ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದರ ನಡುವೆಯೇ ರೋಗಿಗಳಿಗೆ ಅಗತ್ಯವಿರುವ ಸಿಲಿಂಡರ್‌ಗಳನ್ನು ದ್ವಿಗುಣ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. 

ತುಮಕೂರು (ಏ.21): ಒಂದು ಕಡೆ ಆಕ್ಸಿಜನ್‌ ಸಿಗದೆ ಕೊರೋನಾ ಸೋಂಕಿತರು ರೌರವ ನರಕ ಅನುಭವಿಸುತ್ತಿರುವ ಬೆನ್ನಲ್ಲೇ ದುಪ್ಪಟ್ಟು ಬೆಲೆಗೆ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವ ಸೊಗಡು ಶಿವಣ್ಣ ಮಾಡಿದ್ದಾರೆ.

ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೃತಕ ಆಮ್ಲಜನಕದ ಅಭಾವವನ್ನು ಸೃಷ್ಟಿಸಲಾಗುತ್ತಿದ್ದು, ಕೋವಿಡ್‌ ಪರಿಸ್ಥಿತಿಯಲ್ಲಿ ಆಮ್ಲಜನಕದ ಸಿಲಿಂಡರ್‌ ಅನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೋವಿಡ್‌ ರೋಗಿಗಳಿಗೆ ಇರುವ ವೆಂಟಿಲೇಟರ್‌ ಹಾಸಿಗೆಗಳು ಸಾಕಾಗುವುದಿಲ್ಲ ಎಂದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಹೇಳಿದರು ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕೋವಿಡ್‌ಗಾಗಿ ಹೋಟೆಲ್‌ ಬಿಟ್ಟು ಕೊಡುವೆ:

ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಡಬಲ… ರೇಟಿಗೆ ಆಮ್ಲಜನಕ ಮಾರುತ್ತಿರುವವರ ವಿರುದ್ಧ ಶೇ.50 ಹಾಸಿಗೆಗಳನ್ನು ಮೀಸಲಿಡದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಕೋವಿಡ್‌ಗೆ ತುತ್ತಾದವರಿಗಾಗಿ ಹೋಟೆಲ… ಬಿಟ್ಟುಕೊಡುವುದಾಗಿ ತಿಳಿಸಿದ ಅವರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸುವಂತೆ ಆಗ್ರಹಿಸಿದರು.

ಕೋವಿಡ್‌ ನೆಪದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರಾಜಕೀಯ ಬಿಟ್ಟು ಪರಿಸ್ಥಿತಿ ಸುಧಾರಿಸಬೇಕಿದೆ. ಅಧಿಕಾರಿಗಳು ದುಡ್ಡು ಕೊಟ್ಟು ಬಂದಿದ್ದೀವಿ ಹೋಗಿ ಎನ್ನುತ್ತಾರೆ. ಹೀಗಾದರೆ ಜನರ ಕ್ಷೇಮ ನೋಡುವವರು ಯಾರು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು.

ಕೊರೊನಾಗೆ ಹೋಂ ಐಸೋಲೇಷನ್ ಅಸ್ತ್ರ, ಎಷ್ಟು ಪರಿಣಾಮಕಾರಿ..? .

ಭ್ರಷ್ಟಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ:

ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗುವುದಿಲ್ಲ, ಶಾಸಕರು, ಸಂಸದರು, ಸಚಿವರ ಶಿಫಾರಸ್ಸಿನ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆಯೇ ವಿನಾಃ ಸಾರ್ವಜನಿಕರ ಹಿತದೃಷ್ಟಿಯಿಂದಲ್ಲ, ಇಂತಹ ಭ್ರಷ್ಟಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಸೊಗಡು ಆಗ್ರಹಿಸಿದರು.

ಪಿಪಿಇ ಕಿಟ್‌ ನೀಡಿ: ನಗರದಲ್ಲಿರುವ ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಆರೋಗ್ಯ ಇಲಾಖೆ ಪಿಪಿಇ ಕಿಟ್‌ ನೀಡಿಲ್ಲ, ಇದರಿಂದಾಗಿ ಆತಂಕದಲ್ಲಿಯೇ ಅಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಿದೆ. ಎಲೆಕ್ಟ್ರಿಕ್‌ ಚಿತಾಗಾರದಲ್ಲಿ ಪ್ರಕರಣದಿಂದ ಸಾವನ್ನಪ್ಪಿದವರ ದಹನ ಮಾಡಲಾಗುತ್ತಿದ್ದು, ಕೋವಿಡ್‌ನಿಂದ ಸಾವನ್ನಪ್ಪಿದವರನ್ನು ದಫನ್‌ ಮಾಡುವವರಿಗೆ ಪಿಪಿಇ ಕಿಟ್‌ ನೀಡಲು ಕ್ರಮವಹಿಸಬೇಕು ಎಂದು ಹೇಳಿದರು.

