Asianet Suvarna News Asianet Suvarna News

ನೀರಿಲ್ಲ ಎನ್ನೋರಿಗೆ ಆಗಲಿ ಉಡುಪಿಯ ಈ ಹಳ್ಳಿ ಮಾದರಿ...

ಮಳೆಗಾಲ ಆರಂಭವಾದರೂ ರಾಜ್ಯದ ಹಲವೆಡೆ ನೀರಿಗೆ ಬರವಿದೆ. ಮುಂದಿನ ದಿನಗಳಲ್ಲಿ ಜನಕ್ಷಾಮ ತಪ್ಪಿಸುವ ನಿಟ್ಟಿನಲ್ಲಿ ಉಡುಪಿಯ ಮರ್ಣೆ ಗ್ರಾಮ ಈಗಲೇ ಎಚ್ಚೆತ್ತುಕೊಂಡು ಮಳೆ ಕುಯ್ಲಿನ ಮೂಲಕ ನೀರು ಸಂಗ್ರಹಿಸುತ್ತಿದೆ. ಅಂದಹಾಗೇ ಈ ಗ್ರಾಮದಲ್ಲಿ ಮಳೆ ಕುಯ್ಲು ಮಾಡೋದು ಕಡ್ಡಾಯ.

Rain water harvesting mandatory in Marne village of Udupi district
Author
Bangalore, First Published Jul 18, 2019, 12:29 PM IST

ಉಡುಪಿ (ಜು.18): ವರ್ಷದಿಂದ ವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಪರಿಣಾಮವಾಗಿ ಕುಡಿಯಲೂ ನೀರಿಲ್ಲದ ಸ್ಥಿತಿ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ಜಲಸಂರಕ್ಷಣೆಗೆ ಮುಂದಾಗಿದೆ. ಈ ಗ್ರಾಮದಲ್ಲಿರುವ ಪ್ರತಿ ಮನೆಯವರೂ ಕಡ್ಡಾಯ ಮಳೆ ಕುಯ್ಲು ಮಾಡಲೇಬೇಕು.

ಕನಿಷ್ಠ ವೆಚ್ಚದಲ್ಲಿ ಗರಿಷ್ಠ ನೀರು ಸಂಗ್ರಹ:

ಮಳೆ ಕುಯ್ಲು ಪದ್ಧತಿ ಅಳವಡಿಕೆಗೆ ಮರ್ಣೆ ಗ್ರಾಮ ಮುಂದಾಗಿದ್ದು ಕೇವಲ 4 ಸಾವಿರ ವೆಚ್ಚದಲ್ಲಿ 2 ವಿಧದ ಅತ್ಯಂತ ಸರಳ ತಂತ್ರಜ್ಞಾನದ ಅಳವಡಿಸುವ ಮೂಲಕ ಹೇಗೆ ನೀರನ್ನು ಮರುಪೂರಣ ಮಾಡಬಹುದೆನ್ನುವ ಕುರಿತು ಜನರಲ್ಲಿ ‘ಜಲಜಾಗೃತಿ’ ಮೂಡಿಸಲಾಗ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬೇಸಗೆಯಲ್ಲಿ ಜನರಿಗೆ ನೀರು ಪೂರೈಕೆಯೇ ಸವಾಲಾಗಿತ್ತು. ಏಕೆಂದರೆ ಹಲವೆಡೆ ನೀರು ಪೂರೈಕೆಗೆ ಜಲಮೂಲಗಳೇ ಸಿಗದಂತಹ ದುಃಸ್ಥಿತಿ ಎದುರಾಗಿತ್ತು. ಇದನ್ನರಿತ ಮರ್ಣೆ ಗ್ರಾಮ ಪಂಚಾಯಿತಿ ಆಡಳಿತ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಬಲ್ಲ ಮಳೆ ಮಳೆ ಕುಯ್ಲು ವಿಧಾನದ ಕಡ್ಡಾಯ ಅನುಷ್ಠಾನಕ್ಕೆ ಮುಂದಾಗಿದೆ. ಹೀಗಾಗಿ ಸರಳ ತಂತ್ರಜ್ಞಾನದ ಮೂಲಕ ಬಡವರೂ ಕೂಡ ಅತೀ ಕಡಿಮೆ ವೆಚ್ಚದಲ್ಲೂ ಮಳೆನೀರನ್ನು ಭೂಮಿಯಲ್ಲಿ ಮರುಪೂರಣ ಮಾಡಬಹುದಾಗಿದೆ.

ಅನುಷ್ಠಾನ ಕಡ್ಡಾಯ:

ಭವಿಷ್ಯದಲ್ಲಿ ಉಂಟಾಗುವ ಜಲಕ್ಷಾಮದ ಬಗ್ಗೆ ಎಚ್ಚೆತ್ತ ಮರ್ಣೆ ಪಂಚಾಯಿತಿ ಆಡಳಿತ ಮಳೆನೀರು ಕೊಯ್ಲಿನ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ
ಇನ್ನು ಮುಂದೆ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಗೊಂಡರೂ ಮಳೆ ಕೊಯ್ಲು ಪದ್ಧತಿ ಅನುಷ್ಠಾನ ಕಡ್ಡಾಯವಾಗಲಿದೆ. ಪಂಚಾಯಿತಿ ನಿಯಮ ಉಲ್ಲಂಘಿಸಿ ಮಳೆ ಕುಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳದಿದ್ದರೆ ಯಾವುದೇ ಕಾರಣಕ್ಕೂ ಕಟ್ಟಡ ಪರವಾನಗಿ ಸಿಗುವುದಿಲ್ಲ.

