ಕನ್ನಡ ಧ್ವಜ ಹಿಡಿದಿದ್ದ ವಿದ್ಯಾರ್ಥಿಯ ಮೇಲೆ ಮರಾಠಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆಯ ಸಂಬಂಧ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕೊನೆಗೂ ಮಣಿದ ಪೊಲೀಸರು

ಬೆಳಗಾವಿ(ಡಿ.03): ನಗರದ ಕಾಲೇಜೊಂದರಲ್ಲಿ ಇತ್ತೀಚೆಗೆ ಕನ್ನಡ ಧ್ವಜ ಹಿಡಿದಿದ್ದ ವಿದ್ಯಾರ್ಥಿಯ ಮೇಲೆ ಮರಾಠಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆಯ ಸಂಬಂಧ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕೊನೆಗೂ ಪೊಲೀಸರು ಮಣಿದಿದ್ದಾರೆ. ಘಟನೆ ನಡೆದ ಎರಡು ದಿನಗಳ ನಂತರ ಒಬ್ಬ ಪುಂಡನನ್ನು ಬಂಧಿಸಿರುವ ಪೊಲೀಸರು, ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಕೆಎಲ್‌ಎಸ್‌ನ ಗೋಗಟೆ ಕಾಲೇಜಿನಲ್ಲಿ ಬುಧವಾರ ರಾತ್ರಿ ಅಂತರ್‌ ಕಾಲೇಜು ಉತ್ಸವದ ವೇಳೆ ಕನ್ನಡ ಧ್ವಜ ಹಿಡಿದು ವಿದ್ಯಾರ್ಥಿಯೊಬ್ಬ ಕುಣಿಯುತ್ತಿದ್ದಾಗ ಮರಾಠಿ ವಿದ್ಯಾರ್ಥಿಗಳು ಆತನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ನಂತರ ಪೊಲೀಸರಿಂದಲೂ ಕನ್ನಡಿಗ ವಿದ್ಯಾರ್ಥಿ ಮೇಲೆ ಬೂಟಿನಿಂದ ಹಲ್ಲೆಯಾಗಿದೆ ಎನ್ನಲಾಗಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. 

ಗಡಿ ಕನ್ನಡಿಗರ ಹಿತರಕ್ಷಣೆಗೆ ಸಿಎಂ ಬೊಮ್ಮಾಯಿ ಶಪಥ: ಬೆಳಗಾವಿಯಲ್ಲೇ ನಿಂತು ಮಹಾರಾಷ್ಟ್ರಕ್ಕೆ ಕಠಿಣ ಸಂದೇಶ

ಘಟನೆಗೆ ಸಂಬಂಧಿಸಿ ನಗರದ ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರಂತೆ ಇದೀಗ ಒಬ್ಬ ಆರೋಪಿಯನ್ನು ಬಂಧಿಸಿ, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಗೋಗಟೆ ಕಾಲೇಜಿನಲ್ಲಿ ಕನ್ನಡದ ಧ್ವಜ ಹಿಡಿದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿತ್ತು.