ಅಕ್ರಮ ಮದ್ಯ ಮಾರಾಟ ಬಂದ್‌ ಮಾಡುವಂತೆ ಮದ್ಯ ಮಾರಾಟಗಾರನ ಮನೆಗೆ ತಾಲೂಕಿನ ಉಮಳಿ ಕಾಟಾಪುರ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟಿಸಿದರು.

ಕನಕಗಿರಿ (ಡಿ.3) : ಅಕ್ರಮ ಮದ್ಯ ಮಾರಾಟ ಬಂದ್‌ ಮಾಡುವಂತೆ ಮದ್ಯ ಮಾರಾಟಗಾರನ ಮನೆಗೆ ತಾಲೂಕಿನ ಉಮಳಿ ಕಾಟಾಪುರ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟಿಸಿದರು.

Add Asianetnews Kannada as a Preferred SourcegooglePreferred

ಉಮಳಿ ಕಾಟಾಪುರ ಚಿಕ್ಕ ಗ್ರಾಮದಲ್ಲಿ 6 ಅಕ್ರಮ ಮದ್ಯದ ಅಂಗಡಿಗಳಿದ್ದು, ಯುವಕರು, ಹಿರಿಯರು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೇ ಕುಟುಂಬಕ್ಕೆ ನೀಡಬೇಕಾದ ಹಣವನ್ನು ಮದ್ಯದಂಗಡಿಗೆ ಕೊಡುತ್ತಿದ್ದಾರೆ. ಇದರಿಂದಾಗಿ ಹತ್ತಾರು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಅಬಕಾರಿ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡುವ ಮುನ್ನ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವ ಹನುಮಂತ ಅಡವಿ, ರಮೇಶ, ಹನುಮಂತ ಉಪ್ಪಾರ, ಬಸಣ್ಣ ಅಂಗಡಿ, ಮಂಜುನಾಥ ಚಿಪುರ, ಕೆರೆಮ್ಮ, ಹನುಮಂತ ವಾಟರ್‌ಮ್ಯಾನ್‌ ಇವರು ತಮ್ಮ ಅಂಗಡಿಗಳನ್ನು ಬಂದ್‌ ಮಾಡಬೇಕು. ಇಲ್ಲವಾದರೆ ಎರಡ್ಮೂರು ದಿನಗಳಲ್ಲಿ ಪೊಲೀಸರಿಗೆ ದೂರು ನೀಡಿ ಕೇಸ್‌ ದಾಖಲಿಸುವುದಾಗಿ ಗ್ರಾಮದ ಮಹಿಳೆಯರು ಎಚ್ಚರಿಸಿದರು.

ಗಿಡ್ಡಮ್ಮ ಗೊಲ್ಲರ, ಶಿವಮ್ಮ ಉಪ್ಪಾರ, ಹುಲಿಗೆಮ್ಮ ಬಡಿಗೇರ, ದುರುಗಮ್ಮ ಬಡಿಗೇರ, ಯಲ್ಲಮ್ಮ ದೊಡ್ಮನಿ, ಶಾಮೀದಬೀ, ದೊಡ್ಡಮ್ಮ ಉಪ್ಪಾರ, ಅಮರಮ್ಮ ತಳವಾರ, ಶಿವಮ್ಮ ಪೂಜಾರಿ, ತಂಗಡೆಮ್ಮ ಸೇರಿದಂತೆ ಇತರರಿದ್ದರು.

ಅಕ್ರಮ ಮದ್ಯ ಮಾರಾಟ ತಡೆಯಲು ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮಹಿಳೆಯರ ಮೊರೆ

ಕುಡಿತಕ್ಕೆ ಬಲಿಯಾಗಿರುವ ಯುವಕ/ಹಿರಿಯರು ಹೊಲ, ಮನೆ ಮಾರಾಟಕ್ಕೆ ಮುಂದಾಗಿದ್ದಾರೆ. ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಹೆಣ್ಣುಮಕ್ಕಳು ಬೀದಿಗೆ ಬಂದಿದ್ದಾರೆ. ಗ್ರಾಮದ ಶಾಲಾ ಆವರಣದಲ್ಲಿಯೂ ಮದ್ಯದ ಪೌಚ್‌, ಬಾಟಲಿ, ಪ್ಲಾಸ್ಟಿಕ್‌ ಗ್ಲಾಸ್‌ ಬಿಸಾಡುತ್ತಿದ್ದಾರೆ. ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗುವುದು.

ಫಕೀರಮ್ಮ, ಗ್ರಾಪಂ ಸದಸ್ಯೆ