ವರ್ಷವಿಡಿ ದೇಶವ್ಯಾಪಿ ರಾಮ ಸೇವಾ ಅಭಿಯಾನ. ಅಭಿಯಾಯನಕ್ಕೆ ಪ್ರಧಾನಿ ಮೋದಿ ಚಾಲನೆ, ರಾಮ ದೇವರಿಗೆ ಸೇವೆಗಳ ಸಮರ್ಪಣೆ ಎಂದ  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ.

ಉಡುಪಿ (ಜ.15): 2024ರ ಜನವರಿಯಲ್ಲಿ ಅಯೋಧ್ಯೆ ರಾಮದೇವರ ಪ್ರತಿಷ್ಠಾ ಕಾರ್ಯ ನೆರವೇರಲಿದ್ದು, ಇದರಂಗವಾಗಿ ಈ ವರ್ಷವಿಡಿ ದೇಶವ್ಯಾಪಿ ರಾಮ ದೇವರ ಹೆಸರಿನಲ್ಲಿ ವೈವಿಧ ಸೇವಾ ಕೈಂಕರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ಕೆ ಪ್ರಧಾನಿ ಮೋದಿ ಚಾಲನೆ ನೀಡುವ ನಿರೀಕ್ಷೆ ಇದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ವ್‌ನ ವಿಶ್ವಸ್ಥರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Add Asianetnews Kannada as a Preferred SourcegooglePreferred

ಭಾನುವಾರ ಪೇಜಾವರ ಮಠದಲ್ಲಿ ಅಯೋಧ್ಯೆ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೋದಿ ಅವರು ರಾಮ ಸೇವಾ ಸಂಕಲ್ಪದಲ್ಲಿ ದೇಶದ ಜನತೆ ತೊಡಗಿಸಿಕೊಳ್ಳಲು ಕರೆ ನೀಡಲಿದ್ದಾರೆ. ದೇಶಾದ್ಯಂತ ನಡೆಯುವ ಸೇವಾ ಚಟುವಟಿಕೆಗಳನ್ನು ಕ್ರೋಡೀಕರಿಸುವ ಆ್ಯಪ್‌ ಒಂದನ್ನು ರೂಪಿಸಲಾಗುತ್ತದೆ. ರಾಮಮಂದಿರ ನಿರ್ಮಾಣವಾದ ಬಳಿಕ ದೇಶಕ್ಕಾಗಿ ನಡೆಸಿದ ಈ ಎಲ್ಲ ಸೇವೆಗಳನ್ನು ರಾಮದೇವರಿಗೆ ಸಮರ್ಪಣೆ ಮಾಡಲಾಗುತ್ತದೆ ಎಂದರು.

ದೇವ ಭಕ್ತಿ ಹಾಗೂ ದೇಶ ಭಕ್ತಿ ಬೇರೆ ಬೇರೆಯಲ್ಲ. ಹುಂಡಿಯಲ್ಲಿ ಹಾಕಿದ ಕಾಣಿಕೆಯನ್ನು ಸರ್ಕಾರ ಅನ್ಯಕಾರ್ಯಗಳಿಗೆ ವಿನಿಯೋಗಿಸುತ್ತದೆ ಎಂದು ದೂರುವ ಬದಲು ಸಮಾಜದ ದೀನ, ದುರ್ಬಲರಿಗೆ, ಅಶಕ್ತರಿಗೆ ಸಹಾಯ ಮಾಡಬೇಕು. ಈ ಮೂಲಕ ದೇವರಿಗೆ ಸೇವೆ ಸಲ್ಲಿಸಬೇಕು. ಮನೆ ಇಲ್ಲದವರಿಗೆ ಸೂರು, ಅನಾರೋಗ್ಯಪೀಡಿತರಿಗೆ ನೆರವು, ಬಡ ವಿದ್ಯಾರ್ಥಿ- ಗೋವುಗಳ ದತ್ತು, ರಾಮಾಯಣದ ಉಪನ್ಯಾಸ ಮುಂತಾದ ಸೇವಾ ಚಟುವಟಿಕೆಗಳನ್ನು ಈ ಅಭಿಯಾನದಲ್ಲಿ ನಡೆಸಬಹುದು ಎಂದು ಹೇಳಿದರು.

ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಶಾಸಕ ಕೆ. ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಡಿಯಾಳಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್‌ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ: ರಾಘವೇಶ್ವರ ಸ್ವಾಮೀಜಿ

ಚೂರ್ಣೋತ್ಸವದೊಂದಿಗೆ ಸಪ್ತೋತ್ಸವ ಸಂಪನ್ನ
ಇಲ್ಲಿನ ಶ್ರೀಕೃಷ್ಣಮಠದಲ್ಲಿ ಮಕರಸಂಕ್ರಮಣದ ಮರುದಿನ, ಭಾನುವಾರ ವಾರ್ಷಿಕ ಸಪ್ತೋತ್ಸವ ವೈಭವದ ಚೂರ್ಣೋತ್ಸವ (ಹಗಲು ತೇರು ಉತ್ಸವ)ದೊಂದಿಗೆ ಸಂಪನ್ನಗೊಂಡಿತು.

ಕಳೆದ ಸಪ್ತ ದಿನಗಳಿಂದ ಕೃಷ್ಣಮಠದ ರಥಬೀದಿಯಲ್ಲಿ ರಾತ್ರಿ ಉತ್ಸವಗಳು ನಡೆಯುತ್ತಿದ್ದು, ಶನಿವಾರ ಮಕರ ಸಂಕ್ರಮಣದ ಪ್ರಯುಕ್ತ ಮೂರು ತೇರು ಉತ್ಸವವು ಸಂಭ್ರಮದಿಂದ ನಡೆಯಿತು. ಅದರಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.

ಮರುದಿನ ಭಾನುವಾರ ಸಂಪ್ರದಾಯದಂತೆ ಬೆಳಗ್ಗೆ ಹಗಲು ತೇರು ಉತ್ಸವ ನಡೆಯಿತು. ಇದರಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಲಿಮಾರು ಮಠದ ಹಿರಿಯ ಶ್ರೀ ವಿದ್ಯಾಧೀಶ ತೀರ್ಥರು, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಉತ್ಸವದಲ್ಲಿ ಭಾಗವಹಿಸಿದರು.

ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಹಿನ್ನೆಲೆ; ಮುಡಿ ಕೊಟ್ಟ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ

ಸ್ವಾಮೀಜಿಯವರು ಕೃಷ್ಣನ ಉತ್ಸವಮೂರ್ತಿಯನ್ನು ರಥಾರೋಹಣ ಮಾಡಿ ಪೂಜೆ ಸಲ್ಲಿಸಿದರು ಮತ್ತು ರಥದಿಂದ ಭಕ್ತರಿಗೆ ಪ್ರಸಾದಗಳನ್ನು ವಿತರಿಸಿದರು, ನಂತರ ಅಷ್ಟಮಠಾಧೀಶರು ರಥದ ಹಗ್ಗವನ್ನು ಹಿಡಿದು ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದರು.

ಉತ್ಸವದ ನಂತರ ಅಷ್ಟಮಠಾಧೀಶರು ಮಧ್ವಸರೋವರದಲ್ಲಿ ಅವಭೃತ ಸ್ನಾನ ನಡೆಸುವುದರೊಂದಿಗೆ ಈ ಸಾಲಿನ ಸಪ್ತೋತ್ಸವವು ಸಂಪನ್ನಗೊಂಡಿತು. ರಥೋತ್ಸವದ ಅಂಗವಾಗಿ ಮಧ್ಯಾಹ್ನ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಪ್ರಸಾದ ಸಂತರ್ಪಣೆ ನಡೆಯಿತು.