ಪೊಲೀಸರಿಂದ ಹೆಚ್ಚಿನ ದಂಡ : ಎಚ್ಚರಿಕೆ
ಭಾರೀ ಪ್ರಮಾಣದ ಟ್ರಾಫಿಕ್ ದಂಡ ವಿಧಿಸುತ್ತಿದ್ದು ಇದರ ಹಿಂದಿನ ಉದ್ದೇಶವೇ ಬೇರೆ ಇದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ಎಚ್ಚರಿಕೆ ನೀಡಿದ್ದಾರೆ.
ಶಿರಸಿ [ಸೆ.02] : ಅವೈಜ್ಞಾನಿಕವಾಗಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ ದಂಡ ಹಾಕುತ್ತಿದ್ದು, ಇಂಥ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಆರ್.ವಿ. ಹೆಗಡೆ ಬಾಳೆಗದ್ದೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಚಾರಿ ನಿಯಮ ಜಾರಿಗೆ ತಂದಿರುವುದು ಒಳ್ಳೆಯದಾದರೂ ಪೊಲೀಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಸಾರ್ವಜನಿಕರಿಗೆ ಕಾನೂನು ಉಲ್ಲಂಘಿಸುವ ಉದ್ದೇಶವಿಲ್ಲ. ಕಾನೂನಿಗೆ ಗೌರವ ಕೊಡುತ್ತಾರೆ. ಆದರೆ, ಪೊಲೀಸರು ರಸ್ತೆ ಸಾರಿಗೆ ನಿಯಮವನ್ನು ಸಮರ್ಪಕವಾಗಿ ತರದೇ ಜನರಿಗೆ ತೊಂದರೇ ಕೊಡುವ ಉದ್ದೇಶ ಮತ್ತು ಸರ್ಕಾರಕ್ಕೆ ಕೊರತೆ ಇರುವ ಹಣವನ್ನು ಸಂಗ್ರಹಿಸುವ ಉದ್ದೇಶ ಇದಾಗಿದೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಾರ್ಕಿಂಗ್ ಸ್ಥಳ ನಿಗದಿ ಮಾಡದಿದ್ದರೆ ವಾಹನ ಸವಾರರು ಎಲ್ಲಿ ವಾಹನ ನಿಲ್ಲಿಸಬೇಕು? ಮೊದಲು ಪಾರ್ಕಿಂಗ್ ಸ್ಥಳ ಗುರುತಿಸಬೇಕು. ಆ ಸ್ಥಳದಲ್ಲಿ ನಾಮಫಲಕ ಅಳವಡಿಸಿ ದಂಡ ಹಾಕುವ ಪ್ರಕ್ರಿಯೆ ನಡೆಸಿ ಎಂದು ಸಲಹೆಯಿತ್ತರು. ಮೊದಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕಾರ್ಯವಾಗಬೇಕಿದೆ. ಆನಂತರ ಕಾಯಿದೆ ಜಾರಿಗೆ ತರುವುದು ಸೂಕ್ತ. ಈಗಾಗಲೆ ಸರ್ಕಾರ ದಂಡ ಕಡಿಮೆ ಮಾಡಿದೆ. ಆದರೆ ಪೊಲೀಸರು ಹಳೆಯ ದಂಡದ ಹಣವನ್ನೇ ಆಕರಣ ಮಾಡುತ್ತಿದ್ದು ಇದು ಸಾರ್ವಜನಿಕರ ಸುಲಿಗೆಯಾಗಿದೆ ಎಂದು ದೂರಿದ್ದಾರೆ.
ಈ ವೇಳೆ ಜಿ.ಜಿ. ಭಟ್ಟ, ರವೀಂದ್ರ ಬೊಮ್ಮನಳ್ಳಿ, ಎಸ್.ವಿ. ಹೆಗಡೆ ಶೀಗೇಹಳ್ಳಿ ಉಪಸ್ಥಿತರಿದ್ದರು.