ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ: ಗಣ್ಯರ ಸಂತಾಪ
* ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತೃಶ್ರೀಯವರಾದ ಶಿವನಾಗಮ್ಮ ಲಿಂಗೈಕ್ಯ
* 90 ವರ್ಷಗಳು ಸಾರ್ಥಕವಾಗಿ ಬದುಕಿ ಬಾಳಿದವರು ಶಿವನಾಗಮ್ಮ
* ಇಂದು ಮಧ್ಯಾಹ್ನ 12 ಗಂಟೆಗೆ ಮೃತರ ಅಂತ್ಯಕ್ರಿಯೆ
![Sutturu Shri Mother Shivanagamma Passed Away Minister S T Somashekhar Condolences grg Sutturu Shri Mother Shivanagamma Passed Away Minister S T Somashekhar Condolences grg](https://static-ai.asianetnews.com/images/01f84d5ycvy7cwmjp8qb8vdmtf/mys--1--jpg_363x203xt.jpg)
ಮೈಸೂರು(ಜೂ.14): ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಮಾತೃಶ್ರೀಯವರಾದ ಶಿವನಾಗಮ್ಮ(90)ನವರು ಲಿಂಗೈಕ್ಯರಾಗಿದ್ದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ.
ಸುಮಾರು 90 ವರ್ಷಗಳು ಸಾರ್ಥಕವಾಗಿ ಬದುಕಿ ಬಾಳಿದವರು ಅವರು. ವಕೀಲರಾಗಿದ್ದ ದಿ. ಎಸ್.ಎಂ. ಪ್ರಭುಸ್ವಾಮಿಯವರ ಶ್ರೀಮತಿಯಾಗಿ ತಮ್ಮ 6 ಜನ ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟು ಸಮಾಜಕ್ಕೆ ಆಸ್ತಿಯಾಗಿ ಬೆಳೆಸಿದರು ಎಂದು ಹೇಳಿದ್ದಾರೆ.
ಉದಾಸೀನ ಬೇಡ- ಕೊರೋನಾ ಬಗ್ಗೆ ಇರಲಿ ಎಚ್ಚರ : ಸುತ್ತೂರು ಶ್ರೀ
ಶಿವನಾಗಮ್ಮ ಅವರ ಮಕ್ಕಳಾದ ಎಸ್.ಪಿ.ಶಶಿಕಲಾ, ಸುತ್ತೂರು ಶ್ರೀಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಐಎಎಸ್ ಅಧಿಕಾರಿಗಳಾದ ಷಡಕ್ಷರಸ್ವಾಮಿ, ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್, ಪ್ರೊ. ಎಸ್.ಪಿ.ಉಮಾದೇವಿ, ಹಾಗೂ ಉದಯ ಶಂಕರ್ ಅವರು ಸಮಾಜಕ್ಕೆ ಬಹುದೊಡ್ಡ ಆಸ್ತಿಯಾಗಿ ಎಲ್ಲರೂ ತಮ್ಮದೇ ಯಾದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾತಾಯಿ ಶ್ರೀಮತಿ ಶಿವನಾಗಮ್ಮ ಅವರ ಲಿಂಗೈಕ್ಯದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಸುತ್ತೂರಿನಲ್ಲಿ ಇಂದು(ಸೋಮವಾರ) ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ.
ಸಚಿವ ಮುರುಗೇಶ್ ನಿರಾಣಿ ಸಂತಾಪ
ನಾಡಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರ ಮೈಸೂರಿನ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿಗಳ ಪೂರ್ವಾಶ್ರಮದ ಮಾತೃಶೀ ಶ್ರೀಮತಿ ಶಿವನಾಗಮ್ಮ ಅವರ ನಿಧನಕ್ಕೆ ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ಮಾತೃಶೀ ಶ್ರೀಮತಿ ಶಿವನಾಗಮ್ಮ ಅವರಿಂದ ಪ್ರೇರೇಪಣೆ ಪಡೆದು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಾರಣೀಭೂತರಾಗಿದ್ದರು ಎಂದು ಸ್ಮರಿಸಿದ್ದಾರೆ.
ಸುತ್ತೂರು ಶ್ರೀಗಳು ಶಿಕ್ಷಣ, ಅನ್ನದಾಸೋಹ, ಆರೋಗ್ಯ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗೆ ಶಿವವನಾಗಮ್ಮ ಅವರ ಮಾರ್ಗದರ್ಶನ ಕಾರಣವಾಗಿತ್ತು.ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಅವರು ಶ್ರೀಗಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದ ಅಪರೂಪದ ಮಹಾನ್ ತಾಯಿ ಎಂದು ಬಣ್ಣಿಸಿದ್ದಾರೆ. ಮತೃರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವ ನಿರಾಣಿ ಅವರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.