ಮಂಗಳೂರಿನ ಮಸೀದಿ ರಹಸ್ಯ ಪತ್ತೆಗೆ VHP ಅಷ್ಟಮಂಗಳ!
* ಮಂಗಳೂರಿನಲ್ಲೂ ಮಸೀದಿಯ ಸತ್ಯಾಸತ್ಯತೆಯ ವಿವಾದ
* ಅಷ್ಟಮಂಗಳ ಪ್ರಶ್ನಾಗೆ ಸಿದ್ಧತೆ ನಡೆಸಿದ ಹಿಂದೂ ಪರ ಸಂಘಟನೆಗಳು
* ಅಷ್ಟಮಂಗಳ ಮೂಲಕ ಮಸೀದಿ ರಸಹ್ಯ ಪತ್ತೆಗೊಳಿಸಲು ತಯಾರಿ
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು(ಮೇ.16): ಕಾಶಿ ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದದ ಬೆನ್ನಲ್ಲೇ ಮಂಗಳೂರಿನಲ್ಲೂ ಮಸೀದಿಯ ಸತ್ಯಾಸತ್ಯತೆಯ ವಿವಾದವೊಂದು ಭುಗಿಲೇಳೋ ಸಾಧ್ಯತೆಯಿದ್ದು, ಹಿಂದೂ ಪರ ಸಂಘಟನೆಗಳು ಅಷ್ಟಮಂಗಳ ಪ್ರಶ್ನಾ ಚಿಂತನೆ ಮೂಲಕ ಮಂಗಳೂರಿನ ಮಸೀದಿಯೊಂದರ ರಹಸ್ಯ ಪತ್ತೆಗೆ ಮುಂದಾಗಿದೆ.
ಮಂಗಳೂರಿನ ಮಳಲಿ ಮಸೀದಿ ರಹಸ್ಯ ಪತ್ತೆಗೆ ಅಷ್ಟಮಂಗಳ ಪ್ರಶ್ನೆ ನಡೆಯಲಿದ್ದು, ಕೇರಳದ ಪ್ರಖ್ಯಾತ ಪುದುವಾಳ್ ಗಳ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಿಂತನೆ ನಡೆಸಲಾಗಿದೆ. ಮಂಗಳೂರಿನ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯನ್ನು ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನ ಮಾದರಿಯ ಗುಡಿ ಪತ್ತೆಯಾಗಿತ್ತು. ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ ನವೀಕರಣ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ತಂದಿರೋ ವಿಎಚ್ ಪಿ, ಇದೀಗ ಕಾನೂನು ಹೋರಾಟದ ಮಧ್ಯೆಯೇ ದೇವರ ಅಸ್ತಿತ್ವ ಪತ್ತೆಗೆ ಅಷ್ಟಮಂಗಳ ಪ್ರಶ್ನೆಗೆ ಮುಂದಾಗಿದೆ.
"
ಮಸೀದಿ ಜಾಗದಲ್ಲಿ ಶಿವ ದೇವಾಲಯ ಇದ್ದ ಬಗ್ಗೆ ಹಿಂದೂ ಸಂಘಟನೆಗಳು ವಾದ ಮಾಡ್ತಿದ್ದು, ಹೀಗಾಗಿ ಅಷ್ಟಮಂಗಳ ಪ್ರಶ್ನೆ ಚಿಂತನೆ ಮೂಲಕ ರಹಸ್ಯ ಪತ್ತೆಗಿಳಿದ ಹಿಂದೂ ಸಂಘಟನೆಗಳು ಧಾರ್ಮಿಕ ಸಾಕ್ಷ್ಯ ಪತ್ತೆ ಬಳಿಕ ಐತಿಹಾಸಿಕ ಪುರಾವೆ ಸಂಗ್ರಹಿಸಲು ಪ್ಲಾನ್ ಮಾಡಿದೆ. ಅಷ್ಟಮಂಗಳ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ಯೋಜನೆ ರೂಪಿಸಿದೆ. ಈ ಮಧ್ಯೆ ಮುಂದಿನ ವಾರ ಅಧಿಕಾರಿಗಳ ಮಟ್ಟದಲ್ಲೂ ಡಿಸಿ ಸಭೆ ನಡೆಸಲಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಳಲಿ ಮಸೀದಿ ಸಂಬಂಧ ಮಹತ್ವದ ಸಭೆ ನಡೆಯಲಿದೆ.
