ಕುಡಿಯಲು ನೀರು ತರಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲು| ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪುನರ್ವಸತಿ ಕ್ಯಾಂಪ್‌ 5ರ ಕೆರೆಯಲ್ಲಿ ನಡೆದ ದುರ್ಘಟನೆ| ಆಸ್ಪತ್ರೆಯ ಮುಂದೆ ಮುಗಿಲುಮುಟ್ಟಿದ್ದ ಕುಟುಂಬಸ್ಥರ ರೋಧನ| ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಸಿಂಧನೂರು(ಏ.29): ತಾಲೂಕಿನ ಪುನರ್ವಸತಿ ಕ್ಯಾಂಪ್‌ 5ರ ಕೆರೆಯಲ್ಲಿ ಬುಧವಾರ ಕುಡಿಯಲು ನೀರು ತರಲು ಹೋಗಿದ್ದ ಇಬ್ಬರು ಮಕ್ಕಳು ಕಾಲು ಜಾರಿ ಕೆರೆಯಲ್ಲಿ ಬಿದ್ದು, ಸಾವನ್ನಪ್ಪಿದ್ದಾರೆ. 

ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ಪುನರ್ವಸತಿ ಕ್ಯಾಂಪ್‌ 5ರ ಸೌಮ್ಯರಾವ್‌ ಎಂಬುವವರ ಜಮೀನಿನಲ್ಲಿರುವ ಕೆರೆಯಲ್ಲಿ ನೀರು ತರಲು ಹೋದಾಗ 10ನೇ ತರಗತಿಯ ವಿದ್ಯಾರ್ಥಿನಿಯರಾದ ರೋಸಿನಿ ತಂದೆ ಮನೋಜಿತ್‌, ಕಾವೇರಿ ತಂದೆ ಪ್ರಸಾದ್‌ ಕಾಲು ಜಾರಿ ಬಿದ್ದು, ಮೃತಪಟ್ಟ ದುರ್ದೈವಿಗಳಾಗಿದ್ದಾರೆ. 7ನೇ ತರಗತಿ ಓದುವ ಮೊನುಷ ತಂದೆ ಪ್ರಸಾದ ಸಹ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ಸಾರ್ವಜನಿಕರು ಆತನನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. 

ಮೂಗಿನಲ್ಲಿ ನಿಂಬೆ ಹಣ್ಣಿನ ರಸ ಹಾಕಿಕೊಂಡ ಶಿಕ್ಷಕ ಸಾವು!

ಆಸ್ಪತ್ರೆಯ ಮುಂದೆ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತ್ತು. ಕೆರೆಯ ಸುತ್ತ ಬೇಲಿ ನಿರ್ಮಿಸದೆ ಇರುವುದು ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಶಾಸಕ ವೆಂಕಟರಾವ್‌ ನಾಡಗೌಡ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.