Asianet Suvarna News Asianet Suvarna News

ಸಾರ್ವಜನಿಕರ ಅರ್ಜಿಯನ್ನು ತಿರಸ್ಕರಿಸಬಾರದು :ಸಚಿವ ಡಾ. ಜಿ.ಪರಮೇಶ್ವರ್

ಸಾರ್ವಜನಿಕರಿಂದ ಯಾವುದೇ ಅರ್ಜಿ ಬಂದಲ್ಲಿ ಅದನ್ನು ತಿರಸ್ಕರಿಸಬಾರದು. ಆದಷ್ಟು ಸಕಾರಾತ್ಮಕವಾಗಿ ಸ್ಪಂದಿಸುವಂತಹ ಕೆಲಸ ಸರ್ಕಾರಿ ಅಧಿಕಾರಿ/ನೌಕರ ವಲಯದಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

Publics application should not be rejected: Minister Dr G  Parameshwar snr
Author
First Published Sep 26, 2023, 11:07 AM IST

 ತುಮಕೂರು :  ಸಾರ್ವಜನಿಕರಿಂದ ಯಾವುದೇ ಅರ್ಜಿ ಬಂದಲ್ಲಿ ಅದನ್ನು ತಿರಸ್ಕರಿಸಬಾರದು. ಆದಷ್ಟು ಸಕಾರಾತ್ಮಕವಾಗಿ ಸ್ಪಂದಿಸುವಂತಹ ಕೆಲಸ ಸರ್ಕಾರಿ ಅಧಿಕಾರಿ/ನೌಕರ ವಲಯದಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರಿನ ಗಾಜಿನ ಮನೆ ಅಮಾನಿಕೆರೆ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜನರ ಬಳಿಗೆ ಸರ್ಕಾರವೇ ತೆರಳುವ ಕಾರ್ಯಕ್ರಮ ಜನತಾ ದರ್ಶನ ಕಾರ್ಯಕ್ರಮವಾಗಿದ್ದು, ಈ ಮೂಲಕ ನಮ್ಮ ಸರ್ಕಾರ ಜನಪರ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದು, ನುಡಿದಂತೆ ನಡೆಯುತ್ತಿದ್ದೇವೆ ಎಂದು ತಿಳಿಸಿದರು.

ಜನರ ಸಮಸ್ಯೆಗಳು ಜಿಲ್ಲಾ ಮಟ್ಟದಲ್ಲಿಯೇ ಬಗೆಹರಿಯಬೇಕು. ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಕೆಲಸ ಆಗಬಾರದು ಎಂಬ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಇಂದಿನಿಂದ ಜನತಾದರ್ಶನ ಕಾರ್ಯಕ್ರಮ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುತ್ತಿದೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ 3 ದಿನಗಳ ಹಿಂದೆಯೇ ವಿವಿಧ ಇಲಾಖೆಗಳ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಗೆ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಪದ್ದತಿ ಜನರನ್ನು ಜಿಲ್ಲಾ ಮಟ್ಟದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗುತ್ತದೆ. ಇದು ಒಂದು ದಿನಕ್ಕೆ ಮುಗಿಯುವುದಿಲ್ಲ. ಪ್ರತಿ ತಿಂಗಳು ಒಂದೊಂದು ತಾಲೂಕಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿಮ್ಮ ತಾಲೂಕಿಗೆ ಬರುತ್ತಾರೆ ಎಂದು ತಿಳಿಸಿದರು.

ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ತಾಲೂಕು ಮಟ್ಟ/ ಹೋಬಳಿ ಮಟ್ಟ/ ಗ್ರಾಮಪಂಚಾಯತಿ ಮಟ್ಟದಲ್ಲೂ ಆಗಬೇಕಿದೆ. ಜನರ ಕೆಲಸಗಳು ಪ್ರಾಥಮಿಕವಾಗಿ ಪ್ರಾರಂಭವಾಗುವ ಸ್ಥಳ ಗ್ರಾ.ಪಂ ಅಲ್ಲಿ ಸಮಸ್ಯೆ ಬಗೆಹರಿದಲ್ಲಿ ಜನರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕೇಂದ್ರಗಳಿಗೆ ತರುವುದಿಲ್ಲ ಎಂದರು.

ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳಲ್ಲಿ ತಾಂತ್ರಿಕತೆ ಬಳಸಿಕೊಂಡು ಜನರ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಅಕ್ಷರಸ್ಥರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಮೀಣ ಜನತೆಗೂ ಸಹ ಸರ್ಕಾರಿ ಕೆಲಸ ಕಾರ್ಯಗಳ ಮೂಲಕ ತಾಂತ್ರಿಕತೆಯನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜನತಾ ದರ್ಶನದಲ್ಲಿ ಸಲ್ಲಿಸಲು ಬರುವ ಶೇ.70 ರಿಂದ 80 ರಷ್ಟು ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ. ಜನರ ಸಮಸ್ಯೆಗಳನ್ನು ಮಾನವೀಯ ಹಿನ್ನೆಲೆಯಲ್ಲಿ ಆಲಿಸಿ ಇತ್ಯರ್ಥಪಡಿಸುವುದೇ ಜನತಾ ದರ್ಶನ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ, ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ರಾಜಧಾನಿ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರಗಳಲ್ಲಿ ಜನತಾದರ್ಶನ ಕಾರ್ಯಕ್ರಮಕ್ಕೆ ಸೂಚನೆ ನೀಡಿದ ಮೇರೆಗೆ ಇಂದು ರಾಜ್ಯದ ಎಲ್ಲೆಡೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯುತ್ತಿದ್ದು, ಅದರಂತೆ ಗೃಹ ಸಚಿವರ ನೇತೃತ್ವದಲ್ಲಿ ತುಮಕೂರಿನಲ್ಲಿಯೂ ಸಹ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರು ವಂದನಾರ್ಪಣೆ ಸಲ್ಲಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಕಚೇರಿಗಳಲ್ಲೂ ಸಹ ಜನರ ಸಮಸ್ಯೆಗಳನ್ನು ಆಲಿಸುವಂತಹ ಕಾರ್ಯಕ್ರಮ ಆಗಬೇಕು. ಐಪಿಜಿಆರ್‌ಎಸ್ ಮೂಲಕ ಜನರ ಸಮಸ್ಯೆಗಳಿಗೆ ತಾರ್ಕಿತ ಅಂತ್ಯವನ್ನು ಆಡಬೇಕಿದ್ದು, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. \

ಈ ಸಂದರ್ಭ ಸಾಂಕೇತಿಕವಾಗಿ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ವೃದ್ಧಾಪ್ಯವೇತನ ಸೌಲಭ್ಯಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ಸಹಾಯಧನವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತುಮಕೂರು ಪ್ರಾದೇಶಿಕ ಆಯುಕ್ತರಾದ ತುಳಸಿ ಮದ್ದಿನೇನಿ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮೇಯರ್ ಪ್ರಭಾವತಿ, ಶಾಸಕ ವೆಂಕಟೇಶ್ ಉಪಸ್ಥಿತರಿದ್ದರು.

ಇಲಾಖಾವಾರು ಪರಿಶೀಲನೆ

ಇಂದಿನ ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದಂತಹ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ತಹಸೀಲ್ದಾರರು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇಟ್ಟುಕೊಳ್ಳದೆ ನಿಗದಿತ ಅವಧಿಯೊಳಗಾಗಿ ವಿಲೇವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಅರ್ಜಿ ದಾಖಲಾದ ದಿನ, ವಿಲೇವಾರಿಯಾದ ದಿನಾಂಕವನ್ನೂ ಸಹ ಇಲಾಖಾವಾರು ಪರಿಶೀಲಿಸುವುದಾಗಿ ಪರಮೇಶ್ವರ್‌ ತಿಳಿಸಿದರು.

ಐಪಿಜಿಆರ್‌ಎಸ್ ಮೂಲಕ ಅಹವಾಲು ಸಲ್ಲಿಸಿ

ಸಾರ್ವಜನಿಕರು ಐಪಿಜಿಆರ್‌ಎಸ್ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿರುತ್ತದೆ ಮತ್ತು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇನ್ನು 10-15 ದಿನಗಳೊಳಗಾಗಿ ಇತ್ಯರ್ಥಪಡಿಸುವುದಾಗಿ ಜಿಲ್ಲಾಧಿಕಾರಿ ಶ್ರೀನಿವಾಸ್‌ ತಿಳಿಸಿದರು.

Follow Us:
Download App:
  • android
  • ios