2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ: HDK
* ಸಂಕ್ರಾಂತಿಯಿಂದ ಜನರ ಬಳಿಗೆ ಹೋಗುತ್ತೇನೆ
* ಮುಖ್ಯಮಂತ್ರಿಯಾಗಿ 2 ಬಾರಿ ಅಧಿಕಾರ ನಡೆಸಿದ ಅನುಭವ
* ಸಂಕ್ರಾಂತಿ ವೇಳೆಗೆ ಕೊರೋನಾ ಕಡಿಮೆಯಾಗುವ ನಂಬಿಕೆ ಇದೆ
ಮದ್ದೂರು(ಜೂ.18): 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಹಾಗೂ ಮದ್ದೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬರಬೇಕೆನ್ನುವುದು ಸ್ವಾರ್ಥಕ್ಕಲ್ಲ. ಮುಖ್ಯಮಂತ್ರಿಯಾಗಿ 2 ಬಾರಿ ಅಧಿಕಾರ ನಡೆಸಿದ ಅನುಭವವಿದೆ. ಯಾವ ವರ್ಗದ ಜನರ ಕಷ್ಟ ಏನೆಂಬುದನ್ನು ಅರಿತಿದ್ದೇನೆ. ಅದಕ್ಕೆಲ್ಲಾ ಪರಿಹಾರ ಸೂಚಿಸುವ ಸಮಯ ಬರಲಿದೆ ಎಂದರು.
ಸಿಎಂ ಬದಲಾವಣೆ ವಿಚಾರದಲ್ಲಿ ದೇವೇಗೌಡ್ರ ಕುಟುಂಬ ಎಳೆಯುವುದು ಬೇಡ: ಎಚ್ಡಿಕೆ ಮನವಿ
ಈಗ ರಾಜಕಾರಣ ಮಾಡುವ ಕಾಲವಲ್ಲ. ಕೊರೋನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರಕ್ಕೆ ರಚನಾತ್ಮಕ ಸಲಹೆಗಳನ್ನು ನೀಡುತ್ತಾ ಮೌನ ವಹಿಸಿದ್ದೇನೆ. ಸಮಯ ಬಂದಾಗ ಸರ್ಕಾರದ ಲೋಪ ಎತ್ತಿ ತೋರಿಸುತ್ತೇನೆ. ಜ.15ರಿಂದ ಜನರ ಮುಂದೆ ಹೋಗುತ್ತೇನೆ. ಸಂಕ್ರಾಂತಿ ವೇಳೆಗೆ ಕೊರೋನಾ ಕಡಿಮೆಯಾಗುವ ನಂಬಿಕೆ ಇದೆ. ಆ ವೇಳೆಗೆ ನನ್ನ ಮುಂದಿನ ಕಾರ್ಯಕ್ರಮ ರೂಪಿಸಿ ಜನರಿಗೆ ತಿಳಿಸುತ್ತೇನೆ. ಆಗ ಇನ್ನೂ ಒಂದು ವರ್ಷ ಟೈಂ ಇರುತ್ತೆ ಎಂದರು. ಕಾಂಗ್ರೆಸ್ನವರು ಚುನಾವಣೆ ಬಂತು ಅಂದಾಗ ಎಲ್ಲಾ ಕೊಡವಿಕೊಂಡು ಗರಿಗರಿ ಬಟ್ಟೆ ಹಾಕೊಂಡು ಬರುತ್ತಾರೆ. ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರುದ್ಧದ ಹೋರಾಟವೇ ದೊಡ್ಡ ಸಾಧನೆ ಅಂದುಕೊಂಡಿದ್ದಾರೆ. ಈ ರೀತಿ ಸ್ಟಂಟ್ ಮಾಡಲು ನಾನು ಹೋಗುವುದಿಲ್ಲ ಎಂದರು.