ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತ ಗಂಗಾಧರ ಹೂಗಾರ ನಿಧನರಾಗಿದ್ದಾರೆ

ಹಾವೇರಿ (ಡಿ.07): ಹಿರಿಯ ಪತ್ರಕರ್ತ, ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ಜಿಲ್ಲಾ ವರದಿಗಾರ ಗಂಗಾಧರ ಹೂಗಾರ (60) ಅವರು ಭಾನುವಾರ ನಿಧನರಾದರು.

Add Asianetnews Kannada as a Preferred SourcegooglePreferred

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಗಂಗಾಧರ ಹೂಗಾರ ಅವರು ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಸುಮಾರು 20 ವರ್ಷಗಳಿಂದಲೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಐಟಿಐ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯರಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಾಗೂ ಪ್ರೆಸ್‌ ಕ್ಲಬ್‌ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಿಂಡಿಕೇಟ್‌ ಸದಸ್ಯರಾಗಿದ್ದಾಗ ಹಾವೇರಿಯಲ್ಲಿ ಪಿಜಿ ಸೆಂಟರ್‌ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಲೈವ್ ರಿಪೋರ್ಟಿಂಗ್ ವೇಳೆ ಕೊಚ್ಚಿ ಹೋಯ್ತು ಸೇತುವೆ : ಪತ್ರಕರ್ತೆ ಸ್ವಲ್ಪದರಲ್ಲೇ ಬಚಾವ್..!

ಶ್ರದ್ಧಾಂಜಲಿ ಸಲ್ಲಿಕೆ : ಗಂಗಾಧರ ಹೂಗಾರ ಅವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲಾ ವಾರ್ತಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಮಾಧ್ಯಮ ವರದಿಗಾರರು ಮೃತರ ಆತ್ಮಕ್ಕೆ ಶಾಂತಿ ಕೋರಿದರು. ವಾರ್ತಾಧಿಕಾರಿ ಡಾ. ಬಿ.ಆರ್‌. ರಂಗನಾಥ, ಮೂಡಣ ಪತ್ರಿಕೆ ಸಂಪಾದಕಿ ತೇಜಸ್ವಿನಿ ಕಾಶೆಟ್ಟಿ, ಪತ್ರಕರ್ತರಾದ ನಿಂಗಪ್ಪ ಚಾವಡಿ, ರಾಜೇಂದ್ರ ರಿತ್ತಿ, ಪರಶುರಾಮ ಕೆರಿ, ನಾಗರಾಜ ಕುರುವತ್ತೇರ, ಪ್ರಭುಗೌಡ ಪಾಟೀಲ, ಶಿವಕುಮಾರ ಹುಬ್ಬಳ್ಳಿ, ರಮೇಶ, ಫಕ್ಕೀರಯ್ಯ ಗಣಾಚಾರಿ, ನಾರಾಯಣ ಹೆಗಡೆ, ಸಿದ್ದು ಆರ್‌ಜಿ ಹಳ್ಳಿ, ರವಿ ಹೂಗಾರ, ವೀರೇಶ ಮಡ್ಲೂರ, ಪ್ರಶಾಂತ ಮರೆಮ್ಮನವರ, ಮಂಜುನಾಥ ಗುಡಿಸಾಗರ ಸೇರಿದಂತೆ ಅನೇಕರು ಇದ್ದರು.