Asianet Suvarna News Asianet Suvarna News

ರೈತರಿಗೆ ಅಪಮಾನಿಸಿದ ಸಚಿವೆ ಶೋಭಾ ವಜಾಕ್ಕೆ ಆಗ್ರಹ

* ಜನಾಶೀರ್ವಾದ ಯಾತ್ರೆ ಎಂದು ಜಾತ್ರೆ ಮಾಡುತ್ತಿರುವ ಮಂತ್ರಿಗಳು 
* ರೈತರನ್ನ ಬ್ರೋಕರುಗಳೆಂದು ಉದ್ಧಟತನದಿಂದ ಮಾತನಾಡಿದ ಸಚಿವೆ
* ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಚಳವಳಿ ನಡೆಸುತ್ತಿರುವ ರೈತರು 
 

Shantaram Demand for Minister Shobha Karandlaje Dismissal from Cabinet grg
Author
Bengaluru, First Published Aug 19, 2021, 10:06 AM IST

ದಾಂಡೇಲಿ(ಆ.19): ಮೂರು ಕೃಷಿ ಕಾಯ್ದೆ ವಾಪಸ್ಸಿಗೆ ಒತ್ತಾಯಿಸಿ ದೆಹಲಿಯಲ್ಲಿ ಕಳೆದ ಎಂಟು ತಿಂಗಳಿಂದ ಹಾಗೂ ವಿದ್ಯುತ್‌ ಮಸೂದೆ ವಿರುದ್ಧ ಲಕ್ಷಾಂತರ ರೈತರು, ಕಾರ್ಮಿಕರು ಹೋರಾಟ ನಿರತರಾದವರನ್ನು ದಲ್ಲಾಳಿಗಳ ಹೋರಾಟವಾಗಿದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದು, ಕೂಡಲೇ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಶೀರ್ವಾದ ಯಾತ್ರೆ ಎಂದು ಜಾತ್ರೆ ಮಾಡುತ್ತಿರುವ ಮಂತ್ರಿಗಳು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಚಳವಳಿ ನಡೆಸುತ್ತಿರುವ ರೈತರನ್ನು ದಲ್ಲಾಳಿಗಳೆಂದು ಅವಮಾನಿಸಿರುವುದಕ್ಕೆ ದೇಶದ ಜನತೆಯ ಮತ್ತು ಅನ್ನದಾತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಲೂಟಿಕೋರರ ಕಾರ್ಪೋರೇಟ್‌ ಕಂಪನಿಗಳ ಪರಿವಾರಕ್ಕೆ ರೈತ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿರೋಧಿಸಿ ದೇಶಾದ್ಯಂತ ಕಳೆದ ನವೆಂಬರ್‌ದಿಂದ ನಿರಂತರ ಹೋರಾಟದಲ್ಲಿ ತೊಡಗಿರುವ ಲಕ್ಷಾಂತರ ರೈತ ಕುಟುಂಬಗಳನ್ನು ಅವರು ರೈತರಲ್ಲ, ಬ್ರೋಕರುಗಳೆಂದು ಉದ್ದಟತನದ ಮಾತನಾಡಿ ಅಪಮಾನಿಸಿದ್ದಾರೆ ಎಂದರು. ಸಿಐಟಿಯು ಮುಖಂಡ ಉದಯ ನಾಯ್ಕ ಮಾತನಾಡಿದರು.

ಅನ್ನದಾತ ಸುಖಿಯಾದರೆ ದೇಶದ ಪ್ರಗತಿ: ಸಚಿವ ಹೆಬ್ಬಾರ

ಜೆಡಿಎಸ್‌ ಆಗ್ರಹ:

ನಗರದ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಜಂಟಿ ಸಂಧಾನ ಸಮಿತಿ ಕಾರ್ಖಾನೆಯ ಕಾರ್ಮಿಕರ ವೇತನ ಒಪ್ಪಂದ ಪರಿಷ್ಕರಣೆಯನ್ನು ಕೂಡಲೇ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯವರು ಕಾಗದ ಕಾರ್ಖಾನೆಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಗೌರೀಶ್‌ ಬಾಬ್ರೇಕರ ಆಗ್ರಹಿಸಿದ್ದಾರೆ.

ವೇತನ ಪರಿಷ್ಕರಣೆ ಒಪ್ಪಂದಕ್ಕಾಗಿ ಕಾರ್ಮಿಕರು ಹಲವಾರು ಸಮಸ್ಯೆಗಳಿಂದ ಬಸವಳಿದಿದ್ದಾರೆ. ಕಾರ್ಮಿಕರಿಗೆ ನ್ಯಾಯೋಚಿತವಾಗಿ ಸಿಗಬೇಕಾದ ಸೌಲಭ್ಯಗಳು ಮತ್ತು ವೇತನ ಪರಿಷ್ಕರಣೆ ಒಪ್ಪಂದ ಸಹಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಕಾರ್ಮಿಕ ಇಲಾಖೆಯು ಕಾಗದ ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಕ್ತ ನಿರ್ದೇಶನ ನೀಡಿ, ಕೂಡಲೆ ವೇತನ ಪರಿಷ್ಕರಣೆ ಒಪ್ಪಂದ ಮಾಡಬೇಕೆಂದು ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios