ಭತ್ತದ ಕಣಜ ಕಾರಟಗಿಯಿಂದ ನೇರವಾಗಿ ಬೆಂಗಳೂರಿಗೆ ಇನ್ನು ನಿತ್ಯವೂ ರೈಲು ಓಡಲಿದೆ  ಯೋಜನೆ ಸಿದ್ಧವಾಗಿದ್ದು, ಕೇಂದ್ರ ರೈಲ್ವೆ ಮಂತ್ರಾಲಯ ಅಸ್ತು ಎಂದಿದೆ.

 ಕೊಪ್ಪಳ (ಆ.15): ಭತ್ತದ ಕಣಜ ಕಾರಟಗಿಯಿಂದ ನೇರವಾಗಿ ಬೆಂಗಳೂರಿಗೆ ಇನ್ನು ನಿತ್ಯವೂ ರೈಲು ಓಡಲಿದೆ. ಯೋಜನೆ ಸಿದ್ಧವಾಗಿದ್ದು, ಕೇಂದ್ರ ರೈಲ್ವೆ ಮಂತ್ರಾಲಯ ಅಸ್ತು ಎಂದಿದೆ. ಸದ್ಯದಲ್ಲಿಯೇ ಇದಕ್ಕೆ ಚಾಲನೆ ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರಟಗಿ ಮತ್ತು ಗಂಗಾವತಿಯಿಂದ ರೈಲು ಬೆಂಗಳೂರಿಗೆ ಓಡಬೇಕು ಎನ್ನುವುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಇದನ್ನು ಸಂಸದ ಸಂಗಣ್ಣ ಕರಡಿ ಗಮನಕ್ಕೂ ತರಲಾಗಿತ್ತು. ಸಂಸದರು ಪಟ್ಟು ಹಿಡಿದು ಕಳೆದ ವಾರ ಇದಕ್ಕೆ ಅನುಮತಿ ಪಡೆದಿದ್ದಾರೆ. ಹೊಸ ರೈಲಿಗೆ ಸಚಿವರು ಅಸ್ತು ಎಂದಿದ್ದು ಶೀಘ್ರವೇ ರೈಲು ಓಡಲಿದೆ.

ಪ್ರಧಾನಿ ಚಾಲನೆ :  ಶೀಘ್ರ ದೇಶದಾದ್ಯಂತ ಇಂಥ 100 ಹೊಸ ರೈಲುಗಳ ಸಂಚಾರ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ. ಇದರಲ್ಲಿ ಹೊಸ ಮಾರ್ಗಗಳು, ಹೊಸ ರೈಲುಗಳು ಇರಲಿವೆ.

ಸ್ಥಗಿತಗೊಂಡಿದ್ದ ಬೆಂಗಳೂರು-ಕಾರವಾರ ರೈಲು ಆರಂಭ, ವಿಸ್ಟಾಡೋಮ್ ಕೋಚ್ ಸಹಿತ

ಗಿಣಿಗೇರಿ ಗದ್ವಾಲ ಹೊಸ ರೈಲು ಮಾರ್ಗದ ಯೋಜನೆಯ ವ್ಯಾಪ್ತಿಯಲ್ಲಿ ಇದು ಬರುತ್ತದೆ. ರೈಲ್ವೆ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಪೂರ್ಣವಾಗಿರುವ ಮಾರ್ಗದಲ್ಲಿ ಈಗ ರೈಲು ಓಡಾಟ ಮಾಡಲಿದೆ. ಬೆಂಗಳೂರಿಗೆ ತೆರಳುವ ರೈಲು ಕಾರಟಗಿಯಿಂದ ಗಂಗಾವತಿಗೆ ಆಗಮಿಸಲಿದೆ. ಇದಾದ ನಂತರ ಅದು ಗಿಣಿಗೇರಿ ರೈಲ್ವೆ ನಿಲ್ದಾಣದ ಮೂಲಕ ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತದೆ. ಸಮಯ ಇನ್ನೂ ನಿಗದಿಯಾಗಿಲ್ಲ. ಸಂಜೆ ಹೊರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರೈಲು ಓಡಾಟ ವಿಸ್ತರಣೆ : ಈಗ ಹುಬ್ಬಳ್ಳಿಯಿಂದ ಗಂಗಾವತಿವರೆಗೂ ಇರುವ ರೈಲುಗಳ ಓಡಾಟವನ್ನು ಕಾರಟಗಿವರೆಗೂ ವಿಸ್ತರಣೆ ಮಾಡಲಾಗಿದೆ. ಇನ್ಮುಂದೆ ಎರಡು ರೈಲುಗಳು ಹುಬ್ಬಳ್ಳಿಯಿಂದ ಗಂಗಾವತಿಗೆ ಬದಲಾಗಿ ಕಾರಟಗಿವರೆಗೂ ಓಡಾಟ ಮಾಡಲಿವೆ. ಇವುಗಳು ಸಹ ಅಂದೇ ಪ್ರಾರಂಭವಾಗುತ್ತವೆ.

ಕಾರಟಗಿಯಿಂದ ಗಂಗಾವತಿ ಮಾರ್ಗವಾಗಿ ಬೆಂಗಳೂರಿಗೆ ರೈಲು ಓಡಾಟ ನಡೆಸಲು ಈಗಾಗಲೇ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ, ವಾರದೊಳಗಾಗಿಯೇ ಚಾಲನೆ ನೀಡುವ ಸಾಧ್ಯತೆ ಇದೆ. ಬಹಳ ದಿನಗಳ ಕನಸು ನನಸಾಗಲಿದೆ.