Asianet Suvarna News Asianet Suvarna News

ಚಿಕ್ಕಮಗಳೂರಿಗೆ ಎತ್ತಿನಹೊಳೆ ಯೋಜನೆ ನೀರು ಬಂದೇ ಬಿಡ್ತು: ಕೆರೆ ಏರಿ ಒಡೆದ್ರೆ 3 ಹಳ್ಳಿಗಳೇ ಜಲಾವೃತ

ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಕೆರೆ. ರಾಜ್ಯದ ಅತೀ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಇದು 13 ವರ್ಷಗಳ ಹಿಂದೆ ಕೋಡಿ ಬಿದ್ದಿದ್ದ ಬೃಹತ್ ಕೆರೆ. 

Yettinahole project water came to Chikkamagaluru and left it 3 villages were flooded when the lake burst gvd
Author
First Published Sep 12, 2024, 10:59 PM IST | Last Updated Sep 12, 2024, 10:59 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.12): ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಕೆರೆ. ರಾಜ್ಯದ ಅತೀ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಇದು 13 ವರ್ಷಗಳ ಹಿಂದೆ ಕೋಡಿ ಬಿದ್ದಿದ್ದ ಬೃಹತ್ ಕೆರೆ. 850 ಎಕರೆ ವಿಸ್ತೀರ್ಣದ ಆ ಕೆರೆ ಕೋಡಿ ಬಿದ್ರೆ 2-3 ವರ್ಷ ಹತ್ತಾರು ಹಳ್ಳಿಯ ಜನ-ಜಾನುವಾರುಗಳಿಗೆ ನೀರಿನ ಬವಣೆಯೇ ಇರಲ್ಲ. ಇಷ್ಟು ದಿನ ಆ ಕೆರೆಗೆ ನೈಸರ್ಗಿಕ ಮಳೆ ನೀರೇ ಆಧಾರವಾಗಿತ್ತು. ಆದ್ರೀಗ, ಎತ್ತಿನಹೊಳೆ ಯೋಜನೆ ಜಾರಿಗೆ ಬಂದ ಒಂದೇ ವಾರಕ್ಕೆ ಕೆರೆ ತುಂಬಿ ಕೋಡಿ ಬಿದ್ದಿದೆ.

