ಒಡಿಶಾದ ಜಜ್‌ಪುರ್ ಪ್ರದೇಶದಲ್ಲಿ ಭಾನುವಾರದಂದು 10 ತುಂಡರಿಸಿದ ಕೈಗಳು ಪತ್ತೆಯಾಗಿವೆ. ಈ ಘಟನೆಯ ಬಳಿಕ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. 

ಒಡಿಶಾದ ಜಜ್‌ಪುರ್ ಪ್ರದೇಶದಲ್ಲಿ ಭಾನುವಾರದಂದು 10 ತುಂಡರಿಸಿದ ಕೈಗಳು ಪತ್ತೆಯಾಗಿವೆ. ಈ ಘಟನೆಯ ಬಳಿಕ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ತುಂಡಾದ ಕೈಗಳು 2006ರಲ್ಲಿ ನಡೆದ ಪೈರಿಂಗ್‌ನಲ್ಲಿ ಸಾವನ್ನಪ್ಪಿದ ಆದಿವಾಸಿ ಜನರದ್ದಾಗಿರಬಹುದು ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಕಾರ್ಯಾಚರಣೆ ಆರಂಭಿಸಿದ್ದಾರೆ.

Add Asianetnews Kannada as a Preferred SourcegooglePreferred

2006ರ ಜನವರಿಯಲ್ಲಿ ಇಲ್ಲಿನ ಕಳಿಂಗ ನಗರದಲ್ಲಿ ನಡೆಯುತ್ತಿದ್ದ ಸ್ಟೀಲ್ ಪ್ಲಾಂಟ್ ನಿರ್ಮಾಣವನ್ನು ವಿರೋಧಿಸಿ ಆದಿವಾಸಿ ಜನರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಫೈರಿಂಗ್ ನಡೆಸಿದ್ದರು. ಈ ಘಟನೆಯಲ್ಲಿ 13ಕ್ಕೂ ಹೆಚ್ಚು ಆದಿವಾಸಿಗಳು ಸಾವನ್ನಪ್ಪಿದ್ದರು. 

ಪತ್ತೆಯಾದ ಕೈಗಳ ಡಿಎನ್‌ಎ ಪರೀಕ್ಷಿಸಲು ಬೇಡಿಕೆ

ಅಂದು ಸಾವನ್ನಪ್ಪಿದ್ದ ಆದಿವಾಸಿಗಳ ಪೋಸ್ಟ್ ಮಾರ್ಟಂ ಕೂಡಾ ಮಾಡಲಾಗಿತ್ತಾದರೂ ಐವರ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಅವರ ಕೈಗಳನ್ನು ತುಂಡರಿಸಿ ಬೆರಳಚ್ಚು ಸಂಗ್ರಹಿಸಿದ್ದರು. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಎರಡು ವರ್ಷಗಳ ಹಿಂದೆ ಕೈಗಳನ್ನು ಆದಿವಾಸಿಗಳ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು, ಅದರೆ ಅವರು ಈ ತುಂಡರಿಸಿದ ಕೈಗಳನ್ನು ಪಡೆಯಲು ನಿರಾಕರಿಸಿದ್ದರು. ಅಲ್ಲದೇ ಕೈಗಳ ಡಿಎನ್‌ಎ ಪರೀಕ್ಷೆ ನಡೆಸುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಇದನ್ನು ಮೆಡಿಕಲ್ ಬಾಕ್ಸ್‌ನಲ್ಲಿ ಹಾಕಿ ಲ್ಯಾಬ್‌ನಲ್ಲಿಡಲಾಗಿತ್ತು. 

ಮೆಡಿಕಲ್ ಬಾಕ್ಸ್ ಕೊಂಡೊಯ್ದವರು ಯಾರು?

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಎಸ್ ಪಿ ಸಿಎಸ್ ಮೀನಾ 'ಶನಿವಾರದಂದು ಕೆಲ ಗೂಂಡಾಗಳು ಲ್ಯಾಬ್‌ನ ಕಿಟಕಿ ಗಾಜುಗಳನ್ನು ಒಡೆದು ಒಳ ನುಗ್ಗಿದ್ದರಲ್ಲದೆ. ಕೈಗಳನ್ನು ಇರಿಸಿದ್ದ ಬಾಕ್ಸ್ ಕೊಂಡೊಯ್ದಿದ್ದರು. ಈ ಬಾಕ್ಸ್‌ನಲ್ಲಿ 10 ಕೈಗಳನ್ನು ಇರಿಸಲಾಗಿತ್ತು. ಅವರೇ ಈ ತುಂಡರಿಸಿದ್ದ ಕೈಗಳನ್ನು ಜಜ್‌ಪುರ್‌ನಲ್ಲಿ ಎಸೆದಿರಬಹುದು' ಎಂದಿದ್ದಾರೆ.

ಸದ್ಯ ಈ ತುಂಡರಿಸಿದ ಕೈಗಳು ಸ್ಥಳೀರ ಕಣ್ಣಿಗೆ ಬಿದ್ದಾಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.