ಸಂಪತ್ ಆರೋಪಿ ಅಷ್ಟೆ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಸಿದ್ದು
ಪೊಲೀಸರು ಚಾರ್ಚ್ಶೀಟ್ನಲ್ಲಿ ಸಂಪತ್ ರಾಜ್ ಅವರನ್ನು ಆರೋಪಿಯನ್ನಾಗಿ ಮಾಡಿದ್ದಾರೆ, ಆದರೆ ಆರೋಪ ಸಾಬೀತು ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ. ಅಲ್ಲಿಯವರೆಗೆ ಸಂಪತ್ ರಾಜ್ ಆರೋಪಿಯಷ್ಟೇ: ಸಿದ್ದರಾಮಯ್ಯ
ಬೆಂಗಳೂರು(ನ.18): ಚಾರ್ಚ್ಶೀಟ್ ಹಾಕಿದ ತಕ್ಷಣ ಅಪರಾಧಿ ಆಗುವುದಿಲ್ಲ. ಸಂಪತ್ ರಾಜ್ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಬಂಧನ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, ಪೊಲೀಸರು ಚಾರ್ಚ್ಶೀಟ್ನಲ್ಲಿ ಸಂಪತ್ ರಾಜ್ ಅವರನ್ನು ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು; ಸಂಪತ್ರಾಜ್ ಬಂಧನಕ್ಕೆ ಅಖಂಡ ಪ್ರತಿಕ್ರಿಯೆ
ಆದರೆ ಆರೋಪ ಸಾಬೀತು ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ. ಅಲ್ಲಿಯವರೆಗೆ ಸಂಪತ್ ರಾಜ್ ಆರೋಪಿಯಷ್ಟೇ ಎಂದು ಹೇಳಿದ್ದಾರೆ.
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗೆ ಸಂಚು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಒಂದು ತಿಂಗಳ ಅಜ್ಞಾತವಾಸದ ಬಳಿಕ ಕಡೆಗೂ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಬಲೆಗೆ ಬಿದ್ದಿದ್ದಾರೆ. ಬೆನ್ಸನ್ ಟೌನ್ನ ತಮ್ಮ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದ ಸಂಪತ್ ರಾಜ್ ಅವರನ್ನು ಸೋಮವಾರ ತಡರಾತ್ರಿ ಬಂಧಿಸಿದ ಸಿಸಿಬಿ, ಮಂಗಳವಾರ ಮಧ್ಯಾಹ್ನ ನಗರದ ಸಿಸಿಎಚ್ 67ನೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.