Asianet Suvarna News Asianet Suvarna News

ಬಿಜೆಪಿ ಸಂಸದ - ಕಾಂಗ್ರೆಸ್‌ ಶಾಸಕ ನಡುವೆ ಫೈಟ್ : ವಾರ್ನಿಂಗ್

ಬಿಜೆಪಿ ಸಂಸದ ಹಾಗೂ ಕಾಂಗ್ರೆಸ್ ಶಾಸಕನ ನಡುವೆ ಬಿಗ್ ಫೈಟ್ ಆರಂಭವಾಗಿದ್ದು ಇದು ತಾರಕಕ್ಕೆ ಏರಿದೆ.  ಇಬ್ಬರೂ ಮುಖಂಡರು ಹಾವು ಮುಂಗುಸಿಯಂತಾಗಿದ್ದಾರೆ. 

Tug Of War Between  MP Muniswamy And MLA Nanjegowda snr
Author
Bengaluru, First Published Mar 22, 2021, 12:59 PM IST

 ಕೋಲಾರ (ಮಾ.22):  ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟಿಂಗ್‌ ಮಾಡುತ್ತಿರುವ ವಿಚಾರದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮತ್ತು ಶಾಸಕ  ನಂಜೇಗೌಡ ಹಾವು ಮುಂಗಸಿಯಂತಾಗಿದ್ದಾರೆ. ಇಬ್ಬರೂ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ಮುನಿಸ್ವಾಮಿ ಮತ್ತು ನಂಜೇಗೌಡರ ಈ ಜಂಗೀ ಕುಸ್ತಿ ಹೊಸದೇನಲ್ಲ, ಮುನಿಸ್ವಾಮಿ ಕೋಲಾರದಲ್ಲಿ ಸಂಸದರಾಗಿ ಆಯ್ಕೆ ಆಗಿ ಬಂದ ದಿನದಿಂದಲೂ ಇಬ್ಬರ ನಡುವೆ ಒಂದಿಲ್ಲೊಂದು ಕಾರಣಕ್ಕೆ ಮಾತುಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಟೀಕೆ ಟಿಪ್ಪಣಿಗಳು ನಡೆಯುತ್ತಲೇ ಇವೆ.

ಮುನಿಸ್ವಾಮಿ ಬಿಜೆಪಿ ಸಂಸದರಾಗಿದ್ದು, ನಂಜೇಗೌಡ ಮಾಲೂರಿನ ಕಾಂಗ್ರೆಸ್‌ ಶಾಸಕರು, ಸಂಸದ ಮುನಿಸ್ವಾಮಿ ಏನೇ ಮಾತನಾಡಿದರೂ ಅದಕ್ಕೆ ಅಂಜದೆ ಅಳುಕದೆ ತಾನೇನೂ ಕಡಿಮೆ ಇಲ್ಲ ಎಂದು ಅದಕ್ಕೆ ತಿರುಗೇಟು ನೀಡುತ್ತಿದ್ದಾರೆ.

ಸದ್ಯ ಈ ಇಬ್ಬರೂ ಗಣಿಗಾರಿಕೆ ವಿಚಾರದಲ್ಲಿ ತಗುಲಿಕೊಂಡಿದ್ದಾರೆ. ಸ್ವತಃ ಕಲ್ಲು ಗಣಿ ಮಾಲಿಕರಾಗಿರುವ ನಂಜೇಗೌಡ ವಿರುದ್ಧ ಸಂಸದ ಎಸ್‌.ಮುನಿಸ್ವಾಮಿ ಮಾತಾಡುತ್ತಿದ್ದಾರೆ. ಇಬ್ಬರ ನಡುವೆ ವಾಕ್ಸಮರ ನಡೆಯುತ್ತಿದೆ.

