ಭಕ್ತಾದಿಗಳನ್ನು ದೇವಾಲಯಕ್ಕೆ ಕರೆದೊಯ್ಯುತ್ತಿದ್ದ  ವಾಹನವೊಂದು ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 11 ಮಂದಿ ಮೃತಪಟ್ಟಿದ್ದಾರೆ. ಜಮ್ಮು ಕಾಶ್ಮೀರದ ಚೇನಾಬ್ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 

ಜಮ್ಮು : ದೇವಾಲಯಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಸ್ಕಿಡ್ ಆಗಿ ನದಿಗೆ ಉರುಳಿದ ಪರಿಣಾಮ 11 ಮಂದಿ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ಜಮ್ಮು ಕಾಶ್ಮೀರದ ಕಸ್ತ್ವಾರ್ ಜಿಲ್ಲೆಯ ಮಠ ಮಚೈಲ್ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ವಾಹನ ಚೇನಾಬ್ ನದಿಗೆ ಉರುಳಿ ಬಿದ್ದು ಈ ಅನಾಹುತ ಸಂಭವಿಸಿದೆ. 

ಕಿಸ್ತ್ವಾರ ಜಿಲ್ಲಾ ಕೇಂದ್ರದಿಂದ 28 ಕೀ.ಮಿ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ಎಸ್.ಪಿ ವೇದ್ ಹೇಳಿದ್ದಾರೆ. 

ಅವಘಡ ಸಂಭವಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ 11 ಮೃತದೇಹಗಳನ್ನೂ ಕೂಡ ನದಿಯಿಂದ ಹೊರತೆಗೆಯಲಾಗಿದೆ. ಗಾಯಗೊಂಡ ಐದು ವರ್ಷದ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಇದೇ ಪ್ರದೇಶದಲ್ಲಿ ಸಂಭವಿಸಿದ 2ನೇ ಭೀಕರ ಅಪಘಾತ ಇದಾಗಿದೆ ಎಂದು ಡಿಜಿಪಿ ಹೇಳಿದ್ದಾರೆ. ಸೋಮವಾರವೂ ಇಲ್ಲಿ ಅಪಘಾತ ಸಂಭವಿಸಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.