ಪಾವಗಡ: ಸಮಸ್ಯೆಗೆ ಸ್ಪಂದಿಸಲು ತಹಸೀಲ್ದಾರ್ ಮೀನಾಮೇಷ
ನಕಾಶೆಯಲ್ಲಿನ ದಾರಿಗೆ ಸುತ್ತ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕದ ಕಾಪೌಂಡ್ ನಿರ್ಮಿಸಿದ್ದ ಪರಿಣಾಮ ತಮ್ಮ ಜಮೀನಿಗೆ ಹೋಗಲು ರಸ್ತೆಯಿಲ್ಲ. ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ದಾಖಲೆ ಸಮೇತ ತಹಸೀಲ್ದಾರ್ ವರದರಾಜುಗೆ ದೂರು ಸಲ್ಲಿಸಿ ಎರಡು ತಿಂಗಳಾದರೂ ಸಮಸ್ಯೆ ಬಗೆಹರಿಸಲು ಮೀನಾಮೇಷ ಎಣಿಸುತ್ತಿದ್ದಾರೆಂದು ಜಮೀನು ಮಾಲೀಕ, ರೈತ, ತಾಲೂಕಿನ ವೆಂಕಟಮ್ಮನಹಳ್ಳಿಯ ಎಸ್.ಸಿ.ಚೌಡಪ್ಪ ಆಳಲು ತೋಡಿಕೊಂಡಿದ್ದಾರೆ.
![Pavagada Tehsildar Delay to respond to the problem snr Pavagada Tehsildar Delay to respond to the problem snr](https://static-ai.asianetnews.com/images/01h342q2mj8bsafsv8qjteaag6/01_363x203xt.jpg)
ಪಾವಗಡ : ನಕಾಶೆಯಲ್ಲಿನ ದಾರಿಗೆ ಸುತ್ತ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕದ ಕಾಪೌಂಡ್ ನಿರ್ಮಿಸಿದ್ದ ಪರಿಣಾಮ ತಮ್ಮ ಜಮೀನಿಗೆ ಹೋಗಲು ರಸ್ತೆಯಿಲ್ಲ. ಇದರಿಂದ ತೀವ್ರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ದಾಖಲೆ ಸಮೇತ ತಹಸೀಲ್ದಾರ್ ವರದರಾಜುಗೆ ದೂರು ಸಲ್ಲಿಸಿ ಎರಡು ತಿಂಗಳಾದರೂ ಸಮಸ್ಯೆ ಬಗೆಹರಿಸಲು ಮೀನಾಮೇಷ ಎಣಿಸುತ್ತಿದ್ದಾರೆಂದು ಜಮೀನು ಮಾಲೀಕ, ರೈತ, ತಾಲೂಕಿನ ವೆಂಕಟಮ್ಮನಹಳ್ಳಿಯ ಎಸ್.ಸಿ.ಚೌಡಪ್ಪ ಆಳಲು ತೋಡಿಕೊಂಡಿದ್ದಾರೆ.
