ರಾಜ್ಯದಲ್ಲಿ  ಕರ್ಫ್ಯೂ ಹಿನ್ನೆಲೆ  ತರಕಾರಿ ಹೂ ಹಣ್ಣು ಮಾರಾಟಗಾರರಿಗೆ ಬೆಳಗ್ಗೆ 10ರವರೆಗೆ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು ಈ ಸಂಬಂಧ ಉಳಿದ ತರಕಾರಿ ಹೂ ಹಣ್ಣುಗಳನ್ನು ರಸ್ತೆಗೆಸೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಬೆಂಗಳೂರು (ಏ.25): ಕರ್ಫ್ಯೂ ಹಿನ್ನೆಲೆಯಲ್ಲಿ ಹೂ, ಹಣ್ಣು, ತರಕಾರಿ ವ್ಯಾಪಾರಕ್ಕೆ ಬೆಳಗ್ಗೆ 6 ಗಂಟೆ ಇಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಆ ಸಮಯದಲ್ಲಿ ವ್ಯಾಪಾರಕ್ಕಾಗಿ ತಂದಿರುವ ಹೂ, ಹಣ್ಣು, ತರಕಾರಿ ವ್ಯಾಪಾರವಾಗದೇ ಆಕ್ರೋಶಗೊಂಡ ರೈತರು ಇನ್ನೂ ಒಂದಷ್ಟುಸಮಯ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಕೇಳಿದ್ದಾರೆ. ಆದರೆ, ಪೊಲೀಸರು ಹೆಚ್ಚುವರಿ ಸಮಯ ನೀಡಲಿಲ್ಲ. ಇದರಿಂದ ಕ್ರುದ್ಧರಾದ ರೈತರು ಮಾರಾಟವಾಗದ ಹೂ, ತರಕಾರಿಯನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿಯಲ್ಲಿ ತರಕಾರಿ ಮಾರಾಟವಾಗದೇ ಕಂಗಾಲಾದ ಬೀದಿ ಬದಿ ವ್ಯಾಪಾರಸ್ಥರು ವಿಧಿ ಇಲ್ಲದೇ ತರಕಾರಿಯನ್ನು ರಸ್ತೆ ಮೇಲೆಯೇ ಎಸೆದು ಆಕ್ರೋಶ ವ್ಯಕ್ತಪಡಿಸಿದರು. 10 ಗಂಟೆಯ ನಂತರ ಪೊಲೀಸರು ವ್ಯಾಪಾರ ವಹಿವಾಟು ಬಂದ್‌ ಮಾಡಿ ಮನೆಗಳಿಗೆ ತೆರಳುವಂತೆ ಸೂಚಿಸಿದರು. ಇದರಿಂದ ಬೇಸತ್ತು ತರಕಾರಿ ವ್ಯಾಪಾರಸ್ಥರು ರಸ್ತೆಯ ಮೇಲೆಯೇ ತರಕಾರಿ ಎಸೆದು ಮನೆಗೆ ಹೊರಟುಹೋದರು.

ಬೆಂಗಳೂರು: ಒಂದೇ ದಿನ 149 ಮಂದಿ ಸಾವು, ಸಾವಿನಲ್ಲೂ ಕೊರೋನಾ ದಾಖಲೆ..! .

ತುಮಕೂರು ಹೊರವಲಯದ ಅಂತರಸನಹಳ್ಳಿ ಮಾರುಕಟ್ಟೆಬಂದ್‌ ಆದ ಹಿನ್ನೆಲೆಯಲ್ಲಿ ಮಾರಾಟಕ್ಕೆ ತಂದಿದ್ದ ಹೂ ಅನ್ನು ರೈತರು ಸುರಿದ್ದಿದ್ದಾರೆ. ಹೂವು ಕೊಳ್ಳುವವರು ಇಲ್ಲದೆ ನಷ್ಟಉಂಟಾಗಿದೆ. ಮಾರುಕಟ್ಟೆಗೆ ತಂದ ಹೂವನ್ನು ಮತ್ತೆ ವಾಪಸ್‌ ತೆಗೆದುಕೊಂಡು ಹೋದರೆ ತಮ್ಮ ಕೈ ಇಂದಲೇ ಹೋಗುತ್ತೆ ಎಂದು ಹೂವಿನ ಅಂಗಡಿ ಮುಂದೆ ಸುರಿದು ಗ್ರಾಮಗಳಿಗೆ ವಾಪಾಸ್‌ ಹೊರಟು ಹೋದರು. ಬಾಗಲಕೋಟೆಯಲ್ಲಿ ಕೂಡ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.