ಬೆಂಗಳೂರಿನ ಹೊರವಲಯದಲ್ಲಿರುವ ನಿವಾಸಿಗಳಿಗೆ ಮೂಲ ಸೌಕರ್ಯವೆಂಬುವುದು ಕನ್ನಡಿಯೊಳಗಿನ ಗಂಟು. ಅತ್ತ ಬಿಬಿಎಂಪಿಗೂ ಸೇರದೇ, ಇತ್ತ ಗ್ರಾಮಪಂಚಾಯಿತಿಯೂ ಸೌಲಭ್ಯ ಒದಗಿಸದೇ ತ್ರಿಶಂಕು ಸ್ಥಿತಿಯಲ್ಲಿವೆ ಕೆಲವು ಪ್ರದೇಶಗಳು. ಅಂಥವುಗಳಲ್ಲಿ ಒಂದಾದ ಕನಕಪುರ ರಸ್ತೆಯ ಶೋಭಾ ಹಿಲ್ವ್ಯೂ ನಿವಾಸಿಗಳಿಗೊಂದು ತುಸು ಸಂತೋಷದ ಸುದ್ದಿ. ಬಿಎಂಟಿಸಿ ಬಸ್ ಸಂಚಾರ ಆರಂಭಿಸಿದ್ದು, ನಿವಾಸಿಗಳು ಸಂಭ್ರಮಿಸಿದ್ದು ಹೀಗೆ...
ಬೆಂಗಳೂರು (ಜು.06): ಮುಖ್ಯರಸ್ತೆಯೊಂದಿಗೆ ಸಂಪರ್ಕ ಸಾಧಿಸಲು ಹರಸಾಹಸ ಪಡುತ್ತಿದ್ದ ಕನಕಪುರ ರಸ್ತೆಯ ನೈಸ್ ರಸ್ತೆ ಸಮೀಪದಲ್ಲಿರುವ ಶೋಭಾ ಹಿಲ್ವ್ಯೂ ನಿವಾಸಿಗಳಿಗೊಂದು ಸಂತೋಷದ ಸುದ್ದಿ. ಬಿಎಂಟಿಸಿ ಹೊಸ ಬಸ್ ಸಂಪರ್ಕ ಕಲ್ಪಿಸಿದ್ದು, ಬೆಳಗ್ಗೆ ಹಾಗೂ ಸಂಜೆ ಸಂಚರಿಸಲಿದೆ.
ಜು.5ರ ಬೆಳಗ್ಗೆ 8.30ಕ್ಕೆ ಮೊದಲು ಸಂಚಾರ ಆರಂಭಿಸಿದ ಬಸ್ನಲ್ಲಿ ನಿವಾಸಿಗಳು ಪ್ರಯಾಣಿಸಿ ಸಂತೋಷ ವ್ಯಕ್ತಪಡಿಸಿದರು. ಯಾವುದೇ ಆಟೋ ಹಾಗೂ ಕ್ಯಾಬ್ ಸಿಗದೇ, ಮುಖ್ಯ ರಸ್ತೆಗೆ ತೆರಳಲು ಸುಮಾರು 2 ಕಿ.ಮೀ.ನಡೆಯುತ್ತಿದ್ದ ನಿವಾಸಿಗಳಿಗೆ ಈ ಬಸ್ ಸಂಚಾರದಿಂದ ಅನುಕೂಲವಾಗಲಿದೆ. ಇದೇ ಪ್ರದೇಶದಲ್ಲಿರುವ ಹರ ವಿಜಯ ಹಾಗೂ ಬನಶಂಕರಿ 6ನೇ ಹಂತದ ಬಡಾವಣೆ ನಿವಾಸಿಗಳಿಗೂ ಇದು ಸಂತೋಷದ ಸುದ್ದಿ.
ಬೆಳಗ್ಗೆ 8.25 ಹಾಗೂ ಸಂಜೆ 7.10ಕ್ಕೆ ಶೋಭಾ ಹಿಲ್ವ್ಯೂನಿಂದ ಹೊರಡುವ ಈ ಬಸ್, ಬೆಳಗ್ಗೆ 7.35 ಹಾಗೂ ಸಂಜೆ 6.25ಕ್ಕೆ ಬನಶಂಕರಿ ಬಸ್ ನಿಲ್ದಾಣದಿಂದ ತೆರಳಲಿದೆ. ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ. ಹಾಗೂ ಬಸ್ ವ್ಯವಸ್ಥೆ ಕಲ್ಪಿಸಿದ ಬಿಎಂಟಿಸಿ ಹಾಗೂ ರಾಜ್ಯಸಭಾ ಸಂಸದ ಜಿ.ಸಿ.ಚಂದ್ರಶೇಖರ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.
;