Asianet Suvarna News Asianet Suvarna News

 ತುರುವೇಕೆರೆ: ಅವಧಿಗೆ ಮುನ್ನವೇ ತಹಸೀಲ್ದಾರ್ ವರ್ಗಾವಣೆ: ಖಂಡನೆ

ತಾಲೂಕಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರನ್ನು ಅವಧಿಗೆ ಮುನ್ನವೇ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಂ.ಟಿ.ಕೃಷ್ಣಮೂರ್ತಿ ಹೇಳಿದ್ದಾರೆ.

Turuvekere Premature transfer of Tehsildar: Condemned snr
Author
First Published Oct 14, 2023, 8:18 AM IST

 ತುರುವೇಕೆರೆ :  ತಾಲೂಕಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರನ್ನು ಅವಧಿಗೆ ಮುನ್ನವೇ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಂ.ಟಿ.ಕೃಷ್ಣಮೂರ್ತಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈ.ಎಂ. ರೇಣುಕುಮಾರ್ ಅವರು ತಾಲೂಕಿನ ದಂಡಾಧಿಕಾರಿಗಳಾಗಿ ಬಂದು ಒಂದು ವರ್ಷವಾಗಿದೆ. ಆಗಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ.

ರೇಣುಕುಮಾರ್ ಅವರು ತಾವು ಕರ್ತವ್ಯ ನಿರ್ವಹಿಸಿದ ದಿನಗಳಲ್ಲಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಗೊಲ್ಲ ಸಮಾಜದ ಕೇರಿಗಳಿಗೆ ಭೇಟಿ ನೀಡಿ ಅಲ್ಲಿಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹರಿಸುವ ಪ್ರಯತ್ನ ಮಾಡಿದ್ದರು. ಸ್ಥಳಕ್ಕೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆ ತಂದು ಗೊಲ್ಲ ಸಮಾಜಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಐವತ್ತಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿಗೆ ಖುದ್ದಾಗಿ ತೆರಳಿ ಅಲ್ಲಿಯ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರು. ಇದುವರೆಗೂ ಯಾವೊಬ್ಬ ತಹಸೀಲ್ದಾರ್ ಅವರು ಮಾಡದ ಸಾಧನೆಯನ್ನು ವೈ.ಎಂ.ರೇಣುಕುಮಾರ್ ಮಾಡಿದ್ದರು ಎಂದು ಕೃಷ್ಣಮೂರ್ತಿ ಹೇಳಿದರು.

ಒತ್ತಾಯ: ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಹಿಂದೆ ರಾಜಕೀಯ ತಂತ್ರ ಇದೆ. ಇನ್ನೂ ಅವಧಿ ಇದ್ದರೂ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಎಲ್ಲಾ ಗ್ರಾಮ ಸಹಾಯಕರು, ಕಂದಾಯ ಅಧಿಕಾರಿಗಳನ್ನು ಗ್ರಾಮದಲ್ಲೇ ನೆಲೆಸುವಂತೆ ಮಾಡಿದ ಕೀರ್ತಿ ವೈ.ಎಂ.ರೇಣುಕುಮಾರ್ ಅವರಿಗೆ ಸಲ್ಲಬೇಕು. ಇಂತಹ ಉತ್ತಮ ಅಧಿಕಾರಿಗಳನ್ನು ಇಲ್ಲೇ ಮುಂದುವರೆಸಬೇಕೆಂದು ಎಂ.ಟಿ.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. ಈ ಸಂಬಂಧ ತಮ್ಮ ಗೊಲ್ಲ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವೈ.ಎಂ.ರೇಣುಕುಮಾರ್ ಅವರನ್ನು ಇಲ್ಲೇ ಮುಂದುವರೆಸಬೇಕೆಂದೂ ಸಹ ಆಗ್ರಹಿಸಲಾಗುವುದು ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೊಲ್ಲ ಸಮುದಾಯದ ಮುಖಂಡರಾದ ಪಿಎಲ್ ಡಿ ಬ್ಯಾಂಕ್ ನ ನಿರ್ದೇಶಕರಾದ ಇ.ಶೇಖರಯ್ಯ, ಅಲೆಮಾರಿ ಸಮಿತಿಯ ಸದಸ್ಯರಾದ ಅಶೋಕ್, ಲೋಕಮ್ಮನಹಳ್ಳಿ ಗ್ರಾ.ಪಂ ಸದಸ್ಯರಾದ ಕೃಷ್ಣಪ್ಪ, ತಾಲೂಕು ಕಾಡುಗೊಲ್ಲ ಯುವ ಸೇನೆಯ ಅಧ್ಯಕ್ಷ ಥರಮನಕೋಟೆ ತಿಮ್ಮೇಗೌಡ, ಅರೇಮಲ್ಲೇನಹಳ್ಳಿ ಕೆ.ಎಂ.ಜಯರಾಮ್, ಆರ್.ರಮೇಶ್, ದೊಡ್ಡೇನಹಳ್ಳಿ ಕೃಷ್ಣಮೂರ್ತಿ, ವೇಣು ಇದ್ದರು.

Follow Us:
Download App:
  • android
  • ios