. ಇಡಮಲಯಾರ್ ಡ್ಯಾಮ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೀರು ತುಂಬಿದ್ದು, 600 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ವಯನಾಡು ಹಾಗೂ ಕೋಜಿಕೋಡ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.