ತಾಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಶಿಂಷಾ ನದಿಯ ತಟದಲ್ಲಿ ಇಂದು ಬೆಳಗ್ಗೆ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ವಿಷ್ಣುವಿನ ವಿಗ್ರಹವೊಂದು ಪತ್ತೆಯಾಗಿದೆ.

 ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಶಿಂಷಾ ನದಿಯ ತಟದಲ್ಲಿ ಇಂದು ಬೆಳಗ್ಗೆ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ವಿಷ್ಣುವಿನ ವಿಗ್ರಹವೊಂದು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಬೆಳಗ್ಗೆ ಎಂದಿನಂತೆ ಗುಡ್ಡೇನಹಳ್ಳಿ ಗ್ರಾಮದ ಯೋಗೀಶ್‌ ಎಂಬುವವರು ತಮ್ಮ ತೋಟದ ಸಾಲಿಗೆ ತೆರಳಿದ್ದರು. ಆ ವೇಳೆ ತಮ್ಮ ಜಮೀನಿನ ಬಳಿ ಇದ್ದ ತೊರೆಯ ಬಳಿಯೂ ಹೋಗಿದ್ದರು. ಆ ವೇಳೆ ನೀರಿನೊಳಗೆ ಸುಮಾರು ನಾಲ್ಕು ಎತ್ತರದ ವಿಷ್ಣುವಿನ ವಿಗ್ರಹ ಇರುವುದು ಕಂಡುಬಂದಿದೆ. ಕೂಡಲೇ ತಮ್ಮ ಗ್ರಾಮದ ಯುವಕರಿಗೆ ಸುದ್ದಿ ಮುಟ್ಟಿಸಿ, ಟ್ರ್ಯಾಕ್ಟರ್‌ ಸಹಾಯದಿಂದ ಗ್ರಾಮದ ಆಂಜನೇಯ ದೇವಾಲಯಕ್ಕೆ ಈ ವಿಗ್ರಹವನ್ನು ಸ್ಥಳಾಂತರಿಸಲಾಯಿತು.

ಕಳೆದ ಒಂದೆರೆಡು ತಿಂಗಳ ಹಿಂದೆಯೂ ಭಾರಿ ನೀರು ಈ ಪ್ರದೇಶದಲ್ಲಿ ಹರಿದಿತ್ತು. ಈ ಹಿಂದೆಂದೂ ಕಾಣದ ಪ್ರವಾಹ ಆಗಿತ್ತು. ನದಿ ತಟದ ಸುತ್ತಮುತ್ತಲ ಪ್ರದೇಶ ನೀರಿನಿಂದ ಆವೃತವಾಗಿತ್ತು. ಈ ಸಂಧರ್ಭದಲ್ಲಿ ನೀರಿನೊಳಗೆ ಹುದುಗಿಹೋಗಿದ್ದ ಈ ವಿಗ್ರಹ ಹೊರಬಂದಿರಬಹುದು ಎಂದು ಶಂಕಿಸಲಾಗಿದೆ.

ತಮ್ಮ ಗ್ರಾಮದ ಬಳಿ ವಿಷ್ಣುವಿನ ವಿಗ್ರಹ ಸಿಕ್ಕಿರುವುದು ಸಂತಸದ ಸಂಗತಿಯೇ. ಈ ವಿಗ್ರಹ ಯಾವ ಕಾಲದ್ದು, ಎಷ್ಟುವರ್ಷಗಳ ಹಿಂದಿನದು ಎಂಬುದು ತಿಳಿಯದಾಗಿದೆ. ಈ ವಿಗ್ರಹ ಸಿಕ್ಕಿರುವ ಕುರಿತು ಗ್ರಾಮಸ್ಥರೆಲ್ಲಾ ಒಂದೆಡೆ ಸೇರಿ ಚರ್ಚಿಸಿ ಈ ವಿಗ್ರಹವನ್ನು ಏನು ಮಾಡುವುದು ಎಂದು ನಿರ್ಧರಿಸಲಾಗುವುದು ಎಂದು ಮುಕಂದ ತಿಳಿಸಿದರು.

ಇತ್ತೀಚೆಗಷ್ಠೆ ಶೆಟ್ಟಿಗೊಂಡನಹಳ್ಳಿಯಲ್ಲಿ ಪ್ರಾರಂಭಿಸಿರುವ ಶ್ರೀ ಹಳ್ಳಿಕಾರ್‌ ಮಠಕ್ಕೆ ಈ ವಿಗ್ರಹವನ್ನು ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ವಿಷ್ಣುವನ ವಿಗ್ರಹ ಸಿಕ್ಕಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಮಂದಿ ವಿಗ್ರಹದ ದರ್ಶನ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

ಪಿಡಿಓ ಅಭಿಲಾಷ್‌ ಸೇರಿದಂತೆ ಹಲವಾರು ಮಂದಿ ಆಗಮಿಸಿ ವಿಗ್ರಹ ವೀಕ್ಷಣೆ ಮಾಡಿದರು.