ಹೀಗಿದೆ ಪ್ರಯೋಗ:

ಮರ್ಣೆ ಗ್ರಾಮದ ಕೈಕಂಬ ಎಂಬಲ್ಲಿ ಸಂತೋಷ್ ಪೂಜಾರಿ ಎಂಬವರು ಪಿವಿಸಿ ಪೈಪ್ ಬಳಸಿ ತಮ್ಮ ಮನೆಯ ಕಟ್ಟಡದಿಂದ ಬಿದ್ದ ಮಳೆ ನೀರನ್ನು ಪಿವಿಸಿ ಪೈಪ್ ಹಾಗೂ
ಅದಕ್ಕೆ ಮರಳು ಹಾಗೂ ಜಲ್ಲಿಯ ಮೂಲಕ ನೀರನ್ನು ಫಿಲ್ಟರ್ ಮಾಡಿ ಬಳಿಕ ಈ ನೀರನ್ನು ನೇರವಾಗಿ ಬಾವಿಗೆ ಬಿಡುವ ಮೂಲಕ ಕೇವಲ 4 ಸಾವಿರ ಖರ್ಚಿನಲ್ಲಿ ಅಂತರ್ಜಲ ಮರುಪೂರಣ ಮಾಡಿದ್ದಾರೆ.

ಅಲ್ಲದೆ, ಪಿವಿಸಿ ಪೈಪ್ ಹಾಗೂ ಪ್ಲಾಸ್ಟಿಕ್ ಬ್ಯಾರೆಲ್ ಬಳಸಿ ನೀರನ್ನು ಶುದ್ಧೀಕರಿಸಿ ಬಾವಿಗೆ ಬಿಡುವ ವಿಧಾನವನ್ನೂ ಅಳವಡಿಸಬಹುದಾಗಿದೆ. ಪ್ಲಾಸಿಕ್ ಬ್ಯಾರೆಲ್‌ಗೆ 3 ಪದರಗಳಲ್ಲಿ ಜಲ್ಲಿ ತುಂಬಿಸಿ ಬಳಿಕ ಅದಕ್ಕೆ ಮೇಲ್ಪದರದಲ್ಲಿ ಇದ್ದಿಲು ತುಂಬಿಸಿ ಬಳಿಕ ಪ್ಲಾಸಿಕ್ ನೆಟ್ ಹಾಕಿ ಸ್ವಲ್ಪ ಮರಳನ್ನು ಹರಡಬೇಕು,ಇದಕ್ಕೆ ಮನೆಯ ಮಾಡಿನ ನೀರನ್ನು ಪೈಪ್ ಮೂಲಕ ಹಾಯಿಸಿ ಅದು ಫಿಲ್ಟರ್ ಆದ ಬಳಿಕ ಅದನ್ನು ಬಾವಿಗೆ ಬಿಡಬಹುದಾಗಿದೆ. ಇಂತಹ ವಿಧಾನಕ್ಕೆ ತಗಲುವ ಖರ್ಚು ಕೇವಲ 2-3 ಸಾವಿರ ಮಾತ್ರ.
ಇಂತಹ ಸರಳ ವಿಧಾನದ ಮೂಲಕವೂ ಮಳೆನೀರನ್ನು ಸದ್ಬಳಕೆ ಮಾಡಬಹುದಾಗಿದೆ.

ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್, ಕೃಷಿಕರೊಬ್ಬರ ಸೋಮಾರಿ ಐಡಿಯಾ ಕ್ಲಿಕ್!

ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯ ಮಳೆ ನೀರು ಕುಯ್ಲು ಅನುಷ್ಠಾನವಾಗಲಿದ್ದು ಇನ್ನುಳಿದ ಪಂಚಾಯಿತಿಗಳೂ ಕೂಡಾ ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಲ್ಲಿ
ನಿಶ್ಚಿತವಾಗಿಯೂ ಜಲಕ್ಷಾಮ ನೀಗಲಿದೆ. ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಇದನ್ನು ಅಳವಡಿಸಬಹುದಾಗಿದ್ದು, ಪಂಚಾಯತಿಯ ಈ ಯೋಜನೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದ್ದಾರೆ. 

ಮಳೆ ಕೊಯ್ಲು ಅನಿವಾರ್ಯ:
ಭೀಕರ ಬರಗಾಲದಿಂದ ಮುಂದಿನ ದಿನಗಳಲ್ಲಿ ಕುಡಿಯಲೂ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ಬಾರಿಯ ಬರಗಾಲದ ತೀವ್ರತೆಯನ್ನು ಅರಿತು ಕಳೆದ ೩ ತಿಂಗಳ ಹಿಂದೆಯೇ ಈ ಕುರಿತು ಯೋಜನೆ ಸಿದ್ಧಪಡಿಸಲಾಗಿತ್ತು ಎಂದು ಮರ್ಣೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios