ಬಿಎಸ್ವೈ ಆಪ್ತನ ಮೇಲೆ ಬಿಜೆಪಿ ಸಭೆಯಲ್ಲೇ ಸೋಮಣ್ಣ ಗರಂ
ಬೆಂಗಳೂರಿಗೆ ಹೊಸ ಮೇಯರ್ ಆಯ್ಕೆ ಸಮಯ ಎದುರಾಗಿರುವ ವೇಳೆ ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ನಾಯಕರ ಜಗಳ ಬೀದಿಗೆ ಬಂದಿದೆ. ಶಾಸಕ ವಿ.ಸೋಮಣ್ಣ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು(ಸೆ.27) ಬಿಜೆಪಿ ನಾಯಕ ವಿ.ಸೋಮಣ್ಣ ತಮ್ಮದೆ ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ ಸೋಮಣ್ಣ ಕೆಲವು ಮುಖಂಡರು, ಕಾರ್ಪೋರೆಟರ್ ವಿರುದ್ಧ ಹರಿಹಾಯ್ದರು.
ಕೆಲವು ಮುಖಂಡರು, ಕಾರ್ಪೊರೇಟರ್ ಗಳು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ಗುಪ್ತವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡ್ತಾರೆ. ಈಗ ನಾವು ಸಭೆ ಕರೆದಾಗ ನಮ್ಮ ಸಭೆಗೆ ಬಂದು ಕೂರುತ್ತಾರೆ. ಇಂಥ ನಡವಳಿಕೆ ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಅತಿ ಸ್ಥಾನ ಗಳಿಸಿದ್ರೂ ನಾವು ಮೇಯರ್ ಸ್ಥಾನ ಕಳೆದುಕೊಂಡಿದ್ದೇವೆ. 37 ಸ್ಥಾನ ವಿಧಾನ ಸಭೆ ಗೆದ್ದವರು ಮುಖ್ಯಮಂತ್ರಿ ಸ್ಥಾನ ಪಡೆದಿದ್ದಾರೆ. 102 ಮಹಾನಗರ ಪಾಲಿಕೆ ಸದಸ್ಯರೂ ಕೂಡ ಅಧಿಕಾರ ಕಳೆದುಕೊಂಡಿದ್ದೇವೆ. ಬರುವ ದಿನಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಆ ಚುನಾವಣೆಯಲ್ಲಾದ್ರೂ ಬಿಜೆಪಿಗೆ ಹೆಚ್ಚು ಸ್ಥಾನ ಪಡೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪಕ್ಷದ ವ್ಯವಸ್ಥೆ ಬದಲಾವಣೆ ಮಾಡಬೇಕು. ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹಿಂದೆ 17 ಸ್ಥಾನ ಗೆದ್ದಿದ್ದಿದ್ದನ್ನು ಈಗ 20 ಸ್ಥಾನಕ್ಕೆ ಏರಿಕೆ ಮಾಡಬೇಕು.
ಬೆಂಗಳೂರಿನಿಂದಲೇ ಈ ಲೋಕಸಭೆ ಚುನಾವಣೆ ಕೆಲಸ ಸಮರೋಪಾಧಿಯಲ್ಲಿ ನಡೆಯಬೇಕು. ಒಂದು ಪಕ್ಷದಲ್ಲಿ ಇದ್ದು ಮತ್ತೊಂದು ಪಕ್ಷಕ್ಕೆ ಬೆಂಬಲಿಸೋರನ್ನ ಹೊರ ಹಾಕಬೇಕಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೂತ್ ಮಟ್ಟದಲ್ಲಿ ಬೂತ್ ಗೆಲ್ಲಿಸಿ, ಬಿಜೆಪಿ ಗೆಲ್ಲುತ್ತೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಅದಕ್ಕಾಗಿ ಇಂದು ಬೆಂಗಳೂರಿನ ನಾಲ್ಕೂ ಲೋಕಸಭೆ ವ್ಯಾಪ್ತಿಯ ಪದಾಧಿಕಾರಿಗಳು, ಕಾರ್ಪೊರೇಟರ್ ಸಭೆ ಮಾಡಿದ್ದೇವೆ. ಇನ್ನು ಮುಂದೆ ನಮ್ಮ ಪಕ್ಷದ ಮುಖಂಡರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪರೋಕ್ಷವಾಗಿ ಬೆಂಗಳೂರು ಸಿಟಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಸ್ ವೈ ಆಪ್ತ ಎಂದು ಗುರುತಿಸಿಕೊಂಡಿರುವ ಚಂದ್ರಶೇಖರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.