'ಮೂರರಲ್ಲಿ ಎರಡು ಕಡೆ ಕೈ ಗೆಲುವು : ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ'

ಬ್ಲಾಸ್ಟಿಂಗ್‌ ಹೆಸರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಲ್ಲುಗಣಿಗಾರಿಕೆ ಮಾಲಿಕರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದಾರೆ. ಬ್ಲಾಸ್ಟಿಂಗ್‌ ವಿಷಯದಲ್ಲಿ ಸರ್ಕಾರ ನಮ್ಮ ಪರವಾಗಿ ಇದ್ದರೂ ಅಧಿಕಾರಿಗಳು ವಿರೋಧ ಇದ್ದಾರೆ ಎಂದು ಶಾಸಕ ಕೆ.ವæೖ.ನಂಜೇಗೌಡ ಶನಿವಾರ ಮಾಲೂರಿನಲ್ಲಿ ಕಿಡಿಕಾರಿದ್ದಾರೆ.

ಜಲ್ಲಿ ಕ್ರಷರ್‌ ಮಾಲಿಕರ ವಿರುದ್ಧ ಕ್ರಿಮಿನಲ್‌ ಕೇಸುಗಳನ್ನು ಜಡಿದು ಜೈಲಿಗೆ ಕಳಿಸುತ್ತಿದ್ದಾರೆ. ಕ್ವಾರಿಗಳ ಮಾಲಿಕರನ್ನು ಕಳ್ಳರು ಖದೀಮರಿಗಿಂತಲೂ ಹೀನಾಯವಾಗಿ ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಲಾಸ್ಟಿಂಗ್‌ ಮೆಟೀರಿಯಲ್‌ಗಳನ್ನು ಕೊಡುವವರು ಸರ್ಕಾರದ ಪರವಾನಗಿ ಪಡೆದು ಮೆಟೀರಿಯಲ್‌ಗಳನ್ನು ಮಾರಾಟ ಮಾಡುತ್ತಾರೆ. ಅದನ್ನು ಬ್ಲಾಸ್ಟ್‌ ಮಾಡುವ ಫೋರ್‌ ಮ್ಯಾನ್‌ಗಳು ಪರವಾನಗಿ ಪಡೆದು ಬ್ಲಾಸ್ಟಿಂಗ್‌ಗಳನ್ನು ಮಾಡುತ್ತಾರೆ. ಅವರಿಂದಲೇ ಕ್ರಷರ್‌ಗಳಲ್ಲಿ ಬ್ಲಾಸ್ಟಿಂಗ್‌ ನಡೆಯುತ್ತದೆ. ಹಲವಾರು ವರ್ಷಗಳಿಂದಲೂ ಇದೇ ವಿಧಾನದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಾ ಬಂದಿವೆ, ಪಕ್ಕದ ರಾಜ್ಯದಲ್ಲಿಯೂ ಇದೇ ವ್ಯವಸ್ಥೆ ಇದೆ. ಆದರೆ ಕರ್ನಾಟದಲ್ಲಿ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಜಲ್ಲಿ ಕ್ರಷರ್‌ ಮಾಲಿಕರಿಗೆ ಇನ್ನಿಲ್ಲದ ತೊಂದರೆ ನೀಡಲಾಗುತ್ತಿದೆ. ಕ್ರಷರ್‌ ಮಾಲಿಕರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ. ಕ್ರಷರ್‌ ಮಾಲಿಕರು ಬ್ಲಾಸ್ಟಿಂಗ್‌ ನಿಲ್ಲಿಸಿದ್ದರೂ ಒಂದೋ ಎರಡೋ ಜಿಲಿಟಿನ್‌ಗಳನ್ನು ಇಟ್ಟು ಕೊಂಡಿದ್ದವರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ. ಇದು ಸರಿಯಿಲ್ಲ ಎಂದು ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆದೇಶ ಎಲ್ಲರೂ ಪಾಲಿಸಬೇಕು: ಮುನಿಸ್ವಾಮಿ

