ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ ಕಡಿಮೆಯಾಗಿದ್ದರೂ ಮಳೆಯ ಅವಾಂತರಗಳು ಮಾತ್ರ ಮುಂದುವರಿಯುತ್ತಿದೆ. 

ಮಡಿಕೇರಿ(ಜು.24): 2018ರ ಗುಡ್ಡ ಕುಸಿತ ಪ್ರದೇಶವಾದ ಮಡಿಕೇರಿ ತಾಲೂಕಿನ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಎಂಬಲ್ಲಿ ಈಗ ಮತ್ತೆ ಜಲಸ್ಫೋಟ ಸಂಭವಿಸಿ ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಯಾವುದೇ ಮನೆಗಳಿಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಇದರ ಕೆಳಭಾಗದಲ್ಲಿರುವ 15 ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇತ್ತೀಚೆಗಷ್ಟೇ ಜಿಲ್ಲೆಯ ಎರಡನೇ ಮೊಣ್ಣಂಗೇರಿ ಸಮೀಪದ ರಾಮಕೊಲ್ಲಿಯಲ್ಲಿ ಎರಡು ಬಾರಿ ಜಲಸ್ಫೋಟ ಸಂಭವಿಸಿತ್ತು. ಮತ್ತೆ ಜಲಸ್ಫೋಟವಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

Add Asianetnews Kannada as a Preferred SourcegooglePreferred

ಜರಿದ ಬೆಟ್ಟ: 

ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ ಕಡಿಮೆಯಾಗಿದ್ದರೂ ಮಳೆಯ ಅವಾಂತರಗಳು ಮಾತ್ರ ಮುಂದುವರಿಯುತ್ತಿದೆ. ಮಡಿಕೇರಿ ತಾಲೂಕಿನ ರಾಮಕೊಲ್ಲಿಯಲ್ಲಿ ಜಲಸ್ಫೋಟ, 2ನೇ ಮೊಣ್ಣಂಗೇರಿಯ ನಿಶಾನಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಮಾತ್ರವಲ್ಲ ಬೆಟ್ಟಜರಿದು ಹೋಗಿದೆ.

ಸತತ 6 ಗಂಟೆ ಕಾರ್ಯಾಚರಣೆ ಬಳಿಕ ಗ್ರಾಮಕ್ಕೆ ವಿದ್ಯುತ್‌ ಮರು ಸಂಪರ್ಕ

ಬೆಟ್ಟದ ಒಂದು ಭಾಗದ ಸಂಪೂರ್ಣ ಮಣ್ಣು ನೀರಿನೊಂದಿಗೆ ಜರಿದುಕೊಂಡು ಮದೆನಾಡಿನ ಮೂಲಕ ಜೋಡುಪಾಲದವರೆಗೆ ಕೆಸರು ಮಿಶ್ರಿತ ನೀರು ಹರಿದುಕೊಂಡು ಬಂದಿದೆ. ಜಿಲ್ಲೆಯಲ್ಲಿ ಜೋರಾಗಿ ಮಳೆಯಾದರೆ ಜಲಸ್ಫೋಟವಾದ ಬೆಟ್ಟ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಮಾತ್ರವಲ್ಲ ಹಾಗೆ ಕುಸಿದು ಬಂದ ಮಣ್ಣು ಜೋಡುಪಾಲದ ತನಕ ಬಂದು ರಾಷ್ಟ್ರೀಯ ಹೆದ್ದಾರಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. 2018ರಲ್ಲೇ ಈ ಬೆಟ್ಟಜರಿದ ಪರಿಣಾಮ ಜೋಡುಪಾಲದಲ್ಲಿ ಸಾಕಷ್ಟುಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಬೆಟ್ಟಜರಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದೆ. ಬೆಟ್ಟಕುಸಿತವಾಗುವ ಮೊದಲು ಬೆಟ್ಟಪ್ರದೇಶದಿಂದ ಜೋರಾದ ಶಬ್ದ ಕೇಳಿ ಬಂದಿದ್ದು, ಗ್ರಾಮದ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.