ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತು ಅವರನ್ನು ಪ್ರಚೋದನಕಾರಿ ಮಾಡುವ ಉದ್ದೇಶದಿಂದ ಹಿಜಾಬ್ ವಿಚಾರವನ್ನು ಮತ್ತೆ ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ ಎಂದು ಬಿಜೆಪಿ ಮುಖಂಡ ಎಚ್‍.ಡಿ. ರಾಜೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕುಣಿಗಲ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತು ಅವರನ್ನು ಪ್ರಚೋದನಕಾರಿ ಮಾಡುವ ಉದ್ದೇಶದಿಂದ ಹಿಜಾಬ್ ವಿಚಾರವನ್ನು ಮತ್ತೆ ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ ಎಂದು ಬಿಜೆಪಿ ಮುಖಂಡ ಎಚ್‍.ಡಿ. ರಾಜೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ಹಿನ್ನೆಲೆ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ನಂತರ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಮಾತನಾಡಿದ ಅವರು, ಸಮವಸ್ತ್ರ ಕಾಯಿದೆಯನ್ನು 1964 ರಲ್ಲಿ ಚಾಲನೆಗೆ ತರಲಾಯಿತು. ಬಡವ, ಶ್ರೀಮಂತ, ಮೇಲು-ಕೀಳು, ಜಾತಿ ಇವುಗಳ ಸೋಂಕಿಲ್ಲದೆ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಶಿಕ್ಷಣ ಕಲಿಯಬೇಕು. ಅದರಿಂದ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ ಎಂಬುದಕ್ಕಾಗಿ ಈ ಕಾಯ್ದೆ ತರಲಾಗಿದೆ. ಇದರ ಅರಿವಿಲ್ಲದಂತೆ ಸಿದ್ದರಾಮಯ್ಯ ಅವರು ವಿಚಾರವನ್ನು ಪುನಃ ಎಳೆದು ತಂದು ಮಕ್ಕಳ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಅಲ್ಪಸಂಖ್ಯಾತರ ಮಕ್ಕಳಿಗೆ ಹಿಜಾಬ್ ಹಾಕಿ ಕರೆ ತಂದರೆ ನಾವು ನಮ್ಮ ಮಕ್ಕಳಿಗೆ ಕೇಸರಿ ಶಾಲು ಹಾಕಿ ಕಳಿಸುತ್ತೇವೆ. ಇದರಿಂದ ಸಮಾಜದಲ್ಲಿ ತಾರತಮ್ಯ ಕೋಮುಗಲಭೆ ಉಂಟಾಗುತ್ತದೆ. ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದರು

ಈ ಹಿಂದೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ವ್ಯಕ್ತಿಗಳು ದಾವೆ ಹೂಡಿದ್ದಾರೆ. ನ್ಯಾಯಾಲಯದ ಅಂಗಳದಲ್ಲಿ ಇರುವಂತ ವಿಚಾರವನ್ನ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಲಾಭ ಮತ್ತು ಒಂದು ಕೋಮನ್ನು ಓಲೈಸಿಕೊಳ್ಳುವ ಉದ್ದೇಶದಿಂದ ಈ ರೀತಿ ಮಾತನಾಡುವುದು ಅಸಂಬದ್ಧ ಎಂದರು.

ಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿರುವುದು ಸರಿ ಇಲ್ಲ. ಅವರು ದಿನಕ್ಕೊಂದು ಹೇಳಿಕೆ ನೀಡುವುದನ್ನು ಬಿಟ್ಟು ನ್ಯಾಯಯುತವಾದ ಹಾಗೂ ಧರ್ಮಯುತವಾದ ಮತ್ತು ಅಭಿವೃದ್ಧಿ ಕಡೆ ಚಿಂತಿಸಬೇಕಾಗಿದೆ. ಆಗಿಂದಾಗೆ ಇಂತಹ ವಿವಾದಿತ ಹೇಳಿಕೆಗಳನ್ನು ಹೇಳುವ ಮುಖಾಂತರ ಜಾತಿ ಧರ್ಮಗಳ ನಡುವೆ ತಿರುಕು ಉಂಟುಮಾಡುವ ಕೆಲಸ ಮಾಡುವಲ್ಲಿ ಸಿದ್ದರಾಮಯ್ಯ ತುಂಬಾ ಯಶಸ್ವಿ ಪಾತ್ರವಹಿಸಿದ್ದಾರೆ ಎಂಬುದಕ್ಕೆ ಹಲವಾರು ನಿದರ್ಶನಗಳು ಹಿಂದೆ ಆಗಿವೆ. ಈ ವಿಚಾರವಾಗಿ ಬಿಜೆಪಿ ತೀವ್ರವಾಗಿ ಖಂಡಿಸಲಿದ್ದು ಬೀದಿಗಿಳಿದು ಹೋರಾಟ ಮಾಡುವುದಕ್ಕೆ ನಾವು ಸದಾ ಸಿದ್ಧರಿದ್ದೇವೆ ಎಂದರು.