ಈ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಸಂತ್ರಸ್ಥ ರೈತ ಎನ್.ಸಿ.ಚೌಡಪ್ಪ ಮಾತನಾಡಿ, ನಾನು ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ವೆಂಕಟಮ್ಮನಹಳ್ಳಿ ಗ್ರಾಮ ವಾಸಿಯಾಗಿದ್ದು, ಇಲ್ಲಿನ ವೆಂಕಟಮ್ಮನಹಳ್ಳಿ ಸಮೀಪದ ತಾಲೂಕಿನ ಕ್ಯಾತಗಾನಚೆರ್ಲು ಗ್ರಾಮದ ಸನಂ.146 ಮತ್ತು ಸನಂ 173 ರಲ್ಲಿ 17-20 ಗುಂಟೆ ಜಮೀನು ಹೊಂದಲಾಗಿದೆ. ಸದರಿ ಜಮೀನಿಗೆ ಹೋಗಲು ನಕಾಶೆಯ ಪ್ರಕಾರ ದಾರಿಯಿದೆ. ಇತ್ತೀಚೆಗೆ ಬೆಂಗಳೂರು ಮೂಲದ ಆಯನಾ ರಿನೂವೇಬಲ್ ಪವರ್ ಪ್ರವೈಟ್ ಲಿ ಎಂಬ ಸೋಲಾರ್ ಕಂಪನಿಯ ಮಾಲೀಕರು ವಿದ್ಯುತ್ ಉತ್ಪಾದನೆಗಾಗಿ ಗುತ್ತಿಗೆ ಆಧಾರದ ಮೇಲೆ ಇಲ್ಲಿನ ರೈತರ ಜಮೀನನ್ನು ವಶಕ್ಕೆ ಪಡೆಯುತ್ತಿದ್ದು, ನಮ್ಮ ಜಮೀನಿನ ಪಕ್ಕದ ರೈತರೊಬ್ಬರ ಜಮೀನನ್ನು ಗುತ್ತಿಗೆಯಾಧಾರದ ಮೇಲೆ ವಶಕ್ಕೆ ಪಡೆದಿದ್ದಾರೆ. ಇದಕ್ಕೆ ನಮ್ಮ ಅಡ್ಡಿಯಿಲ್ಲ, ಆದರೆ, ಸೋಲಾರ್ ಘಟಕ ನಿರ್ಮಾಣಕ್ಕಾಗಿ ನಕಾಶೆಯ ದಾರಿ ಸೇರಿ ಪಕ್ಕದ ಜಮೀನಿನ ಸುತ್ತ ತಂತಿ ಬೇಲಿಯ ಕಾಂಪೌಂಡು ನಿರ್ಮಿಸಿದ್ದ ಪರಿಣಾಮ ನಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದಾಗಿದೆ. ಸೋಲಾರ್ ಕಂಪನಿಯ ಮಾಲೀಕರನ್ನು ಕೇಳಿದರೆ ಸೋಲಾರ್ ಘಟಕದ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ನಿಮ್ಮ ಜಮೀನಿಗೆ ಹೋಗಲು ಜಮೀನಿನ ಪಕ್ಕದಲ್ಲಿ ರಸ್ತೆ ಬಿಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಇವರು ಬಿಡಬೇಕೆಂದಿರುವ ರಸ್ತೆ ಬಂಡೆ ಹಾಗೂ ಮಳೆ ನೀರು ನಿಲ್ಲುವ ತಗ್ಗು ಪ್ರದೇಶವಾಗಿದೆ. ಇದು ನಮಗೆ ಬೇಡ.ಇದರಿಂದ ನನಗೆ ಜಮೀನಿಗೆ ಓಡಾಡಲು ತೀವ್ರ ಅಡ್ಡಿಯಾಗುತ್ತಿದೆ. ಹೀಗಾಗಿ ನನ್ನ ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸೋಲಾರ್ ನಿರ್ಮಾಣದ ಕಾಂಪೌಂಡು ತೆರವುಗೊಳಿಸುವ ಮೂಲಕ ನಮ್ಮ ಜಮೀನಿಗೆ ಹೋಗಲು ನಕಾಶೆಯ ದಾರಿ ಬಿಡಿಸಿಕೊಡುವಂತೆ ಜಮೀನಿನ ದಾಖಲೆ ಸಮೇತ ತಹಸೀಲ್ದಾರ್ ಗೆ ಮನವಿ ಮಾಡಿದ್ದೇನೆ ಎಂದರು.
ದಾಖಲೆ ಸಲ್ಲಿಸಿ ಎರಡು ತಿಂಗಳಾದರೂ ಸಮಸ್ಯೆಗೆ ಸ್ಪಂದಿಸದೇ ಇಂದು, ನಾಳೆ ಎಂದು ಸತಾಯಿಸುತ್ತಿದ್ದಾರೆ. ಇದರಿಂದ ಜಮೀನಿಗೆ ಹೋಗಲು ತೊಂದರೆಯಾಗಿದ್ದು, ನೀರು ಹರಿಕೆಯಿಲ್ಲದೇ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗುತ್ತಿದೆ.ಇದರಿಂದ ಆತಂಕ ಎದುರಾಗಿದೆ, ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ನಿರ್ಣಯಕ್ಕೆ ತಾಲೂಕು ಆಡಳಿತವೇ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.