ಚಿತ್ರನಟ ಯಶ್ ಹುಟ್ಟು ಹಬ್ಬಕ್ಕೆ ಶುಭ ಕೋರಲು ಕಟೌಟು ನಿಲ್ಲಿಸುವ ವೇಳೆ ವಿದ್ಯುತ್ ಆಘಾತಕ್ಕೆ ದುರ್ಮರಣಕ್ಕೀಡಾದ ಸೂರಣಗಿ ಗ್ರಾಮದ ಯಶ್ ಅಭಿಮಾನಿಗಳ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ಪರಿಹಾರ ಯಾವುದಕ್ಕೆ ಸಾಲಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಮೃತ ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ನೀಡುವಂತೆ ಆಗ್ರಹಿಸಿದ್ದಾರೆ.

ಗದಗ (ಜ.9) : ಚಿತ್ರನಟ ಯಶ್‌ ಹುಟ್ಟುಹಬ್ಬಕ್ಕೆ ಶುಭಕೋರಲು ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ದುರ್ಮರಣಕ್ಕೀಡಾದ ಘಟನೆ ಸಂಬಂಧ ಮೃತರ ಕುಟುಂಬಸ್ಥರಿಗೆ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಘೋಷಿಸಿತ್ತು. ಸರ್ಕಾರ ಘೋಷಿಸಿದ್ದ ಪರಿಹಾರಕ್ಕೆ ಇದೀಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, 2 ಲಕ್ಷ ರೂ. ಹಣ ಯಾವುದಕ್ಕೂ ಸಾಲುವುದಿಲ್ಲ. ಮೂವರು ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಕೊಡುವಂತೆ ಸೂರಣಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಯಶ್ ಅಭಿಮಾನಿಗಳು ಬಡ ಕುಟುಂಬಗಳಾಗಿದ್ದು, ದುಡಿಯುವ ಮಕ್ಕಳು ಮೃತರಾಗಿರುವುದರಿಂದ ಕುಟುಂಬ ನಿರ್ವಹಣೆಗೆ ಕಷ್ಟವಾಗಲಿದೆ. ಹೀಗಾಗಿ ಮೃತರ ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಎರಡು ಎಕರೆ ಜಮೀನು ನೀಡಬೇಕು. ಅಲ್ಲದೇ ಮೃತಪಟ್ಟ ಮೂವರು ಅಭಿಮಾನಿಗಳ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಯಶ್ ಬರ್ತ್‌ಡೇಗೆ ಕಟೌಟ್ ನಿಲ್ಲಿಸಲು ಹೋಗಿ ಭಾರೀ ಅನಾಹುತ; ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ಸಾವು!

ಏನಿದು ಘಟನೆ:

ಚಿತ್ರನಟ ಯಶ್ ಜನ್ಮದಿನದಂದು ಶುಭಕೋರಲು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಅಭಿಮಾನಿಗಳು ಯಶ್ ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದರು. ಇದರ ಭಾಗವಾಗಿ ಮಧ್ಯೆರಾತ್ರಿ (ಜ.7) ಯಶ್ ಬೃಹತ್ ಕಟೌಟ್ ನಿಲ್ಲಿಸಲು ಮುಂದಾಗಿದ್ದರು. ಗ್ರಾಮದ ಅಂಬೇಡ್ಕರ್ ನಗರದಲ್ಲಿ ಕಟೌಟ್ ನಿಲ್ಲಿಸುವ ವೇಳೆ ಕಟೌಟ್ ವಿದ್ಯುತ್ ತಂತಿಗೆ ತಗುಲಿ ಕಟೌಟ್ ಹಿಡಿದಿದ್ದ ಯುವಕರಿಗೆ ವಿದ್ಯುತ್ ಹರಿದು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದ ಮೂವರು ಯುವಕರು. ಘಟನೆ ಬಳಿಕ ಸರ್ಕಾರ ಪರಿಹಾರ ಹಣ ಘೊಷಣೆ ಮಾಡಿತ್ತು. ನಟ ಯಶ್ ಸಹ ಗ್ರಾಮಕ್ಕೆ ತೆರಳಿ ಕುಟುಂಬಸ್ಥರಿಗೆ ಆರ್ಥಿಕ ಸಹಾಯದ ಜೊತೆಗೆ ಸಾಂತ್ವನ ಹೇಳಿದ್ದರು. 

ಯಶ್ ಅಭಿಮಾನಿಗಳ ದಾರುಣ ಸಾವು; ಸಚಿವ ಎಚ್‌ಕೆ ಪಾಟೀಲ್ ಸಂತಾಪ