ಅಷ್ಟಮಂಗಳದಿಂದ ರಹಸ್ಯ ಪತ್ತೆ ಸಾಧ್ಯವಾ?
ಸ್ವರ್ಣಾದಿ ಎಂಟು (8) ದ್ರವ್ಯಗಳನ್ನು ಯೋಗ್ಯ ತಿಥಿಗಳಲ್ಲಿ ಪೂಜಿಸಿ ಜ್ಯೋತಿಷ್ಯ ಫಲ ಹೇಳುವುದೇ ಅಷ್ಟ ಮಂಗಲ ಪ್ರಶ್ನೆ. ಜ್ಯೋತಿಷ್ಯದಲ್ಲಿ ಇದೊಂದು ನಿಗೂಢ ಶಾಸ್ತ್ರ ಸಂಪತ್ತು. ದೀರ್ಘ ಕಾಲದ ಸಮಸ್ಯೆಗಳಿಗೂ, ದೇವಳ ವಿಷಯಗಳಿಗೂ, ಗುಪ್ತ ವಿಚಾರ ತಿಳಿಯುವುದಕ್ಕೆ ಮಾತ್ರ ಇದನ್ನು ಬಳಸಲಾಗುತ್ತದೆ. ಹೀಗಾಗಿ ಮಸೀದಿ ರಹಸ್ಯದ ಪತ್ತೆಗೆ ಹಿಂದೂ ಸಂಘಟನೆಗಳು ಅಷ್ಟಮಂಗಳ ಚಿಂತನೆ ನಡೆಸಲು ಮುಂದಾಗಿದೆ. ಮಸೀದಿ ಇರೋ ಜಾಗದ ಸಮೀಪದ ಯಾವುದಾದರೊಂದು ಜಾಗದಲ್ಲಿ ಪ್ರಶ್ನೆಯಿಟ್ಟು ಆ ಜಾಗದ ಸ್ಥಳ ಪುರಾಣ, ಧಾರ್ಮಿಕ ಇತಿಹಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸೋದು ಇದರ ಉದ್ದೇಶ.
ಮಸೀದಿ ಭಾಗದಲ್ಲಿ ಅಥವಾ ಸಮೀಪದಲ್ಲಿ ಯಾವುದಾದರೂ ಹಿಂದೂ ಧಾರ್ಮಿಕ ಸ್ಥಳಗಳು ಈ ಹಿಂದೆ ಇದ್ದು, ಸದ್ಯ ಅದು ನಾಶವಾಗಿದ್ದರೆ ಅದು ಅಷ್ಟಮಂಗಳ ಚಿಂತನೆ ವೇಳೆ ಬೆಳಕಿಗೆ ಬರೋ ಸಾಧ್ಯತೆ ಇದೆ. ಒಂದು ಸಣ್ಣ ಎಳೆ ಸಿಕ್ಕರೂ ಆ ಮೂಲಕ ಸ್ಥಳದ ಇತಿಹಾಸದ ಉತ್ಖನನ ನಡೆಸೋದು ಹಿಂದೂ ಸಂಘಟನೆಗಳು ರೂಪಿಸಿರೋ ಪ್ಲಾನ್. ಆದ್ರೆ ಸದ್ಯ ಈ ವಿಚಾರ ಕಾನೂನು ಹೋರಾಟದಲ್ಲಷ್ಟೇ ಬಗೆ ಹರಿಯಬೇಕಿದೆ. ಮಸೀದಿ ಆಡಳಿತ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಪೂರಕ ದಾಖಲೆ ಸಲ್ಲಿಸಲು ಎಲ್ಲಾ ತಯಾರಿ ನಡೆಸಿದೆ.