ಸೋಮಣ್ಣ, ಜಿಟಿಡಿ ಪ್ರೀತಿಯಿಂದ ಹೊಗಳಿಕೆ : ಸಾರಾ
ವಿ.ಸೋಮಣ್ಣ ಅವರು ನನ್ನನ್ನು ಜ್ಞಾನಿ ಎಂದಿರುವುದು ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಸಂಘಟನಾ ಚತುರ ಎಂದು ಹೊಗಳಿರುವುದು ನನ್ನ ಮೇಲಿನ ಪ್ರೀತಿಯಿಂದ ಎಂದು ಸಾ ರಾ ಮಹೇಶಹ ಹೇಳಿದ್ದಾರೆ.
ಕೆ.ಆರ್.ನಗರ [ಸೆ.08]: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನನ್ನನ್ನು ಜ್ಞಾನಿ ಎಂದಿರುವುದು ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಸಂಘಟನಾ ಚತುರ ಎಂದು ಹೊಗಳಿರುವುದು ನನ್ನ ಮೇಲಿನ ಪ್ರೀತಿಯಿಂದ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
ತಾಲೂಕಿನ ಲಾಳಂದೇವನಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ಈಗ ಶಾಸಕನಾಗಿದ್ದರೂ, ಹಿಂದೆ ಸಚಿವನಾಗಿದ್ದೆ. ಹೀಗಾಗಿ, ಮುಂದೆ ಸಂಸದನಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಎಂಬ ಆಸೆಯಿಂದ ಜಿ.ಟಿ.ದೇವೇಗೌಡರು ಆ ರೀತಿ ಮಾತನಾಡಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಉಳಿದಂತೆ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಎಂಬ ಜಿ.ಟಿ.ದೇವೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಹಿರಿಯ ನಾಯಕರಾದ ಜಿ.ಟಿ.ದೇವೇಗೌಡರು ಬೇಸರ ಮತ್ತು ಸಿಟ್ಟಿನಿಂದ ಆ ರೀತಿ ಹೇಳಿರಬಹುದು. ಹೀಗಾಗಿ, ಪಕ್ಷದ ನಾಯಕರು ಮತ್ತು ಹಿರಿಯರು ಸೇರಿ ಅವರನ್ನು ಸಮಾಧಾನಪಡಿಸುತ್ತೇವೆ ಎಂದರು.
ದಸರಾಗೆ ನನ್ನ ವೈಯುಕ್ತಿಕ ಬೆಂಬಲವಿದೆ. ಆದರೆ, ನಮ್ಮಿಂದ ವಾಮಮಾರ್ಗದಲ್ಲಿ ಬಲವಂತವಾಗಿ ಅಧಿಕಾರ ಕಸಿದಿರುವವರ ಜೊತೆ ಯಾವುದೇ ಕಾರಣಕ್ಕೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.