ಮತ್ತೆ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಭುಗಿಲೇಳುವ ಸಾಧ್ಯತೆ ಇದೆ. ಕಸದ ವಿಲೇವಾರಿಗೆ ಜನರಿಂದ ವಿರೋಧ ವ್ಯಕ್ತವಾಗಿದೆ. 

ಬೆಂಗಳೂರು [ಆ.22]: ಬೆಳ್ಳಳ್ಳಿ ಕಲ್ಲು ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ವಿರೋಧಿಸಿ ಸ್ಥಳೀಯರು ಗುರುವಾರದಿಂದ ಪ್ರತಿಭಟನೆಗೆ ಮುಂದಾಗಿದ್ದು, ಇದರಿಂದ ನಗರದಲ್ಲಿ ಕಸದ ಸಮಸ್ಯೆ ಎದುರಾಗಲಿದೆ.

Add Asianetnews Kannada as a Preferred SourcegooglePreferred

ಬೆಳ್ಳಳ್ಳಿ ಕ್ವಾರಿ ಪ್ರದೇಶದ ಸುತ್ತಿನ ಗ್ರಾಮಗಳಲ್ಲಿ ರಸ್ತೆ, ನೀರು ಸೇರಿ ಇನ್ನಿತರ ಮೂಲಸೌಕರ್ಯ ಒದಗಿಸುವುದಾಗಿ ಬಿಬಿಎಂಪಿ ತಿಳಿಸಿತ್ತು. ಅದಕ್ಕಾಗಿ ಬಜೆಟ್‌ನಲ್ಲೂ ಹಣ ಮೀಸಲಿಡಲಾಗಿತ್ತು. ಆದರೆ, ರಾಜ್ಯ ಸಕಾರ ಬಜೆಟ್‌ ತಡೆ ಹಿಡಿದಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಪಾಲಿಕೆ ನಿಗಧಿ ಪಡಿಸಿದ್ದ 110 ಕೋಟಿ ರು. ಬಿಡುಗಡೆ ಮಾಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಜತೆಗೆ ನಗರದಲ್ಲಿ ತ್ಯಾಜ್ಯ ತುಂಬಿಕೊಂಡು ಕ್ವಾರಿಗೆ ಹೋಗುವ ಲಾರಿಗಳನ್ನು ಬೆಳ್ಳಳ್ಳಿ ಕ್ವಾರಿ ಪ್ರವೇಶ ದ್ವಾರದಲ್ಲಿ ತಡೆಯುವ ಎಚ್ಚರಿಕೆ ನೀಡಿದ್ದಾರೆ.

ಎರಡು ಸಾವಿರ ಟನ್‌ ತ್ಯಾಜ್ಯ: ನಗರದಲ್ಲಿ ಪ್ರತಿನಿತ್ಯ ಸುಮಾರು 5800 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 2 ಸಾವಿರ ಟನ್‌ಗೂ ಹೆಚ್ಚಿನ ಮಿಶ್ರ ತ್ಯಾಜ್ಯವನ್ನು ಬೆಳ್ಳಳ್ಳಿ ಕಲ್ಲು ಕ್ವಾರಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಒಂದು ದಿನ ಅಲ್ಲಿಗೆ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡರೆ ನಗರದಾದ್ಯಂತ ಕಸದ ಸಮಸ್ಯೆ ಉದ್ಭವವಾಗುತ್ತದೆ. ಗುರುವಾರದಿಂದ ಸ್ಥಳೀಯರು ತ್ಯಾಜ್ಯ ಲಾರಿ ಕ್ವಾರಿ ಪ್ರದೇಶ ಪ್ರವೇಶಿದಂತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಅದರಿಂದ ನಗರದಲ್ಲಿ ಕಸದ ಸಮಸ್ಯೆ ಎದುರಾಗಲಿದೆ.

ಬುಧವಾರವೇ ಲಾರಿಗಳ ತಡೆ: ಬೆಳ್ಳಳ್ಳಿ ಕ್ವಾರಿಗೆ ತ್ಯಾಜ್ಯದ ಲಾರಿಗಳನ್ನು ಬಿಡಲು ಗುರುವಾರದಿಂದ ಪ್ರತಿಭಟನೆ ಆರಂಭಿಸಲಾಗುತ್ತಿದ್ದರೂ, ಬುಧವಾರವೇ ಸ್ಥಳೀಯರು ಕಸದ ಲಾರಿಗಳನ್ನು ತಡೆಯುವುದಕ್ಕೆ ಆರಂಭಿಸಿದ್ದಾರೆ. ಪ್ರತಿನಿತ್ಯ ಕ್ವಾರಿಗೆ 300 ಕಾಂಪ್ಯಾಕ್ಟರ್‌ ಮೂಲಕ ತ್ಯಾಜ್ಯ ತೆಗೆದುಕೊಂಡು ಹೋಗಿ ಸುರಿಯಾಲಾಗುತ್ತದೆ. ಅದರಂತೆ ಬುಧವಾರ 200 ಲಾರಿಗಳನ್ನಷ್ಟೇ ಕ್ವಾರಿಗೆ ಬಿಡಲಾಗಿದ್ದು, ಉಳಿದ ಲಾರಿಗಳ ಪ್ರವೇಶಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಡ್ಡಗಟ್ಟಿದ್ದಾರೆ. ಹೀಗಾಗಿ ಬೆಳ್ಳಳ್ಳಿ ಕ್ವಾರಿಗೆ ಹೋಗುವ ಮಾರ್ಗದಲ್ಲಿ ಲಾರಿಗಳು ಸಾಲುಗಟ್ಟಿನಿಂತಿವೆ.