ಈ ಮಾತಿಗೆ ಭಾನುವಾರ ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಪ್ರಕ್ರಿಯಿಸಿರುವ ಸಂಸದ ಎಸ್‌.ಮುನಿಸ್ವಾಮಿ, ಶಾಸಕ ನಂಜೇಗೌಡರು ಏನೇನೋ ಮಾತನಾಡುತ್ತಾರೆ. ಕಲ್ಲು ಬ್ಲಾಸ್ಟಿಂಗ್‌ ಮಾಡುವವರು ಸರ್ಕಾರದಿಂದ ಅನುಮತಿ ಪಡೆಯಬೇಕು. ಅದನ್ನು ತಪ್ಪಿದರೆ ಸರ್ಕಾರದ ಕಾನೂನಿಗೆ ಒಳಗಾಗಬೇಕಾಗುತ್ತದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಗುಡುಗಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಲಾಸ್ಟಿಂಗ್‌ಗಳಲ್ಲಿ ಸಾಕಷ್ಟುಮಂದಿ ಮೃತಪಟ್ಟಿದ್ದಾರೆ. ಈ ನಂತರ ಸರ್ಕಾರ ಹೊಸ ನೀತಿಯನ್ನು ಹೊರಡಿಸಿದ್ದು ಜಲ್ಲಿ ಕ್ರಷರ್‌ ನಡೆಸುವವರೇ ಪರವಾನಗಿ ಪಡೆಯಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕಾಗಿದೆ. ಸರ್ಕಾರದ ನಿಯಮ ಮೀರಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ನವರು ಹಿಂದೆ ಮಾಡಿಕೊಂಡು ಬಂದಿರುವ ತಪ್ಪುಗಳನ್ನು ನಮ್ಮ ಬಿಜೆಪಿ ಸರ್ಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ. ಇವರು ಸರ್ಕಾರಕ್ಕೆ ಕಟ್ಟಬೇಕಾಗಿರುವ .50-60 ಕೋಟಿ ರಾಯಲ್ಟಿಯನ್ನು ಪಾವತಿಸದೆ ಅದನ್ನು ಮುಚ್ಚಿಕೊಳ್ಳಲು ಈ ರೀತಿ ಮಾತಾಡುತ್ತಾರೆ. ಅಧಿಕಾರಿಗಳ ಮೇಲೆ ಇಲ್ಲಸಲ್ಲದ್ದನ್ನು ಮಾತಾಡುತ್ತಾರೆ. ಶಾಸಕ ನಂಜೇಗೌಡರಿಗೆ ತಾನೂ ಏನು ಮಾತಾಡುತ್ತಿದ್ದೇನೆ ಎನ್ನುವುದೇ ಗೊತ್ತಾಗುವುದಿಲ್ಲ ಎಂದು ಟೀಕಿಸಿದರು.

ರಾಜಕೀಯವಾಗಿ ಎದುರಾಳಿಗಳಾಗಿರುವ ಸಂಸದ ಎಸ್‌.ಮುನಿಸ್ವಾಮಿ ಮತ್ತು ಶಾಸಕ ನಂಜೇಗೌಡರ ಈ ಮುಸುಕಿನ ಗುದ್ದಾಟದಲ್ಲಿ ಮಾಲೂರು ಕ್ಷೇತ್ರದಲ್ಲಿಯೂ ಸಾಕಷ್ಟುಬೆಳವಣಿಗೆಗಳು ನಡೆದಿವೆ. ಕ್ಷೇತ್ರದಲ್ಲಿ ನಂಜೇಗೌಡರನ್ನು ಮುಗಿಸಲು ಮುನಿಸ್ವಾಮಿ ಷಡ್ಯಂತರ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದೇ ತಾಲೂಕಿನವರಾದ ಈ ಇಬ್ಬರ ರಾಜಕೀಯ ಜಗಳ ಎಲ್ಲಿಗೆ ಬಂದು ನಿಲ್ಲುತ್ತದೋ ಕಾದು ನೋಡಬೇಕು.

Follow Us:
Download App:
  • android
  • ios