ಹುಬ್ಬಳ್ಳಿ-ಉಣಕಲ್ ನಡುವಿನ ಎಂಜಿನಿಯರಿಂಗ್ ಕಾಮಗಾರಿಯಿಂದಾಗಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಇದೇ ವೇಳೆ, ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಕುಷ್ಟಗಿ-ಘಟಪ್ರಭಾ ರೈಲು ಮಾರ್ಗ ಹಾಗೂ ಅಳ್ನಾವರದಲ್ಲಿ ರೈಲು ನಿಲುಗಡೆ ಮತ್ತು ಪಾರ್ಸಲ್ ಸೇವೆ ಆರಂಭಿಸಲು ಮನವಿ ಸಲ್ಲಿಸಲಾಗಿದೆ.

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಉಣಕಲ್ ನಿಲ್ದಾಣಗಳ ನಡುವೆ ಅತ್ಯಗತ್ಯ ಎಂಜಿನಿಯರಿಂಗ್ ಹಾಗೂ ಸುರಕ್ಷತಾ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಫೆಬ್ರವರಿ 11 ರಂದು ವಾಸ್ಕೋ ಡ ಗಾಮ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ- ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ. ಫೆ. 12 ರಂದು ರೈಲು ಸಂಖ್ಯೆ 12726 ಧಾರವಾಡ- ಕೆಎಸ್‌ಆರ್ ಬೆಂಗಳೂರು ಸಿದ್ದಗಂಗಾ ಡೈಲಿ ಎಕ್ಸ್‌ಪ್ರೆಸ್ ಧಾರವಾಡ ನಿಲ್ದಾಣದಿಂದ 60 ನಿಮಿಷ ತಡವಾಗಿ ಹೊರಡಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Add Asianetnews Kannada as a Preferred SourcegooglePreferred

ಕುಷ್ಟಗಿ-ಘಟಪ್ರಭಾ ರೈಲ್ವೆ ಮಾರ್ಗಕ್ಕಾಗಿ ಸಚಿವರಿಗೆ ಮನವಿ

ಹುಬ್ಬಳ್ಳಿಯಲ್ಲಿ ಕೇಂದ್ರ ರೇಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ತಾಲೂಕು ರೇಲ್ವೆ ಹೋರಾಟ ಕೇಂದ್ರ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ ಮಾತನಾಡಿ, ಈ ಯೋಜನೆಗೆ ಒತ್ತು ಕೊಟ್ಟು ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಈ ಕಾಮಗಾರಿಗೆ ಚಾಲನೆ ನೀಡಬೇಕು. ನಿರ್ಲಕ್ಷಿಸಿದರೆ ಮುಂದಿನ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ರೈತ ಹೋರಾಟ ಸಮಿತಿ ಪದಾಧಿಕಾರಿಗಳಾದ ಜ್ಯೋತಿಬಾ ಕದಂ, ನಾಗೇಶ ಅಷ್ಟೋಜಿ, ವಿಠಲ ಮುಧೋಳೆ, ಶಿವಯೋಗಿ ಬೆಂಡಿಗೇರಿ, ಬಸವರಾಜ ತಾವರೆ, ರಾಘವೇಂದ್ರ ಗುಜಮಾಗಡಿ, ಆನಂದ ಕುದರಿಮೋತಿ ಇತರರು ಇದ್ದರು.

ಅಳ್ನಾವರದಲ್ಲಿ ರೈಲ್ವೆ ಪಾರ್ಸಲ್ ಸೇವೆ ಆರಂಭಿಸಿ

ಅಳ್ನಾವರಭಾಗದ ಪ್ರಯಾಣಿಕರ ಬೇಡಿಕೆಯಂತೆ ಬೆಳಗಾವಿ-ಬೆಂಗಳೂರು ನಡುವೆ ನಿತ್ಯ ಸಂಚರಿಸುವ ರೈಲಿಗೆ ನಿಲುಗಡೆ ಮತ್ತು ಅಳ್ನಾವರ ನಿಲ್ದಾಣದಲ್ಲಿ ಈ ಹಿಂದೆ ಇದ್ದ ಪಾರ್ಸಲ್‌ ಸೇವೆ ಪುನರಾರಂಭಿಸುವ ಬಗ್ಗೆ ಪರಿಶೀಲಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಕೊಳ್ಳುವುದಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭರವಸೆ ನೀಡಿದ್ದಾರೆ.

