ಕಂಪ್ಲಿ ತಾಲ್ಲೂಕಿನ ದೇವಲಾಪುರ ಬಳಿ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾಗಿ, ರಸ್ತೆಯ ಮೇಲೆ ಎಣ್ಣೆ ಸೋರಿಕೆಯಾಗಿದೆ. ಈ ಎಣ್ಣೆಯನ್ನು ಸಂಗ್ರಹಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಳ್ಳಾರಿ: ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಲಾರಿಯಲ್ಲಿದ್ದ ಎಣ್ಣೆ ರಸ್ತೆ ಮೇಲೆ ಭಾರೀ ಪ್ರಮಾಣದಲ್ಲಿ ಸೋರಿಕೆಯಾದ ಘಟನೆ ಕಂಪ್ಲಿ ತಾಲ್ಲೂಕಿನ ದೇವಲಾಪುರ ಕಣಿವೆ ಮಾರೆಮ್ಮ ದೇವಸ್ಥಾನದ ಸಮೀಪ ನಡೆದಿದೆ. ಘಟನೆಯ ವೇಳೆ ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇದ್ದರೂ, ಅದೃಷ್ಟವಶಾತ್ ಇಬ್ಬರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆ ತಿರುವಿನಲ್ಲಿ ಲಾರಿ ಉರುಳಿ ಬಿದ್ದದ್ದು ಹೇಗೆ?

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ದೇವಲಾಪುರ ಕಣಿವೆ ಬಳಿ ಇರುವ ತೀವ್ರ ತಿರುವಿನಲ್ಲಿ ಲಾರಿ ವೇಗ ನಿಯಂತ್ರಣ ತಪ್ಪಿದ್ದು, ಏಕಾಏಕಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ಗೆ ಹಾನಿಯಾಗಿದ್ದು, ಅದರೊಳಗಿದ್ದ ಪಾಮ್ ಆಯಿಲ್ ರಸ್ತೆ ಹಾಗೂ ಪಕ್ಕದ ಜಾಗಗಳಿಗೆ ಹರಿದುಹೋಗಿದೆ.

ಸೋರಿಕೆಯಾದ ಆಯಿಲ್ ಸಂಗ್ರಹಕ್ಕೆ ಜನರ ಮುಗಿಬಿದ್ದಾಟ

ಲಾರಿಯಿಂದ ಎಣ್ಣೆ ಸೋರಿಕೆಯಾದ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ, ಮಹಿಳೆಯರು ಮತ್ತು ಪುರುಷರು ಬಕೆಟ್‌, ಪ್ಲಾಸ್ಟಿಕ್ ಬಿಂದಿಗೆ, ಡಬ್ಬಾ ಸೇರಿದಂತೆ ವಿವಿಧ ಪಾತ್ರೆಗಳನ್ನು ಹಿಡಿದು ಸ್ಥಳಕ್ಕೆ ಧಾವಿಸಿದರು. ರಸ್ತೆ ಮೇಲೆ ಹರಿದಿದ್ದ ಪಾಮ್ ಆಯಿಲ್ ಅನ್ನು ಸಂಗ್ರಹಿಸಿಕೊಳ್ಳಲು ಜನರು ಮುಗಿಬಿದ್ದ ದೃಶ್ಯಗಳು ಕಂಡುಬಂದವು.

ಪೊಲೀಸ್ ನಿಯಂತ್ರಣಕ್ಕೆ ಹರಸಾಹಸ

ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಸಾಕಷ್ಟು ಶ್ರಮವಹಿಸಬೇಕಾಯಿತು. ರಸ್ತೆ ಮೇಲೆ ಜನಸಂದಣಿ ಹೆಚ್ಚಾದ ಕಾರಣ ವಾಹನ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕ ಸುರಕ್ಷತೆ ಹಾಗೂ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸರು ಕೈಗೊಂಡರು.

ಯಾವುದೇ ಪ್ರಾಣಾಪಾಯವಿಲ್ಲ

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಸಾರ್ವಜನಿಕರು ಅಪಾಯವನ್ನು ಲೆಕ್ಕಿಸದೇ ರಸ್ತೆ ಮಧ್ಯೆ ನಿಂತು ಎಣ್ಣೆ ಸಂಗ್ರಹಿಸಿದುದು ಆತಂಕಕ್ಕೆ ಕಾರಣವಾಗಿದೆ.