ಬಳ್ಳಾರಿಯ ಶ್ರೀಧರಗಡ್ಡೆ ಗ್ರಾಮದಲ್ಲಿ, ಪ್ರಾಂಶುಪಾಲರೊಬ್ಬರು ವೃದ್ಧೆಯ ಶವದ ಮುಂದೆ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿದ್ದಾರೆ. ರಾಷ್ಟ್ರಗೀತೆಗೆ ಅಪಮಾನವೆಸಗಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಳ್ಳಾರಿ (ಮಾ.13): ವೃದ್ಧೆಯೊಬ್ಬರ ಮೃತದೇಹದ ಮುಂದೆ ಪ್ರಾಂಶುಪಾಲರು ತಮ್ಮ ಶಾಲಾ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ರಾಷ್ಟ್ರಗೀತೆ ಹಾಡಿಸಿ ಯಡವಟ್ಟು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶವದ ಮುಂದೆ ಜನಗಣಮನ!

ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಜನವರಿ 28 ರಂದು ಸಣ್ಣಕ್ಕಿ ಕಾಮಾಕ್ಷಮ್ಮ ಎಂಬುವವರು ನಿಧನರಾಗಿದ್ದರು. ಈ ವೇಳೆ ಗ್ರಾಮದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷರೂ ಹಾಗೂ ಮುಖ್ಯ ಶಿಕ್ಷಕರೂ ಆಗಿರುವ ಎಂ. ಹನುಮಂತಪ್ಪ, ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಶವದ ಮುಂದೆ ಕರೆತಂದು ನಿಲ್ಲಿಸಿದ್ದಾರೆ. ಅಂತಿಮ ದರ್ಶನದ ವೇಳೆ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿರುವುದು ಈಗ ವಿವಾದದ ಕಿಡಿ ಹೊತ್ತಿಸಿದೆ.

ನಿಯಮಗಳ ಗಾಳಿಗೆ ತೂರಿ ಎಡವಟ್ಟು

ರಾಷ್ಟ್ರಗೀತೆಯನ್ನು ಯಾವಾಗ, ಎಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹಾಡಬೇಕು ಎಂಬ ನಿರ್ದಿಷ್ಟ ನಿಯಮಗಳಿವೆ. ರಾಷ್ಟ್ರೀಯ ಹಬ್ಬಗಳು ಅಥವಾ ಅಧಿಕೃತ ಕಾರ್ಯಕ್ರಮಗಳಲ್ಲಿ ಗೌರವಪೂರ್ವಕವಾಗಿ ಹಾಡಬೇಕಾದ ರಾಷ್ಟ್ರಗೀತೆಯನ್ನು, ಶವ ಸಂಸ್ಕಾರದ ವೇಳೆ ಹಾಡಿಸುವ ಮೂಲಕ ಪ್ರಾಂಶುಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 'ಪ್ರಾಂಶುಪಾಲರು ತಮಗೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ' ಎಂದು ಗ್ರಾಮಸ್ಥರು ದೂರಿದ್ದಾರೆ.

ಜಿಲ್ಲಾಡಳಿತಕ್ಕೆ ದೂರು ನೀಡಿದ ಗ್ರಾಮಸ್ಥರು

ಜನವರಿಯಲ್ಲಿ ನಡೆದ ಈ ಘಟನೆ ಫೆಬ್ರವರಿ 16 ರಂದು ಜಿಲ್ಲಾಡಳಿತದ ಮೆಟ್ಟಿಲೇರಿದೆ. ಗ್ರಾಮಸ್ಥರು ಬಳ್ಳಾರಿ ಜಿಲ್ಲಾಧಿಕಾರಿ (DC), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಅನ್ವಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡ ಬೆನ್ನಲ್ಲೇ, ಪ್ರಾಂಶುಪಾಲ ಹನುಮಂತಪ್ಪ ಅವರು ಇಲಾಖೆಯ ಮುಂದೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.