ಕರ್ನಾಟಕ ಹೈಕೋರ್ಟ್ ನ್ಯಾಯಾಂಗ ಇಲಾಖೆಯಲ್ಲಿ ಖಾಲಿಯಿರುವ 33 ನ್ಯಾಯಾಧೀಶೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಚೈತ್ರಾ ನ್ಯಾಯಾಧೀಶೆ ಹುದ್ದೆಗೆ ಅರ್ಜಿ ಹಾಕಿದ್ದರು. ಏಪ್ರಿಲ್‌ನಲ್ಲಿ ನಡೆದ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದರು. ಬಳಿಕ ಜುಲೈನಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 

ವಿಜಯಪುರ(ಅ.03): ತಮ್ಮ 26ನೇ ಕಿರಿಯ ವಯಸ್ಸಿನಲ್ಲಿ ಯುವತಿಯೊಬ್ಬರು ನ್ಯಾಯಾಧೀಶೆ ಹುದ್ದೆ ಅಲಂಕರಿಸುವ ಕನಸು ನನಸಾಗಿದೆ. ಜಿಲ್ಲೆಯ ಇಂಡಿ ತಾಲೂಕಿನ ನಂದರಗಿ ಗ್ರಾಮದ ಚೈತ್ರಾ ವಿ. ಕುಲಕರ್ಣಿ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿದ್ದಾರೆ. 

ಇವರು ಸದ್ಯಕ್ಕೆ ಬಾಗಲಕೋಟೆಯಲ್ಲಿ ವಾಸವಾಗಿದ್ದಾರೆ. ಬಿಎ, ಎಲ್‌ಎಲ್‌ಬಿ ಹಾಗೂ ಎಲ್‌ಎಲ್‌ಎಂ ಬಳಿಕ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಲೇ ಅತ್ಯಂತ ಕಿರಿ ವಯಸ್ಸಿನಲ್ಲೇ ದಿವಾಣಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. ಇವರ ತಂದೆ ಡಾ. ವಸಂತ ಕುಲಕರ್ಣಿ ನಗರದ ಸಬಲಾ ಸಂಸ್ಥೆಯ ನಿರ್ದೇಶಕ ಹಾಗೂ ಬಾಗಲಕೋಟೆ ಎಸ್‌ಆರ್‌ಎನ್ ಕಲಾ ಮತ್ತು ಎಂಬಿಎಸ್ ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕರೂ ಆಗಿದ್ದಾರೆ.

ಕರ್ನಾಟಕ ಹೈಕೋರ್ಟ್ ನ್ಯಾಯಾಂಗ ಇಲಾಖೆಯಲ್ಲಿ ಖಾಲಿಯಿರುವ 33 ನ್ಯಾಯಾಧೀಶೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಚೈತ್ರಾ ನ್ಯಾಯಾಧೀಶೆ ಹುದ್ದೆಗೆ ಅರ್ಜಿ ಹಾಕಿದ್ದರು. ಏಪ್ರಿಲ್‌ನಲ್ಲಿ ನಡೆದ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದರು. ಬಳಿಕ ಜುಲೈನಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ ಸೆ.19ರಂದು ನಡೆದ ಸಂದರ್ಶನದಲ್ಲಿ ತೇರ್ಗಡೆಯಾಗುವ ಮೂಲಕ ದಿವಾಣಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. 

ನ್ಯಾಯಾಧೀಶೆ ಹುದ್ದೆಗೆ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ 946 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 86 ಅಭ್ಯರ್ಥಿಗಳು ಪರೀಕ್ಷೆ ಪಾಸಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಇದರಲ್ಲಿ 33 ಅಭ್ಯರ್ಥಿಗಳು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಚೈತ್ರಾ ಸೇರಿ ಆಯ್ಕೆಯಾದ ಅಭ್ಯರ್ಥಿಗಳು ಸ್ಥಳ ಆದೇಶಕ್ಕೆ ಕಾಯುತ್ತಿದ್ದಾರೆ.