ದಾಂಡೇಲಿ-ಅಳ್ನಾವರ ನಡುವೆ ಪ್ರಾರಂಭಿಸಲಾಗಿರುವ ನೂತನ ರೈಲಿಗೆ ಚಾಲನೆ ನೀಡಲು ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಇಲ್ಲಿಯ ನಿಯೋಗ ಮನವಿ ಸಲ್ಲಿಸಿತು. ಅಳ್ನಾವರದಿಂದ ರಾತ್ರಿ ರಾಣಿ ಚೆನ್ನಮ್ಮ ರೈಲು ತೆರಳಿದ ಆನಂತರ ಬೆಂಗಳೂರು ಕಡೆಗೆ ಹೋಗಲು ಯಾವುದೇ ರೈಲಿನ ವ್ಯವಸ್ಥೆ ಇಲ್ಲ. ಇದೇ ಮಾರ್ಗದಲ್ಲಿ ಸಂಚರಿಸುವ ಬೆಳಗಾವಿ-ಬೆಂಗಳೂರು (20654/20653) ರೈಲಿಗೆ ನಿಲುಗಡೆ ಸೌಲಭ್ಯ ಕಲ್ಪಿಸಿದರೆ ಬಹಳಷ್ಟು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ.

ಅಳ್ನಾವರದಿಂದ ಸಿದ್ಧಗೊಂಡಿರುವ ಬ್ರಿಟಿಷ್ ಕಾಲದಿಂದಲೂ ಇದ್ದ ಪಾರ್ಸಲ್‌ ಸೇವೆ ಸ್ಥಗಿತ

ಕಟ್ಟಿಗೆ ಪೀಠೋಪಕರಣಗಳಿಗೆ ಹೆಸರಾಗಿರುವ ಅಳ್ನಾವರದಿಂದ ಸಿದ್ಧಗೊಂಡಿರುವ ಪೀಠೋಪಕರಣಗಳು ನಿತ್ಯ ದೇಶದ ವಿವಿಧೆಡೆ ಕಳುಹಿಸಲಾಗುತ್ತಿದ್ದು, ಹಿಂದೆ ಬ್ರಿಟಿಷ್ ಕಾಲದಿಂದಲೂ ಇದ್ದ ಪಾರ್ಸಲ್‌ ಸೇವೆಯನ್ನು ಈಗ ಸ್ಥಗಿತಗೊಳಿಸಿರುವ ಕಾರಣ ಉಂಟಾಗುತ್ತಿರುವ ತೊಂದರೆಯನ್ನು ಸಚಿವರ ಗಮನಕ್ಕೆ ತಂದಾಗ ಆದಷ್ಟು ಶೀಘ್ರ ಪಾರ್ಸಲ್‌ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದರ ಜತೆಗೆ ವಾಸ್ಕೋ, ಸಂಪರ್ಕ ಕ್ರಾಂತಿ, ಜೋಧಪುರ, ಅಜ್ಮೀರ, ಗಾಂಧಿಧಾಮ ರೈಲುಗಳಿಗೂ ಆದ್ಯತೆಯ ಮೇರೆಗೆ ನಿಲುಗಡೆ ನೀಡಲು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪಪಂ ಮಾಜಿ ಅಧ್ಯಕ್ಷ ಅಮೋಲ ಗುಂಜೀಕರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ರೈಲು ನಿಲ್ದಾಣ ಸಲಹಾ ಸಮಿತಿ ಸದಸ್ಯ ಪ್ರವೀಣ ಪವಾರ, ಬಾಬು ಸುಣಗಾರ ಇನ್ನೀತರರು ಇದ್ದರು.