ಬೆಂಗಳೂರು(ಸೆ. 15): ನಾಲ್ಕು ವರ್ಷಗಳ ಹಿಂದೆ ಕೆಲ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲ 13 ಆರೋಪಿಗಳೂ ದೋಷಿಗಳೆಂಬುದು ಸಾಬೀತಾಗಿದೆ. ಎನ್'ಐಎ ವಿಶೇಷ ನ್ಯಾಯಾಲಯವು ಗುರುವಾರ ಈ ತೀರ್ಪು ಹೊರಡಿಸಿದೆ. ಶುಕ್ರವಾರ ಬೆಳಗ್ಗೆ ಅಪರಾಧಿಗಳಿಗೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
2012ರಲ್ಲಿ ಪ್ರತಾಪ್ ಸಿಂಹ, ಪ್ರಮೋದ್ ಮುತಾಲಿಕ್, ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಹಿಂದೂ ಪರ ಮುಖಂಡರ ಹತ್ಯೆಗೆ ಇವರು ಸಂಚು ರೂಪಿಸಿದ್ದರೆನ್ನಲಾಗಿದೆ. ಈ ಪ್ರಕರಣ ಸಂಬಂಧ 13 ಮಂದಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು 2013ರಲ್ಲಿ ಚಾರ್ಜ್'ಶೀಟ್ ಸಲ್ಲಿಸಿದ್ದರು. 14 ಜನರ ವಿರುದ್ಧ ಆರೋಪ ದಾಖಲು ಮಾಡಿತ್ತು. ಈ ಪೈಕಿ ಝಾಕೀರ್ ಎಂಬಾತ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ. ಲಷ್ಕರೆ ತೆಯ್ಯಬಾ ಉಗ್ರ ಸಂಘಟನೆಗೆ ಸೇರಿದವರಾಗಿರುವ ಇವರು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿರುವ ಹಿಂದುತ್ವವಾದಿ ಮುಖಂಡರು ಮತ್ತು ಗಣ್ಯರನ್ನು ಹತ್ಯೆಗೈಯಲು ರಿಯಾದ್'ನಲ್ಲಿ ಸಂಚು ರೂಪಿಸಿದ್ದರೆಂಬ ಮಾಹಿತಿ ಇದೆ. ಸುವರ್ಣನ್ಯೂಸ್'ನ ಮುಖ್ಯಸ್ಥರಾಗಿದ್ದ ವಿಶ್ವೇಶ್ವರ ಭಟ್, ಆಗಿನ ಅಂಕಣಕಾರ ಪ್ರತಾಪ್ ಸಿಂಹ ಮೊದಲಾದವರು ಈ ಉಗ್ರರ ಹಿಟ್ ಲಿಸ್ಟ್'ನಲ್ಲಿದ್ದರೆನ್ನಲಾಗಿದೆ.
ಯಾರಾರು ದೋಷಿಗಳು?
ಶೋಯೆಬ್ ಅಹ್ಮದ್ ಮಿರ್ಜಾ, ಅಬ್ದುಲ್ ಹಕೀಮ್ ಜಮಾದಾರ್, ರಿಯಾಜ್ ಅಹ್ಮದ್ ಬ್ಯಾಹಟ್ಟಿ, ಮೊಹಮ್ಮದ್ ಅಕ್ರಮ್, ಉಬೇದುಲ್ಲಾ ಬಹದ್ದೂರ್, ವಾಹಿದ್ ಹುಸೇನ್, ಜಫರ್ ಇಕ್ಬಾಲ್ ಶೋಲಾಪುರ್, ಮೊಹಮ್ನದ್ ಸಾದಿಕ್, ಮೆಹಬೂಬ್ ಬಾಗಲ್ ಕೋಟ್, ಒಬೈದ್ ಉರ್ ರೆಹಮಾನ್, ಡಾ. ನಯೀಮ್ ಸಿದ್ದಿಕಿ, ಡಾ. ಇಮ್ರಾನ್ ಅಹ್ಮದ್ ಮತ್ತು ಸಯ್ಯದ್ ತಾಂಜಿಮ್ ಅಹ್ಮದ್