ಎತ್ತಿನಹೊಳೆ ಯೋಜನೆ ನೀರು ಬಂದೇ ಬಿಡ್ತು: ದಶಕಗಳ ಕಾಲ ಬರದಿಂದ ತತ್ತರಿಸಿದ್ದ ಜನರಿಗೀಗ ಎತ್ತಿನಹೊಳೆ ಯೋಜನೆಯಿಂದ ಕೆರೆ ತುಂಬಿರುವುದು ಜನರಲ್ಲಿ ಸಂತಸ ಮನೆ ಮಾಡಿದ್ದು ಜೊತೆಗೆ ಆತಂಕವನ್ನು ಕೂಡ ಮೂಡಿಸಿದೆ.ಕಳೆದ ನಾಲ್ಕು ತಿಂಗಳ ಹಿಂದಷ್ಟೆ 24 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ 13 ಕಿ.ಮೀ. ರಸ್ತೆಯಲ್ಲಿ ಕೆರೆ ಏರಿಯೂ ಸುಮಾರು ಎರಡೂವರೆ ಕಿ.ಮೀ. ಇದೆ. ಆದ್ರೆ, ಕೆರೆ ಏರಿಯ ಎರಡೂವರೆ ಕಿ.ಮೀ. ರಸ್ತೆ ಸಂಪೂರ್ಣ ಕಳಪೆಯಿಂದ ಕೂಡಿದ್ದು ಇದು ಸಂಪೂರ್ಣ ಕಳಪೆ ಕಾಮಗಾರಿ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದೀಗ ಕೆರೆಯ ಮತ್ತೊಂದು ಬದಿ ಸಂಪೂರ್ಣ ಕುಸಿದು, ಪಾಳು ಬಿಟ್ಟಿದ್ದು ರಸ್ತೆ ಅಗಲೀಕರಣ, ಕೆರೆ ಏರಿ ಕೆಲಸ ಎಲ್ಲವೂ ಕಳಪೆಯಾಗಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಕೆರೆ ಏರಿ ಒಡೆದ್ರೆ ಮೂರು ಹಳ್ಳಿಗಳೇ ಜಲಾವೃತ: ಇನ್ನು ಈ ಮಾರ್ಗ ಚಿಕ್ಕಮಗಳೂರು-ಮಾಗಡಿ-ಕೈಮರ-ಜಾವಗಲ್ ಸಂಪರ್ಕಿಸುವ ರಸ್ತೆ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಈಗ ಕಳಪೆ ಕಾಮಗಾರಿಯಿಂದ ಬೆಳವಾಡಿ ಕೆರೆ ಏರಿ ಕುಸಿತವಾಗಿದೆ. ಕಾಂಕ್ರೀಟ್ ವಾಲ್ ಕಟ್ಟಿ ಆರೇಳು ಅಡಿ ಅಗಲೀಕರಣವೂ ಆಗಿತ್ತು. ನೀರಿನ ಹರಿವಿನ ಹೊಡೆತಕ್ಕೆ ಮಣ್ಣು ಕುಸಿದಿದೆ. ಕಾಂಕ್ರೀಟ್ ವಾಲ್ ಸುಮಾರು 8-10 ಅಡಿ ದೂರ ಮಣ್ಣಿನ ಸಮೇತ ಕೊಚ್ಚಿ ಹೋಗಿದೆ. ರಸ್ತೆ ಮಧ್ಯೆ ಹಾಗೂ ಏರಿ ಬದಿ ಬಿರುಕು ಕಂಡಿದ್ದು ಯಾವಾಗ ಕುಸಿಯುತ್ತೋ ಅನ್ನೋ ಆತಂಕದಲ್ಲಿ ಹಳ್ಳಿಗರಿದ್ದಾರೆ. ಯಾವಾಗಲೂ ವಾಹನ ಸಂಚಾರವಿರೋ ಸಮಯದಲ್ಲಿ ಕುಸಿತ ಕಂಡು ಅನಾಹುತವಾದ್ರೆ ಯಾರು ಹೊಣೆ ಎಂದು ಸ್ಥಳಿಯರು ಪ್ರಶ್ನಿಸಿದ್ದಾರೆ. 

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇಗುಲಕ್ಕೆ 'ನಿರಂಜನಾ' ಹೆಸರಿನ‌ ಹೊಸ ಅಥಿತಿ: ಇದು ಭಾರತದ ಮೊದಲ ತಾಂತ್ರಿಕ ಆನೆ

ಈ ಕೆರೆ ಏರಿ ಒಡೆದು ಹೋದ್ರೆ ಮೂರು ಹಳ್ಳಿಗಳು ಜಲಾವೃತವಾಗೋದ್ರ ಜೊತೆ ಸಾವಿರಾರು ಎಕೆರೆಯಲ್ಲಿನ ಬೆಳೆಗಳು ಕೊಚ್ಚಿ ಹೋಗಲಿವೆ. ಒಟ್ಟಾರೆ. ಎತ್ತಿನಹೊಳೆ ಯೋಜನೆಯಿಂದ ಹರಿದ ನೀರು ಒಂದೆಡೆ ಸಂತಸ ತಂದ್ರೆ ಮತ್ತೊಂದಡೆ ಕಳಪೆ ಕಾಮಗಾರಿಯಿಂದ ರಸ್ತೆಯೇ ಕೊಚ್ಚಿ ಹೋಗೋ ಹಂತಕ್ಕೆ ತಲುಪಿದೆ. ಸ್ಥಳೀಯರಲ್ಲಿ ಸಂತಸ-ಆಕ್ರೋಶ-ಆತಂಕ ಎಲ್ಲವೂ ಮನೆಮಾಡಿದೆ. ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೂಕ್ತ ರೀತಿಯಲ್ಲಿ ಕೆರೆ ಏರಿಯನ್ನ ಬಂದೋಬಸ್ತ್ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios