ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್‌ಗಾಂಧಿಗೆ ಮಂಗಳಮುಖಿಯೊಬ್ಬರು ಮನವಿಪತ್ರವೊಂದನ್ನು ಕೊಟ್ಟು ದೃಷ್ಟಿತೆಗೆದ ಘಟನೆ ಶ್ರೀರಂಗಪಟ್ಟಣದ ಪರಿವರ್ತನ ಶಾಲೆ ಎದುರು ನಡೆಯಿತು

ಮಂಡ್ಯ (ಅ,04): ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್‌ಗಾಂಧಿಗೆ ಮಂಗಳಮುಖಿಯೊಬ್ಬರು ಮನವಿಪತ್ರವೊಂದನ್ನು ಕೊಟ್ಟು ದೃಷ್ಟಿತೆಗೆದ ಘಟನೆ ಶ್ರೀರಂಗಪಟ್ಟಣದ ಪರಿವರ್ತನ ಶಾಲೆ ಎದುರು ನಡೆಯಿತು. ಪಾದಯಾತ್ರೆಯಲ್ಲಿ ಆಗಮಿಸಿ ವಾಪಸ್‌ ಮೈಸೂರಿಗೆ ತೆರಳುವ ವೇಳೆ ಈ ಅಪರೂಪದ ಘಟನೆ ನಡೆದಿದ್ದು, ರಾಹುಲ್‌ ಜೀ ಮುಂದಿನ ಪಿಎಂ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಇದೇ ವೇಳೆ ರಾಹುಲ್‌ ಕಾರಿನಲ್ಲಿ ತೆರಳುವ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು, ಅಭಿಮಾನಿಗಳು ಕಾರಿನ ಮೇಲೆ ಮುಗಿಬಿದ್ದರು.

ರಾಹುಲ್‌ಗೆ ಕೊಡಲು ಟಗರು ತಂದಿದ್ದ ಅಭಿಮಾನಿ..!

ಭಾರತ್‌ ಜೋಡೋ ಯಾತ್ರೆ ಸಮಯದಲ್ಲಿ ಅಭಿಮಾನಿಯೊಬ್ಬ ಕಾಂಗ್ರೆಸ್‌ (Congress) ಯುವರಾಜನಿಗೆ ಉಡುಗೊರೆಯಾಗಿ ನೀಡಲು ಟಗರು ಮರಿಯನ್ನು ಹೊತ್ತು ತಂದಿದ್ದ. ರಾಹುಲ್‌ಗೆ ಕರಿಕಂಬಳಿ ಹೊದಿಸಿ ಗೌರವಿಸುವುದರೊಂದಿಗೆ ಟಗರನ್ನು ನೀಡಲು ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಕಾದು ನಿಂತಿದ್ದ. ಆದರೆ, ರಾಹುಲ್‌(Rahul) ಆಗಮನದ ವೇಳೆ ತಳ್ಳಾಟ-ನೂಕಾಟ ಉಂಟಾಯಿತು. ಹೀಗಾಗಿ, ಭದ್ರತೆಯ ದೃಷ್ಟಿಯಿಂದ ಟಗರನ್ನು ಉಡುಗೊರೆ ನೀಡುವುದಕ್ಕೆ ವಿಶೇಷ ರಕ್ಷಣಾ ಪಡೆಯವರು ಅವಕಾಶ ನೀಡಲಿಲ್ಲ. ಇದರಿಂದ ಅಭಿಮಾನಿಯ ಆಸೆ ಈಡೇರಲಿಲ್ಲ.

ಮೈಸೂರಿಗೆ ಸೋನಿಯಾ ಆಗಮನ

 ತಮ್ಮ ಪುತ್ರ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸೋಮವಾರ ಮೈಸೂರಿಗೆ ಆಗಮಿಸಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ವಿಶೇಷ ವಿಮಾನದಲ್ಲಿ ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ವಾಗತಿಸಿದರು. ಈ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲ, ಸಂಸದ ಡಿ.ಕೆ. ಸುರೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌, ಮಾಜಿ ಸಚಿವರಾದ ಕೆ.ಜೆ. ಜಾಜ್‌ರ್‍, ಎಂ.ಬಿ. ಪಾಟೀಲ್‌, ಶಾಸಕರಾದ ಲಕ್ಷೀ್ಮ ಹೆಬ್ಬಾಳ್ಕರ್‌, ಡಾ.ಡಿ. ತಿಮ್ಮಯ್ಯ, ಕೇರಳದ ಶಾಸಕ ವಿಶ್ವನಾಥನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌ ಹಾಗೂ ಇತರ ನಾಯಕರು ಹಾಜರಿದ್ದರು.

ಬಳಿಕ, ರಸ್ತೆ ಮೂಲಕ ಹೂಟಗಳ್ಳಿಯಲ್ಲಿರುವ ಸೈಲೆಂಟ್‌ ಸೋ​ರ್‍ಸ್ ರೆಸಾರ್ಚ್‌ಗೆ ತೆರಳಿ, ಮಧ್ಯಾಹ್ನದ ಭೋಜನ ಸವಿದರು. ಬಳಿಕ, ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಬಳಿಯ ಆರೇಂಜ್‌ ರೆಸಾರ್ಚ್‌ಗೆ ತೆರಳಿದರು. ಸಂಜೆ ರಾಹುಲ… ಕೂಡ ರೆಸಾರ್ಚ್‌ಗೆ ಆಗಮಿಸಿದ್ದು, ಅಲ್ಲಿ ಅವರು ಎರಡು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಶಾಸಕ ಅನಿಲ… ಚಿಕ್ಕಮಾದು ಜೊತೆಯಲ್ಲಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಅ.6 ರಂದು ಪಾಂಡವಪುರದಿಂದ ಆರಂಭವಾಗಲಿರುವ ಭಾರತ ಜೋಡೋ ಯಾತ್ರೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ಧಾರ್ಮಿಕ ಮುಖಂಡರ ಜತೆ ಚರ್ಚೆ

ರಾಹುಲ್‌ ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ಸೋಮವಾರ ಸರ್ವಧರ್ಮಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ರಾಜ್ಯದಲ್ಲಿ ಯಾತ್ರೆಯ 4ನೇ ದಿನವಾದ ಸೋಮವಾರ ರಾಹುಲ್‌ ಗಾಂಧಿಯವರು ಮೈಸೂರಿನ ಚಾಮುಂಡಿ ಬೆಟ್ಟ, ಅಜಮ್‌ ಮಸೀದಿ ಹಾಗೂ ಸಂತ ಫಿಲೋಮಿನಾ ಚಚ್‌ರ್‍ಗಳಿಗೆ ಭೇಟಿ ನೀಡಿದರು.

ಮುಂಜಾನೆಯ ಚಳಿಯ ನಡುವೆಯೇ ಬೆಳಗ್ಗೆ 6.30ಕ್ಕೆ ಮೈಸೂರಿನ ಹಾರ್ಡಿಂಜ್‌ ವೃತ್ತಕ್ಕೆ ಆಗಮಿಸಿದ ರಾಹುಲ್‌, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪಾದಯಾತ್ರೆ ಆರಂಭಿಸಿದರು. ಈ ವೇಳೆ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಸರ್ವಧರ್ಮದವರು ಆಗಮಿಸಿ, ಪಾದಯಾತ್ರೆಗೆ ಶುಭ ಕೋರಿದರು. ಬಳಿಕ, ಪಾದಯಾತ್ರೆಯು ಲಷ್ಕರ್‌ ಮೊಹಲ್ಲಾ ಗರಡಿ ಕೇರಿಯಲ್ಲಿನ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇವಸ್ಥಾನದ ವತಿಯಿಂದ ಅರಮನೆ ಮಾದರಿಯ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಮಸೀದಿ, ಚರ್ಚ್ ಭೇಟಿ: ಬಳಿಕ ಮಿಲಾದ್‌ ಬಾಗ್‌ ಎದುರಿನಲ್ಲಿರುವ ಅಜಮ್‌ ಮಸೀದಿಗೆ ಭೇಟಿ ನೀಡಿದ ರಾಹುಲ್‌, ಅಲ್ಲಿನ ಧಾರ್ಮಿಕ ಮುಖಂಡರೊಂದಿಗೆ 5 ನಿಮಿಷ ಮಾತುಕತೆ ನಡೆಸಿದರು. ನಂತರ ಸಮೀಪದಲ್ಲೇ ಇದ್ದ ಸಂತ ಫಿಲೋಮಿನಾ ಚಚ್‌ರ್‍ಗೆ ಭೇಟಿ ನೀಡಿ, ಮೈಸೂರು ಬಿಷಪ್‌ ಡಾ.ಕೆ.ವಿ.ವಿಲಿಯಂ ಹಾಗೂ ಫಾದರ್‌, ಸಿಸ್ಟರ್‌ಗಳೊಂದಿಗೆ 5 ನಿಮಿಷ ಮಾತುಕತೆ ನಡೆಸಿ, ಪಾದಯಾತ್ರೆ ಮುಂದುವರಿಸಿದರು.

ಬಳಿಕ ಯಾತ್ರೆ ಶ್ರೀರಂಗಪಟ್ಟಣದ ಲಕ್ಷ್ಮೇಪುರ ಗೇಟ್‌ ಮೂಲಕ ಮಂಡ್ಯ ಜಿಲ್ಲೆಗೆ ಆಗಮಿಸಿತು. ಶ್ರೀರಂಗಪಟ್ಟಣದ ಪರಿವರ್ತನ ಶಾಲೆಗೆ ಆಗಮಿಸುತ್ತಿದ್ದಂತೆ, ಸೋನಿಯಾ ಗಾಂಧಿಯವರು ಮೈಸೂರಿಗೆ ಬರುವ ವಿಷಯ ತಿಳಿಯಿತು. ತಕ್ಷಣವೇ ಪಾದಯಾತ್ರೆ ಮೊಟಕುಗೊಳಿಸಿ, ಕಾರಿನಲ್ಲಿ ಮತ್ತೆ ಮೈಸೂರಿಗೆ ಆಗಮಿಸಿ, ಚಾಮುಂಡಿ ಬೆಟ್ಟಕ್ಕೆ ತೆರಳಿದರು. ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ದೇವಸ್ಥಾನದ ಅರ್ಚಕರು ಅವರಿಗೆ ಹೂವಿನ ಹಾರ ಹಾಕಿ, ಶಾಲು ಹೊದೆಸಿ ಗೌರವಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಹಾಗೂ ಇತರ ನಾಯಕರು ಅವರಿಗೆ ಸಾಥ್‌ ನೀಡಿದರು.