'ದುರಾದೃಷ್ಟಕರ ಲಿವಿಂಗ್ ಟುಗೇದರ್ : ಹೆಣ್ಣು ಮಕ್ಕಳ ಬದುಕು ಹಾಳು'
ದುರಾದೃಷ್ಟಕರವಾದ ಲಿವಿಂಗ್ ಟುಗೆದರ್ ಸಂಸ್ಕೃತಿಯಿಂದ ಹೆಣ್ಣು ಮಕ್ಕಳ ಬದುಕು ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು ಹಿರಿಯ ಕವಿ ದೊಡ್ಡರಂಗೇಗೌಡ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು (ಜ.28): ಪ್ರಸ್ತುತ ದಿನಗಳಲ್ಲಿ ಕಂಡು ಬರುತ್ತಿರುವ ಲಿವಿಂಗ್ ಟುಗೆದರ್ ಸಂಸ್ಕೃತಿಯಿಂದ ಸಮಾಜವು ದುರಾದೃಷ್ಟಕರ ಸನ್ನಿವೇಶ ಕಾಣುವಂತಾಗಿದೆ ಎಂದು ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರು ಹೇಳಿದರು.
ಕುವೆಂಪು ಕಲಾನಿಕೇತನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ರಾಷ್ಟ್ರಕವಿ ಕುವೆಂಪು ಅವರ 117ನೇ ಜಯಂತಿ, ಕುವೆಂಪು ಸಾಂಸ್ಕೃತಿಕ ಉತ್ಸವ ಹಾಗೂ ಶ್ರೀರಕ್ಷಾ ಮಂತ್ರಮಾಂಗಲ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಚಾಲ್ತಿ ಇರುವ ಲಿವಿಂಗ್ ಟುಗೆದರ್ ಸಂಸ್ಕೃತಿಯಿಂದ ಹೆಣ್ಣು ಮಕ್ಕಳ ಬದುಕು ಹಾಳಾಗುತ್ತಿದೆ. ಆರಂಭದಲ್ಲಿ ನಾಲ್ಕಾರು ತಿಂಗಳು ಜೊತೆಗಿರುವ ಹೆಣ್ಣು-ಗಂಡು ನಂತರ ಪರಸ್ಪರ ದೂರವಾಗುತ್ತಾರೆ. ಅವರ ನಡುವಿನ ಸಂಬಂಧ ಮುರಿದು ಬೀಳುತ್ತದೆ. ಇದು ವಿವಾಹ ಬಂಧನಕ್ಕೆ ವಿರುದ್ಧವಾದದು ಎಂದು ಹೇಳಿದರು.
ಸಾಂಪ್ರದಾಯಿಕವಾಗಿ, ಜಾತಿಗನುಗುಣವಾಗಿ ವಿವಾಹವಾಗುತ್ತಿದ್ದ ಕಾಲದಲ್ಲಿ ಕವಿ ಕುವೆಂಪು ‘ಮಂತ್ರಮಾಂಗಲ್ಯ ಪದ್ಧತಿ’ ನೀಡಿ ವೈಚಾರಿಕ ಯುಗ ಹುಟ್ಟು ಹಾಕಿದರು. ಜಾತಿ, ಸಾಂಪ್ರದಾಯಕ್ಕೆ ಮೀರಿದ, ಪುರೋಹಿತ ರಹಿತ ಅತ್ಯಂತ ಸರಳ ಮದುವೆಗೆ ನಾಂದಿ ಹಾಡಿದರು. ಕುವೆಂಪು ಸೂಚಿಸಿರುವ ಈ ವಿವಾಹ ಪದ್ಧತಿಯಲ್ಲಿ ಜಾತೀಯತೆ, ಹೆಣ್ಣಿಗೆ ವರದಕ್ಷಿಣೆ ಕಿರುಕುಳ, ವೈಭವ ಮತ್ತು ಅದ್ಧೂರಿತನ, ಖರ್ಚಿಗೆ ಅವಕಾಶವೇ ಇಲ್ಲ. ಹೀಗಾಗಿ ಯುವ ಸಮುದಾಯ ಮಂತ್ರಮಾಂಗಲ್ಯ ವಿವಾಹದೆಡೆಗೆ ಹೆಚ್ಚು ಒಲವು ತೋರಬೇಕು ಎಂದರು.
ಹಿಂದಿ ಭಾರತದ ರಾಷ್ಟ್ರಭಾಷೆ ಹೇಳಿಕೆ: ದೊಡ್ಡರಂಗೇಗೌಡ ವಿರುದ್ಧ ಕಸಂಸ ತೀವ್ರ ಆಕ್ರೋಶ ...
ಈ ವೇಳೆ ಹಿರಿಯ ಕವಿ ದೊಡ್ಡರಂಗೇಗೌಡರು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ದಂಪತಿಗೆ ‘ಶ್ರೀರಕ್ಷಾ ಮಂತ್ರಮಾಂಗಲ್ಯ ಪ್ರಶಸ್ತಿ’ ಹಾಗೂ ವಿವಿಧ ಪುರಸ್ಕೃತರಿಗೆ ‘ಶ್ರೀರಕ್ಷಾ ಮಂತ್ರ ಮಾಂಗಲ್ಯ ಆದರ್ಶ ದಂಪತಿ ಪ್ರಶಸ್ತಿ’, ‘ಕುವೆಂಪು ವಿಶ್ವಮಾನವ ಪ್ರಶಸ್ತಿ’ ನೀಡಿ ಗೌರವಿಸಿದರು.
ಶ್ರೀ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮಿ, ನಟಿ ಅಭಿನಯ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಡಾ
ವೂಡೇ ಪಿ.ಕೃಷ್ಣ, ಕಸಾಪ ಮಾಜಿ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಸಾಹಿತಿ ಪ್ರೊ.ಎಲ್.ಎನ್.ಮುಕುಂದರಾಜ್, ಕಲಾನಿಕೇತನದ ಅಧ್ಯಕ್ಷ ಕುವೆಂಪು ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.