ನಾನಾ ಕಡೆ ಮಳೆ...ಮಳೆ ಇರಲಿ, ಬೆಳೆಯಿರಲಿ, ಮನೆತುಂಬ ಮಕ್ಕಳಿರಲಿ!
ನಾನಾ ಕಡೆ ಮಳೆ, ಮಳೆ ಇರಲಿ, ಬೆಳೆಯಿರಲಿ, ಮನೆತುಂಬ ಮಕ್ಕಳಿರಲಿ/ ಆಲಿಕಲ್ಲು ಮಳೆಗೆ ಕೊಡಗು ತತ್ತರ/ ಕಾಫಿ ಬೆಳೆ ನಷ್ಟ/ ಶನಿವಾರವೂ ಹಲವು ಭಾಗದಲ್ಲಿ ಮಳೆ ಸಾಧ್ಯತೆ/ ಅಕಾಲಿಕ ಮಳೆಗೆ ಕಾರಣವೇನು?
ಬೆಂಗಳೂರು/ಮಡಿಕೇರಿ/ ಚಿತ್ರದುರ್ಗ(ಫೆ. 19) ಮೋಡ ಕವಿದ ವಾತಾವರಣ ತುಂಬಿಕೊಂಡಿದ್ದು ಮಳೆಯಾಗಿ ಸುರಿದಿದೆ. ಬರಿ ಮಳೆ ಸುರಿದರೆ ಸಹಿಸಿಕೊಳ್ಳಬಹುದಿತ್ತು. ಆದರೆ ಸುರಿದಿದ್ದು ಆಲಿಕಲ್ಲು ಮಳೆ.
ಕೊಡಗು ಭಾಗದಲ್ಲಿ ಕಾಫಿ ಬೆಳೆ ಹಾನಿಯಾಗಿದೆ. ಅಕಾಲಿಕ ಮಳೆ ಧಾರಾಕಾರವಾಗಿಯೇ ಸುರಿದಿದ್ದು ಬೆಳೆಯನ್ನು ಮಾರುಕಟ್ಟೆಗೆ ಕಳಿಸಲು ಸಿದ್ಧತೆ ಮಾಡಿಕೊಂಡಿದ್ದ ರೈತನಿಗೆ ಸಂಕಷ್ಟ ತಂದಿಟ್ಟಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಅಕಾಲಿಕ ಮಳೆ ಬೆಳೆ ಹಾನಿಯನ್ನು ಮಾಡಿದೆ. ಕೊಡಗು, ಹಾಸನ, ಚಿತ್ರದುರ್ಗ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾದ ವರದಿಗಳು ಬಂದಿವೆ.
ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆಯ ಪ್ರತಾಪ
ಅಕಾಲಿಕ ಮಳೆ ಕಾಫಿ ಬೆಳೆಯನ್ನು ನಷ್ಟ ಮಾಡಿದೆ. ಮಾವಿನ ಹೂವಿನ ಮೇಲೆಯೂ ದುಷ್ಪರಿಣಾಮ ಬೀರಿದೆ. ಹಾಗಾದರೆ ಇನ್ನು ಮುಂದಿನ ದಿನಗಳಲ್ಲಿ ಹವಾಮಾನದ ಮೂನ್ಸೂಚನೆ ಏನಿದೆ?
ಮುಂದಿನ 24 ಗಂಟೆ ಅವಧಿಯಲ್ಲಿ ದಕ್ಷಿಣ ಒಳನಾಡಿನ ಕೆಲವು ಭಾಗ, ಕರವಾಳಿ ಮತ್ತು ಉತ್ತರ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 48 ಗಂಟೆ ಅವಧಿಯಲ್ಲಿ ರಾಜ್ಯದ ಹಲವು ಭಾಗದಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಫೆಬ್ರವರಿಯ ಮಳೆಗೆ ಕಾರಣ ಏನು?
ಚಿತ್ರದುರ್ಗ, ಬೈಲಹೊಂಗಲ ಬಾಳೆಹೊನ್ನೂರಿನಲ್ಲಿ ಮಳೆಯಾಗಿದೆ. ಉತ್ತರ ಕೇರಳದಿಂದ ದಕ್ಷಿಣ ಗುಜರಾತ್ ಕಡೆಗೆ ವಾಯುಭಾರ ಕುಸಿತವಾಗಿದ್ದು ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಮಳೆ ಪಡೆದುಕೊಂಡಿದ್ದು ಶನಿವಾರವೂ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿಯೂ ಸಾಧಾರಣ ಮಳೆ ನಿರೀಕ್ಷೆ ಇದೆ.