ಬೆನ್ನಿನಿಂದ ಬಂದು ಕುತ್ತಿಗೆ ಮೂಲಕ ಹಾದು ಹೋಗುವ ಮೂಳೆ ಮತ್ತು ಅದರ ಸುತ್ತಮುತ್ತ ಲಿನ ರಚನೆಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಏಕಾಏಕಿ ಕುತ್ತಿಗೆ ತಿರುಗಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗದರ್ಶನ, ತರಬೇತಿ ಇಲ್ಲದೆ ಮಸಾಜ್ ಮಾಡಬಾರದು. ಮಸಾಜ್ ಮಾಡಿಸಿಕೊಳ್ಳುವವರೂ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದ ವೈದ್ಯರು

ಬೆಂಗಳೂರು(ಸೆ.29): ಕ್ಷೌರದ ಅಂಗಡಿಯಲ್ಲಿ ಮಾಡಿಸಿಕೊಂಡ ಕುತ್ತಿಗೆ ಭಾಗದ ಮಸಾಜ್ ಎಡವಟ್ಟಾಗಿ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ನರಕಯಾತನೆ ಕಂಡು ಹೊರಬಂದಿದ್ದಾನೆ. ಚಿಕಿತ್ಸೆ ಪಡೆದು, 2 ತಿಂಗಳ ವಿಶ್ರಾಂತಿ ಬಳಿಕ ಸದ್ಯ ಯುವಕ ಚೇತರಿಸಿಕೊಂಡಿದ್ದು, ಸೂಕ್ತ ತರಬೇತಿ ಇಲ್ಲದ, ವೃತಿಪರ ಅಲ್ಲದವರಿಂದ ಮಸಾಜ್ ಮಾಡಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಹೌಸ್‌ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಬಳ್ಳಾರಿ ಮೂಲದ 30 ವರ್ಷದ ಕಲ್ಲೇಶ್ (ಹೆಸರು ಬದಲಿಸಲಾಗಿದೆ) ಜೀವನ್ಮರಣ ಹೋರಾಟ ನಡೆಸಿ ಪಾರಾಗಿದ್ದಾರೆ. ಕ್ಷೌರಕ್ಕೆ ತೆರಳಿದ್ದಾಗ ಉಚಿತವಾಗಿ ತಲೆಭಾಗದ ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಕ್ಷೌರಿಕ ಕುತ್ತಿಗೆಯನ್ನು ತಿರುಗಿಸಿದ ಕ್ಷಣ ನೋವುಂಟಾಗಿದೆ. ಆದರೆ, ಸರಿಹೋಗಬಹುದು ಎಂದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಆದರೆ, ಒಂದು ಗಂಟೆ ಅಂತರದಲ್ಲಿ ಮಾತನಾಡುವ ಹಾಗೂ ದೇಹದ ಎಡಭಾಗ ಸ್ವಾಧೀನ ಕಳೆದುಕೊಂಡ ಅನುಭವ ಉಂಟಾಗಿದೆ. ಇದರಿಂದ ಆತಂಕಗೊಂಡ ಕಲೇಶ್ ಆ್ಯಸ್ಟರ್ ಆರ್.ವಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. 

ನಾಗಮಂಗಲ ಕೋಮುಗಲಭೆ ಪ್ರಕರಣ: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಬ್ರೈನ್‌ ಸ್ಟ್ರೋಕ್‌ನಿಂದ ಸಾವು

ಕುತ್ತಿಗೆಯನ್ನು ತಿರುಗಿಸಿದ ಪರಿಣಾಮ ಶೀರ್ಷ ಧಮನಿಯಲ್ಲಿ (ಕುತ್ತಿಗೆ ಭಾಗದ ನರ) ನೀರು ತುಂಬಿಕೊಂಡಿರುವುದು ಹಾಗೂ ಮೆದುಳಿನ ಪ್ರಾತಿನಿಧಿಕ ಚಿತ್ರ ಭಾಗಕ್ಕೆ ರಕ್ತ ಸಂಚಾರ ಕಡಿಮೆಯಾಗಿದ್ದರಿಂದ ಪಾರ್ಶ್ವವಾಯುವಿಗೆ ಕಾರಣ ಆಗಿರುವುದನ್ನು ದೃಢಪಡಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಆ್ಯಸ್ಟರ್ ಆರ್.ವಿ ಆಸ್ಪತ್ರೆ ಹಿರಿಯ ನರರೋಗ ತಜ್ಞ ಡಾ| ಶ್ರೀಕಂಠ ಸ್ವಾಮಿ, ಸಾಧಾರಣ ಪಾರ್ಶ್ವವಾಯುವಿಗಿಂತ ಭಿನ್ನವಾದ ಸಮಸ್ಯೆಗೆ ತುತ್ತಾಗಿದ್ದರು. ಬಲವಂತವಾಗಿ ಕುತ್ತಿಗೆ ತಿರುಚಿದ ಕಾರಣ ಈ ಸಮಸ್ಯೆ ಉಂಟಾಗಿತ್ತು. ಕಲೇಶ್‌ಗೆ ರಕ್ತ ತೆಳುವಾಗಿಸುವ ಔಷಧಿಯನ್ನು ನೀಡಿ, ಪಾರ್ಶ್ವವಾಯು ಇನ್ನಷ್ಟು ಹೆಚ್ಚಾಗದಂತೆ ಚಿಕಿತ್ಸೆ ನೀಡಲಾಯಿತು. ಅವರು ಊರಿಗೆ ತೆರಳಿ ಚಿಕಿತ್ಸೆ ಪಡೆದ ಬಳಿಕವೇ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದರು.

ಕುತ್ತಿಗೆ ಮೂಳೆ, ಸೂಕ್ಷ್ಮ 

ಬೆನ್ನಿನಿಂದ ಬಂದು ಕುತ್ತಿಗೆ ಮೂಲಕ ಹಾದು ಹೋಗುವ ಮೂಳೆ ಮತ್ತು ಅದರ ಸುತ್ತಮುತ್ತ ಲಿನ ರಚನೆಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಏಕಾಏಕಿ ಕುತ್ತಿಗೆ ತಿರುಗಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗದರ್ಶನ, ತರಬೇತಿ ಇಲ್ಲದೆ ಮಸಾಜ್ ಮಾಡಬಾರದು. ಮಸಾಜ್ ಮಾಡಿಸಿಕೊಳ್ಳುವವರೂ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.