ತುಂಗಭದ್ರಾ ಜಲಾಶಯ ಮಳೆಯಿಂದ ತುಂಬಿದ್ದು, ನೀರಿನ ಬಣ್ಣ ಇದೀಗ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಆತಂಕ ಎದುರಾಗುತ್ತಿದೆ.

 ಹೊಸಪೇಟೆ (ಸೆ.03): ತುಂಗಭದ್ರಾ ಜಲಾಶಯದ ಹಿನ್ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಪ್ರತಿವರ್ಷವೂ ಹೊಲ, ಗದ್ದೆಗಳ ರಸಗೊಬ್ಬರ, ಕಾರ್ಖಾನೆಗಳು ನದಿಗೆ ಬಿಡುವ ರಾಸಾಯನಿಕ ತ್ಯಾಜ್ಯದಿಂದ ಹಸಿರು ಬಣ್ಣ ಉತ್ಪತ್ತಿಯಾಗುತ್ತದೆ ಎಂದು ಪರಿಸರ ತಜ್ಞರು ಈ ಹಿಂದೆ ತಿಳಿಸಿದ್ದರು.

Add Asianetnews Kannada as a Preferred SourcegooglePreferred

ತುಂಗಭದ್ರಾ ಜಲಾಶಯಕ್ಕೆ ಮಲೆನಾಡಿನಿಂದ ನೀರು ಹರಿದು ಬರುತ್ತದೆ. ಅಲ್ಲಿನ ಕಾಫಿ, ತೆಂಗು, ಅಡಕೆ ತೋಟಗಳಿಗೆ ಹೆಚ್ಚಿನ ರಸಾಯನಿಕ ಬಳಸಲಾಗುತ್ತದೆ. ಅದೇ ರೀತಿಯಲ್ಲಿ ಜಲಾಶಯಕ್ಕೆ ಹರಿದು ಬರುವ ನೀರು ಹೊಲ, ಗದ್ದೆಗಳಲ್ಲಿ ರಸಗೊಬ್ಬರದೊಂದಿಗೆ ಹರಿದು ಬರುವುದರಿಂದ ಮತ್ತು ಜಲಾಶಯದ ಸುತ್ತಮುತ್ತಲಿರುವ ಕಾರ್ಖಾನೆಗಳು ವಿಷಕಾರಕ ರಸಾಯನಿಕಗಳನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಎಲ್ಲವೂ ನೀರಿನೊಂದಿಗೆ ಸೇರಿಕೊಂಡು ಸಯಾನೋ ಬ್ಯಾಕ್ಟಿರಿಯಾಗಳು ಹುಟ್ಟಿಕೊಂಡು, ಇಡೀ ನೀರನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತವೆ’ ಎನ್ನುತ್ತಾರೆ ಪರಿಸರ ತಜ್ಞರು.

ಪರಿಸರ ತಜ್ಞರ ಪ್ರಕಾರ 3-4 ದಿನಗಳ ಕಾಲ ನೀರು ಹಸಿರು ಬಣ್ಣಕ್ಕೆ ತಿರು​ಗು​ತ್ತ​ದೆ. ನಂತರ ನೀರು ತಿಳಿಯಾಗಿ, ಸಹಜ ಸ್ಥಿತಿಗೆ ಬರುತ್ತದೆ. ನೀರು ಹಸಿರಾದಾಗ ಯಾರೂ ನೇರವಾಗಿ ಕುಡಿಯುವುದಕ್ಕೆ ಬಳಸಬಾರದು. ಅಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಸಬಾರದು. ಇಂತಹ ಸಂದರ್ಭದಲ್ಲಿ ನೀರಿನಲ್ಲಿ ಈಜಾಡಿದರೆ ಚರ್ಮ ಕಾಯಿಲೆಗಳು ಬರುವ ಸಾಧ್ಯತೆಯೂ ಇರುತ್ತದೆ. ನೀರಿನ ಬಣ್ಣ ಸಹಜ ಸ್ಥಿತಿಗೆ ಬರುವವರೆಗೆ ಜನ ಎಚ್ಚರದಿಂದ ಇರಬೇಕು’ ಎಂದು ತಜ್ಞರು ತಿಳಿಸುತ್ತಾರೆ.