ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿ, ಅದಾನಿ, ಅಂಬಾನಿಯನ್ನು ಅಗರ್ಭ ಶ್ರೀಮಂತರಾಗಿ ಮಾಡಿದ್ದೇ ಭಾರತೀಯರಿಗೆ ಪ್ರಧಾನಿ ಮೋದಿಯವರು ಮಾಡಿದ ಅಚ್ಚೇ ದಿನ್‌ ಸಾಧನೆಯಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ಪಿರಿಯಾಪಟ್ಟಣ (ನ.011): ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿ, ಅದಾನಿ, ಅಂಬಾನಿಯನ್ನು ಅಗರ್ಭ ಶ್ರೀಮಂತರಾಗಿ ಮಾಡಿದ್ದೇ ಭಾರತೀಯರಿಗೆ ಪ್ರಧಾನಿ ಮೋದಿಯವರು ಮಾಡಿದ ಅಚ್ಚೇ ದಿನ್‌ ಸಾಧನೆಯಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

Add Asianetnews Kannada as a Preferred SourcegooglePreferred

ಪಟ್ಟಣದಲ್ಲಿ ನಡೆದ ಈದ್‌ ಮಿಲಾದ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ (Govt) ಅಧಿಕಾರಕ್ಕೆ ತಂದರೆ ಅಚ್ಚೇದಿನ್‌ ಬರುತ್ತದೆ ಎಂದು ಮೋದಿ (Modi) , ಅಮಿತ್‌ ಶಾ ಬೊಗಳೆ ಬಿಟ್ಟು ಅಧಿಕಾರಕ್ಕೆರಿದ್ದೇ ಬಿಜೆಪಿಯ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಹಿಂದುತ್ವದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ, ಹಿಂದೂ ಮುಸಲ್ಮಾನರು ಒಗ್ಗೂಡಿ ಬಾಳಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ತರಕಾರಿ, ಗೃಹೋಪಯೋಗಿ ಹಾಗೂ ಅನಿಲ ಸೇರಿದಂತೆ ಇನ್ನಿತರೆ ದಿನಬಳಕೆ ವಸ್ತುಗಳ ಬೆಲೆ ದಿನೇದಿನೇ ಏರಿಸಿ ಮಧ್ಯಮ ವರ್ಗದವರು ಬದುಕುವ ಸ್ಥಿತಿ ಶೋಚನೀಯವಾಗಿದೆ. ರಾಷ್ಟ್ರೀಯ ಪಕ್ಷಗಳಿಂದ ಜನಸಾಮಾನ್ಯರ ಅಭಿವೃದ್ಧಿ ಅಸಾಧ್ಯ ಸರ್ವ ಜನಾಂಗದ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರಬೇಕಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ಮತದಾರ ಮುಂಬರುವ ದಿನಗಳಲ್ಲಿ ಜೆಡಿಎಸ್‌ನತ್ತ ಹೆಚ್ಚು ಒಲವು ತೋರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೆಗೌಡರ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿ ಕೆ. ಮಹದೇವ್‌ ಅವರು ಶಾಸಕರಾದ ನಂತರ ತಾಲೂಕಿನಲ್ಲಿ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿರುವುದು ಶ್ಲಾಘನೀಯ. 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪಿರಿಯಾಪಟ್ಟಣ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುಂಟಾಗುತ್ತದೆ ಎಂಬ ಆಂತರಿಕ ಸಮೀಕ್ಷೆಯಿಂದ ನಾನು ಕೆ. ವೆಂಕಟೇಶ್‌ ಪರವಾಗಿ ಕೆಲ ಕಾಲ ಇಲ್ಲಿ ಪ್ರಚಾರ ಮಾಡಿದ್ದೆ. ಆತನಿಗೆ ಜನಸಾಮಾನ್ಯರೊಂದಿಗೆ ಹೇಗೆ ಬೆರೆಯಬೇಕೆಂಬ ಅರಿವಿಲ್ಲ ಎಂದು ಟೀಕಿಸಿ ಮಾಜಿ ಶಾಸಕ ಕಾಳಮರೀಗೌಡರು ಹಾಗೂ ಚನ್ನಬಸಪ್ಪನವರ ಕಾಲದಿಂದಲೂ ಪಿರಿಯಾಪಟ್ಟಣ ನನಗೆ ಚಿರಪರಿಚಿತ ಎಂದರು.

ಶಾಸಕ ಕೆ. ಮಹದೇವ್‌ ಮಾತನಾಡಿ, ತಾಲೂಕಿನಲ್ಲಿ ಸರ್ವಜನಾಂಗದ ಅಭಿವೃದ್ಧಿಗೆ ಒತ್ತು ನೀಡಿ ಪಾರದರ್ಶಕ ಆಡಳಿತ ನಡೆಸುತ್ತಿದ್ದು, ನನ್ನ ಗೆಲುವಿನಲ್ಲಿ ಅಲ್ಪಸಂಖ್ಯಾತರ ಪಾತ್ರ ಅಪಾರವಾಗಿದೆ ಎಂದರು.

ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ಹಿಂದು ಮುಸಲ್ಮಾನರು ಭಾವೈಕ್ಯತೆಯಿಂದ ಬಾಳಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಪಿರಿಯಾಪಟ್ಟಣಕ್ಕೆ ಆಗಮಿಸಿದ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಲ್ಪಸಂಖ್ಯಾತ ಬಂಧುಗಳು ಅದ್ದೂರಿಯಾಗಿ ವೇದಿಕೆಗೆ ಬರಮಾಡಿಕೊಂಡು ಅವರ ಪರ ಜೈಕಾರ ಕೂಗುತ್ತ ಸನ್ಮಾನಿಸಿದರು.

ವಕ್ಫ್ ಬೋರ್ಡ್‌ ರಾಜ್ಯಾಧ್ಯಕ್ಷ ಶಾಫಿ ಸಅದಿ ಉಸ್ತಾದ್‌, ಜಿಲ್ಲಾಧ್ಯಕ್ಷ ಫಯಾಜ…, ಜೆಡಿಎಸ್‌ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕೆ.ಆರ್‌. ನಗರದ ಖ್ಯಾತ ಮೂಳೆ ವೈದ್ಯ ಅಲ್ಪಸಂಖ್ಯಾತ ಮುಖಂಡ ಮೆಹಬೂಬ… ಖಾನ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಎನ್‌. ರವಿ, ಪುರಸಭೆ ಅಧ್ಯಕ್ಷ ಕೆ. ಮಹೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ. ಕೃಷ್ಣ, ಮುಖಂಡರಾದ ಅತ್ತರ್‌ ಮತೀನ್‌, ಈರಯ್ಯ, ಜವರಪ್ಪ, ಮುಶೀರ್‌ ಖಾನ್‌, ಅನ್ಸರ್‌, ರಫೀಕ್‌, ಅಮ್ಜದ್‌ ಷರೀಫ್‌, ಗೌಸ್‌ ಷರೀಫ್‌, ಅಲ್ಪಸಂಖ್ಯಾತ ಮುಖಂಡರು ಇದ್ದರು.

ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿದ್ದೇ ಅಚ್ಚೇ ದಿನ್‌

- ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಲೇವಡಿ

- ಪಿರಿಯಾಪಟ್ಟಣದಲ್ಲಿ ಈದ್‌ ಮಿಲಾದ್‌ ಕಾರ್ಯಕ್ರಮ