ಸಿಬ್ಬಂದಿ ಸರಿಯಾಗಿ ಕಾರ‍್ಯನಿರ್ವಹಿಸುತ್ತಿಲ್ಲ:

ಕೋವಿಡ್‌ 2ನೇ ಅಲೆ ಹೆಚ್ಚಳವಾಗುತ್ತಿದ್ದು, ಕ್ವಾರಂಟೈನ್‌ ಆಗಿರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಾಲಿಕೆ ಸಿಬ್ಬಂದಿ ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ, ಪಡಿತರವನ್ನು ನೀಡದೆ ಇದ್ದರೆ ಹೇಗೆ? ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕ್ವಾರಂಟೈನ್‌ಗೆ ಒಳಗಾಗಿರುವವರಿಗೆ ಅಗತ್ಯ ವಸ್ತುಗಳನ್ನು ನೀಡಲು ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದರು.

ವಿದ್ಯಾವಂತರು ನಾಗರಿಕರಿಗೆ ಮಾರ್ಗದರ್ಶನ ಮಾಡಬೇಕು, ಕೋವಿಡ್‌ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಕೋವಿಡ್‌ಗೆ ಹೆದರದೇ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು, ಜನರಲ್ಲಿ ಅರಿವು ಮೂಡಿಸುವ ಮೂಲಕ ಸ್ವಯಂ ನಿಯಂತ್ರಣ ಸ್ಥಿತಿಯನ್ನು ಸೃಷ್ಠಿಸದೇ ಹೋದರೆ ಕೋವಿಡ್‌ ಅನ್ನು ನಿಯಂತ್ರಿಸಲು ಕಷ್ಟವಾಗಲಿದೆ.

- ಸೊಗಡು ಶಿವಣ್ಣ ಮಾಜಿ ಸಚಿವ

ಮಧುಗಿರಿ ಪೊಲೀಸರಿಂದ ಏಕಪಕ್ಷೀಯ ನಡೆ

ಮಧುಗಿರಿ ಬಿಜೆಪಿ ಮಂಡಲ ಅಧ್ಯಕ್ಷ ಮೂರ್ತಿ ಮಾತನಾಡಿ, ಮಧುಗಿರಿ ತಾಲೂಕಿನ ತಾಡಿ ಗ್ರಾಮದಲ್ಲಿ ಜಾತ್ರೆ ಸಮಯದಲ್ಲಿ ಉಂಟಾದ ಸಣ್ಣ ಸಮಸ್ಯೆಯಿಂದ ಹೊಡೆದಾಟವಾಗಿದ್ದು, ಅಲ್ಲಿನ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಂಡು ನಿರಾಪರಾಧಿ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ. ನಮ್ಮದೇ ಸರ್ಕಾರವಿದ್ದರೂ ನಮ್ಮ ಕಾರ್ಯಕರ್ತನಿಗೆ ನ್ಯಾಯ ಸಿಗದೇ ಇದ್ದರೇ ಹೇಗೆ? ಏಕಪಕ್ಷೀಯವಾಗಿ ದುವರ್ತನೆ ತೋರಿರುವ ಡಿವೈಎಸ್ಪಿ, ಸಬ್‌ಇನ್‌ಸ್ಪೆಕ್ಟರ್‌ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಲವ್‌ ಜಿಹಾದ್‌ ಹೆಚ್ಚಳ

ಬಿಜೆಪಿ ಉಪಾಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ಜಿಲ್ಲೆಯಲ್ಲಿ ಲವ್‌ ಜಿಹಾದ್‌ ಪ್ರಕರಣ ಹೆಚ್ಚುತ್ತಿವೆ, ವಾರದಲ್ಲಿಯೇ ಮೂರು ಪ್ರಕರಣ ನಡೆದಿದ್ದರು, ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ. ಹಿಂದೂ ಹೆಣ್ಣು ಮಕ್ಕಳು ದಾರಿ ತಪ್ಪಬಾರದು, ಲವ್‌ ಜಿಹಾದ್‌ ಪ್ರೇಮ ಪ್ರಕರಣವಲ್ಲ, 18-20 ವರ್ಷದ ಅಪ್ರಾಪ್ತ ಹುಡುಗಿಯರ ತಲೆ ಕೆಡಿಸಿ ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಹಿಂದೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ, 70 ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ. ಸೈಬರ್‌ ಕ್ರೈಂಗೆ ದೂರು ನೀಡಿದರು ಕ್ರಮ ಕೈಗೊಳ್ಳುತ್ತಿಲ್ಲ ಸಲ್ಮಾನ್‌ ಖಾನ್‌ ಹೆಸರಿನಲ್ಲಿ ಸಂಘ ಇದ್ಯೆಯಂತೆ ಅದರಲ್ಲಿ ಹುಡುಗರು ಇದೆಲ್ಲ ಮಾಡುತ್ತಿದ್ದಾರೆ, ಮುಸ್ಲಿಂರನ್ನು ಅಸಹ್ಯವಾಗಿ ನಡೆಸಿಕೊಂಡಿಲ್ಲ, ಇನ್ನತ್ತು ವರ್ಷದಲ್ಲಿ ಪಾಕಿಸ್ತಾನ ಕೇಳುವುದಿಲ್ಲ ನಮ್ಮನ್ನೇ ಬುರ್ಕಾ ಹಾಕಿಸಿಕೊಳ್ಳುತ್ತೀರಾ? ಮುಂಜಿ ಮಾಡಿಸಿಕೊಳ್ಳುತ್ತೀರಾ ಎಂದು ಕೇಳುತ್ತಾರೆ ಎಂದರು.