ರಾಜ್ಯದ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಘೋಷಿಸುವಂತೆ ಆಗ್ರಹಿಸಿ ಕರಾವಳಿಗರ ಅಭಿಯಾನ 

 ಮಂಗಳೂರು (ಅ.01): ರಾಜ್ಯದ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನವನ್ನು (Yakshagana) ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಘೋಷಿಸುವಂತೆ ಆಗ್ರಹಿಸಿ ಕರಾವಳಿಗರ (Coastal) ಅಭಿಯಾನ ಮುಂದುವರಿಯುತ್ತಿದೆ. 

Add Asianetnews Kannada as a Preferred SourcegooglePreferred

ಯಕ್ಷಗಾನದ ವಾಟ್ಸ್ ‌ಆ್ಯಪ್ (WhatsApp) ಗ್ರೂಪ್ ಸೇರಿದಂತೆ ಜಾಲತಾಣಗಳಲ್ಲಿ ಈ ಅಭಿಯಾನಕ್ಕೆ ಕೈಜೋಡಿಸುವಂತೆ ಒಕ್ಕೊರಲ ಒತ್ತಾಯ ಕೇಳಿಬಂದಿದೆ.

ಇದೇ ವೇಳೆ ಯಕ್ಷಗಾನ ಅಭಿಮಾನಿಯೊಬ್ಬರು ಗುರುವಾರ ಟ್ವೀಟ್ (Tweet) ಮೂಲಕವೂ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾಾರೆ. ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಯಕ್ಷಗಾನವನ್ನು ಘೋಷಿಸುವ ಕರಾವಳಿಗರ ಕೂಗನ್ನು ‘ಕನ್ನಡಪ್ರಭ’ ಗುರುವಾರ ವಿಶೇಷ ವರದಿ ಪ್ರಕಟಿಸುವ ಮೂಲಕ ಎಲ್ಲರ ಗಮನ ಸೆಳೆದಿತ್ತು. 

ಇದಕ್ಕೆ ಸ್ಪಂದಿಸಿದ ಯಕ್ಷಗಾನ ವಾಟ್ಸ್ ‌ಆ್ಯಪ್ ಗುಂಪುಗಳಲ್ಲಿ ಚರ್ಚೆ ಆರಂಭವಾಗಿದೆ. ಯಕ್ಷಗಾನ ಸಂಘಟನೆಗಳು ಕೂಡ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದೆ ಬಂದಿವೆ.

ರಾಜ್ಯದ ಗೀತೆ, ಭಾಷೆ, ಪಕ್ಷಿ, ಕೀಟ, ಹಣ್ಣು, ಹಬ್ಬ, ಕ್ರೀಡೆಗಳನ್ನು ಘೋಷಣೆ ಮಾಡುವವರೇ ರಾಜ್ಯದ ಕಲೆಯನ್ನು ಘೋಷಣೆ ಮಾಡಬೇಕು. ಕೇರಳದಲ್ಲಿ ಇವೆಲ್ಲವೂ ಪ್ರತ್ಯೇಕವಾಗಿದೆ ಎಂದು ವ್ಯಕ್ತಿಯೊಬ್ಬರು ವಾಟ್ಸ್ ‌ಆ್ಯಪ್‌ನಲ್ಲಿ ಪ್ರಸ್ತಾಪಿಸಿದ್ದಾರೆ. 

ಮತ್ತೆ ಜೋರಾದ ಯಕ್ಷಗಾನ ರಾಜ್ಯದ ಕಲೆಯಾಗಬೇಕೆನ್ನುವ ಕೂಗು

ಇದೇ ವೇಳೆ ಹತ್ತಾರು ಕಲೆಗಳಿರುವ ಈ ರಾಜ್ಯದಲ್ಲಿ ಯಕ್ಷಗಾನಕ್ಕೆ ಪ್ರಾತಿನಿಧಿಕ ಕಲೆಯಾಗಿ ಮನ್ನಣೆ ನೀಡುವುದು ಕಾರ್ಯಸಾಧುವಾ ಎಂದು ಪ್ರಶ್ನಿಸಿದ್ದಾಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಿಲ್ಲದೆ ನಿಷ್ಕ್ರಿಯವಾಗಿದೆ. ಹಾಗಿರುವಾಗ ಅಕಾಡೆಮಿಗೆ ಅಧ್ಯಕ್ಷರ ನೇಮಿಸಿ ಬಲ ನೀಡುವ ಕೆಲಸ ಆಗಬೇಕು ಎಂದು ವಿಧ್ವಾಂಸರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. 

ರಾಜಕಾರಣಿಗಳ ಕಲೆ, ಸಂಸ್ಕೃತಿಯ ಆಸಕ್ತಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದು, ಕಲಾಭಿಮಾನಿಗಳು, ಕಲಾಸಂಘಟನೆಗಳು, ಕಲಾಕಾರರು ಪದೇಪದೇ ರಾಜಕಾರಣಿಗಳನ್ನು, ಸಂಬಂಧಿತ ಇಲಾಖೆಯನ್ನು ಎಚ್ಚರಗೊಳಿಸುತ್ತಲೇ ಇರಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

 ಸಿಎಂಗೆ ಯಕ್ಷಪ್ರೇಮಿ ಟ್ವೀಟ್

ಸನಾತನ ಹೆಸರಿನಲ್ಲಿ ಯಕ್ಷಗಾನ ಪ್ರೇಮಿಯೊಬ್ಬರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕರ್ನಾಟಕ ರಾಜ್ಯದ ಕಲೆಯಾಗಿ ಘೋಷಣೆ ಮಾಡಬೇಕು ಎಂದು ವಿನಂತಿ. ಹೇಗೆ ಕೇರಳದಲ್ಲಿ ಕಥಕ್ಕಳಿ ರಾಜ್ಯ ಕಲೆಯೋ ಹಾಗೆಯೇ ಕರ್ನಾಟಕದಲ್ಲಿ ಯಕ್ಷಗಾನ ರಾಜ್ಯದ ಕಲೆಯಾಗಲಿ ಎಂದು ಟ್ವೀಟ್ ಮೂಲಕ ಸಿಎಂನ್ನು ಆಗ್ರಹಿಸಿದ್ದಾರೆ. ಈ ಟ್ವೀಟ್ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ.