ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಲಿ : ಸಿದ್ದರಾಮಯ್ಯ
ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳನ್ನು ಮೊದಲು ನಿಷೇಧಿಸಲಿ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮಂಗಳೂರು (ಫೆ.23): ಪಿಎಫ್ಐ, ಎಸ್ಡಿಪಿಐ-ಬಿಜೆಪಿಯ ‘ಬಿ’ ಟೀಂ. ಅವರನ್ನು ಬೆಳೆಸುತ್ತಿರುವುದೇ ಬಿಜೆಪಿ. ಈ ಸಂಘಟನೆಗಳ ನಿಷೇಧಕ್ಕೆ ಸಾಕಷ್ಟುಸಾಕ್ಷ್ಯ ಇದೆ ಎಂದು ಸ್ವತಃ ಮುಖ್ಯಮಂತ್ರಿ, ಗೃಹ ಸಚಿವರೇ ಹೇಳಿದ್ದಾರೆ. ಹಾಗಿದ್ದರೆ ಮೊದಲು ಈ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಘಟಕದಿಂದ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ‘ಭಾವೈಕ್ಯತಾ ಸಮಾವೇಶ’ದಲ್ಲಿ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿ ಸಿದ್ದರಾಮಯ್ಯ ಈ ಆಗ್ರಹ ಮಾಡಿದರು.
ಎಸ್ಡಿಪಿಐ, ಪಿಎಫ್ಐನವರು ಬಿಜೆಪಿಗೆ ಹಿಂಬಾಗಿಲಿಂದ ಸಹಾಯ ಮಾಡುವವರು. ಬೆಂಗಳೂರಿನ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಯಲ್ಲಿ ಈ ಸಂಘಟನೆಗಳ ಕೈವಾಡ ಇದೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಬಹಿರಂಗ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಇತ್ತೀಚೆಗೆ ಪಿಎಫ್ಐಗೆ ರಾರಯಲಿ ಮಾಡಲು ಬಿಜೆಪಿಯವರೇ ಅನುಮತಿ ನೀಡಿದ್ದಾರೆ. ಎಲ್ಲ ಕಡೆಯಲ್ಲೂ ಬಿಜೆಪಿಯವರೇ ಇರುವಾಗ, ನಿಷೇಧಕ್ಕೆ ಸಾಕಷ್ಟುಸಾಕ್ಷ್ಯವೂ ಇರುವಾಗ ಬ್ಯಾನ್ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಮಾತ್ರ ಲಾಭ: ಕಳೆದ ಚುನಾವಣೆಯಲ್ಲಿ ಬಿಹಾರದಲ್ಲಿ ಎಂಐಎಂ ಪಕ್ಷದವರು ಸ್ಪರ್ಧಿಸಿ ಮುಸ್ಲಿಮರ ಓಟು ಪಡೆದರು. ಆದರೆ, ಇದರಿಂದ ಲಾಭವಾಗಿದ್ದು ಮಾತ್ರ ಬಿಜೆಪಿಗೆ. ಕರ್ನಾಟಕದಲ್ಲೂ ಪಿಎಫ್ಐ, ಎಸ್ಡಿಪಿಐ ಮೂಲಕ ಬಿಜೆಪಿ ಓಟು ಪಡೆಯುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಎಸ್ಡಿಪಿಐ, ಪಿಎಫ್ಐ, ಎಂಐಎಂ ಮಾತು ಕೇಳಬೇಡಿ ಎಂದರು.
ಆರೆಸ್ಸೆಸ್ ಜಾತಿ ಸಂಘಟನೆ:
ಆರೆಸ್ಸೆಸ್ ಎನ್ನುವುದು ಜಾತಿ ಸಂಘಟನೆ. ಅವರು ತಾವು ದೇಶ ಪ್ರೇಮಿಗಳು ಅಂತಾರೆ. ಹಾಗಿದ್ದರೆ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಏನು? ಆರೆಸ್ಸೆಸ್ನಿಂದ ಯಾರೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿದ್ದರಿಂದ ರೈತರಿಗೆ ಹೊಡೆತ ಬಿದ್ದಿದೆ. ಬೀಫ್ ಆಹಾರ ಸಂಸ್ಕೃತಿ. ಅದನ್ನು ತಡೆಯಲು ನೀವ್ಯಾರು? ನಾನು ಈವರೆಗೂ ಬೀಫ್ ತಿಂದಿಲ್ಲ. ತಿನ್ನಬೇಕಾದರೆ ತಿಂತೀನಿ. ನೀವ್ಯಾರು ಕೇಳುವುದಕ್ಕೆ ಎಂದು ಪುನರುಚ್ಚರಿಸಿದ ಅವರು, ಗೋಹತ್ಯಾ ನಿಷೇಧ ಕಾನೂನನ್ನು ಅನಗತ್ಯವಾಗಿ, ಅದೂ ಕೂಡ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯದಲ್ಲೇನು ತುರ್ತು ಪರಿಸ್ಥಿತಿ ಇದೆಯೇ ಎಂದು ಪ್ರಶ್ನಿಸಿದರು.
ನಮ್ಮೂರ ರಾಮಮಂದಿರಕ್ಕೆ ಹಣಕೊಟ್ರೆ ಆಗಲ್ವಾ?: ಸಿದ್ದು
ಉಡುಪಿ/ಪಡುಬಿದ್ರಿ: ನಾನು ಅಯೋಧ್ಯೆ ರಾಮಮಂದಿರಕ್ಕೆ ಹಣ ಕೊಡಲ್ಲ, ನಮ್ಮೂರ ರಾಮನೂ ದಶರಥನ ಮಗನೇ, ನಮ್ಮೂರ ರಾಮನಿಗೆ ಹಣ ಕೊಟ್ರೆ ಆಗಲ್ವಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ನಿಂದ ಉಡುಪಿ ಜಿಲ್ಲೆಯ ದಕ್ಷಿಣದ ಹೆಜಮಾಡಿ ಗಡಿಯಿಂದ ಉತ್ತರದ ಬೈಂದೂರು ಗಡಿವರೆಗೆ 6 ದಿನಗಳ 108 ಕಿ.ಮೀ. ಪಾದಯಾತ್ರೆ-ಜನಧ್ವನಿಯಂಗವಾಗಿ ಪಡುಬಿದ್ರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಹಾಗೂ ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ರಾಮಮಂದಿರ ದೇಣಿಗೆ ವಿಚಾರವಾಗಿ ತಮ್ಮ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಪ್ರತಿಕ್ರಿಯಿಸಿದರು.
ನಾನೂ ಹಿಂದು, ನನ್ನ ಹೆಸರಲ್ಲೇ ರಾಮ ಇದ್ದಾನೆ. ನಮ್ಮದು ಮಹಾತ್ಮಾ ಗಾಂಧಿ ಹಿಂದುತ್ವ, ಬಿಜೆಪಿಯವರದ್ದು ಸಾವರ್ಕರ್ ಹಿಂದುತ್ವ. ಹಿಂದುತ್ವ ಎಂದರೆ ಹೊಟ್ಟೆತುಂಬುತ್ತದೆಯೇ? ನಾನು ಸಿಎಂ ಆಗಿದ್ದಾಗ ನೀಡಿದ್ದ 7 ಕೆ.ಜಿ. ಉಚಿತ ಅಕ್ಕಿಯಲ್ಲಿ ಬಿಜೆಪಿ ಸರ್ಕಾರ 2 ಕೆ.ಜಿ. ತಿಂದು ಹಾಕುತ್ತಿದೆ. ಅಚ್ಚೇ ದಿನ್ ಗಯಾ, ಬುರೇ ದಿನ್ ಆಗಯಾ, ಕರಾಬ್ ದಿನ್ ಆಗಯಾ ಎಂದರು. ಜತೆಗೆ, ನಾನು ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.