'ಎಚ್ಡಿಕೆಯನ್ನು ಸಿಎಂ ಮಾಡಿದ್ದು ಸಿದ್ದರಾಮಯ್ಯ ಅಲ್ಲ, ಹೈಕಮಾಂಡ್'
ದೆಹಲಿ ಹೋರಾಟದ ಉದ್ದೇಶ ಅರ್ಥವಾಗುತ್ತಿಲ್ಲ| ಎಪಿಎಂಸಿ ದೋಷಮುಕ್ತ ಮಾಡುವ ಕಾಯ್ದೆ ಅದು| ಕೃಷಿ ಕ್ಷೇತ್ರದ ಸುಧಾರಣೆಗೋಸ್ಕರ ಮಾಡಿರುವ ಕಾಯ್ದೆ ತಿದ್ದುಪಡಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯ|
ಧಾರವಾಡ(ಡಿ.19): ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ಸಿದ್ದರಾಮಯ್ಯ ಅಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆದರೆ, ನಾನೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
"
ಶುಕ್ರವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಮಾಡಲು ಬೆಂಬಲ ನೀಡಿದ್ದು ಕಾಂಗ್ರೆಸ್ ಹೈಕಮಾಂಡ್ ಎನ್ನುವುದು ತಿಳಿದಿರಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೀತು ಎಂಬ ಭಯವಿತ್ತು. ಅದಕ್ಕಾಗಿ ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳರಿಸಿದರೇ ಹೊರತು ಇದಕ್ಕಾಗಿ ಸಿದ್ದರಾಮಯ್ಯ ಬೆಂಬಲ ನೀಡಿಯೇ ಇಲ್ಲ ಎಂದರು.
ಆ ಗಿರಾಕಿ ಹೋಟೆಲ್ನಲ್ಲಿ ಇದ್ರು : ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ
ಕಾಂಗ್ರೆಸ್ ಬಗ್ಗೆ ಸಿ.ಎಂ. ಇಬ್ರಾಹಿಂ ಅಸಮಾಧಾನ ವಿಚಾರವಾಗಿ ಮಾತನಾಡಿದ ಜೋಶಿ, ಕಾಂಗ್ರೆಸ್ ಯಾವತ್ತೂ ಯಾರ ಪರವೂ ಇಲ್ಲ. ಅದು ಅಧಿಕಾರದ, ಭ್ರಷ್ಟಾಚಾರದ ಪರ. ಅದು ದಲ್ಲಾಳಿ, ತುಕ್ಡೇ ತುಕ್ಡೇ ಗ್ಯಾಂಗ್ ಪರವಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪ್ರಜಾಪ್ರಭುತ್ವದ ಪರವೂ ಇಲ್ಲ ಎಂದ ಜೋಶಿ, ಬಿಜೆಪಿಯಲ್ಲಿ ಹಾಗಿಲ್ಲ. ಇವತ್ತು ಜೆ.ಪಿ. ನಡ್ಡಾ ಅಧ್ಯಕ್ಷರಾಗಿದ್ದಾರೆ. ನಾಳೆ ಯಾರಾದರೂ ಆಧ್ಯಕ್ಷರಾಗಬಹುದು. ಸಾಮಾನ್ಯ ಕಾರ್ಯಕರ್ತನೂ ಆಗಬಹುದು ಎಂದರು.
"
ದೆಹಲಿ ರೈತರ ಹೋರಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೃಷಿ ಕ್ಷೇತ್ರದ ಸುಧಾರಣೆಗೋಸ್ಕರ ಮಾಡಿರುವ ಕಾಯ್ದೆ ತಿದ್ದುಪಡಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯ. ರೈತರ ಶೋಷಣೆ ತಪ್ಪಿಸಲು ಈ ಕಾಯ್ದೆ ಜಾರಿ ಮಾಡಲಾಗಿದೆ. ದೆಹಲಿ ಸುತ್ತಮುತ್ತ ಜನರನ್ನು ತಂದು ತೊಂದರೆ ಕೊಡಲಾಗುತ್ತಿದೆ. ಸೈನಿಕರಿಗೆ ಆಹಾರ ತಲುಪಿಸಲು ಕೂಡ ಸಮಸ್ಯೆಯಾಗಿದೆ. ಇವರ ಉದ್ದೇಶಗಳೇನು ಎಂದು ಗೊತ್ತಾಗುತ್ತಿಲ್ಲ. ಇದು ರೈತ ಪರ ಕಾಯ್ದೆ. ಎಪಿಎಂಸಿ ಸದೃಢವಾಗಿದ್ದರೆ ರೈತರು ರಸ್ತೆಗೇಕೆ ಬೆಳೆ ತೂರುತ್ತಿದ್ದರು? ಎಪಿಎಂಸಿಯನ್ನು ದೋಷಮುಕ್ತ ಮಾಡುವ ಕಾಯ್ದೆ ಇದು ಎಂದು ಸಚಿವ ಜೋಶಿ, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.